Asianet Suvarna News Asianet Suvarna News

ಹುಬ್ಬಳ್ಳಿ: ರೈಲ್ವೆ ನೌಕರರಿಗೆ ಬಂಪರ್‌ ಕೊಡುಗೆ..!

*   ರೈಲ್ವೆ ನೌಕರರಿಗೆ ಬೋನಸ್‌: ಎಸ್‌ಡಬ್ಲೂಆರ್‌ನಲ್ಲಿ 36 ಸಾವಿರ ನೌಕರರಿಗೆ ಲಾಭ
*  ಗಂಗಾವತಿ ಹಾಗೂ ಕಜ್ಜಿಡೋಣಿಯಲ್ಲಿ ರೈಲ್ವೆ ಗುಡ್‌ಶೆಡ್‌ ನಿರ್ಮಾಣ
*  ಆದಾಯ ಮತ್ತು ಸೇವೆಯಲ್ಲಿ ನೈರುತ್ಯ ರೈಲ್ವೆಗೆ ದೇಶದಲ್ಲೇ 4 ಸ್ಥಾನ 
 

Bonus for South Western Railway Employees grg
Author
Bengaluru, First Published Oct 7, 2021, 10:57 AM IST

ಹುಬ್ಬಳ್ಳಿ(ಅ.07):  ಕೇಂದ್ರ ಸರಕಾರ ರೈಲ್ವೆ ಅಧಿಕಾರಿಗಳೇತರ ನೌಕರರಿಗೆ ಪ್ರಸಕ್ತ ವರ್ಷ ಬೋನಸ್‌ ನೀಡಲು ನಿರ್ಧರಿಸಿದ್ದು, ನೈರುತ್ಯ ರೈಲ್ವೆ ವಲಯದಲ್ಲಿ 36,330  ಉದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ ಎಂದು ನೈರುತ್ಯ ರೈಲ್ವೆ ವಲಯದ(South Western Railway) ಮಹಾಪ್ರಬಂಧಕ ಸಂಜೀವ್‌ ಕಿಶೋರ್‌ ಹೇಳಿದ್ದಾರೆ.  

ರೈಲ್‌ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸರಾಸರಿ 78 ದಿನಗಳಿಗೆ ಆಧರಿಸಿ ಬೋನಸ್‌(Bonus) ಒದಗಿಸಲಾಗುತ್ತಿದ್ದು, ಗರಿಷ್ಠ 17951 ಸಿಗಲಿದೆ. ಒಟ್ಟು 65.20 ಕೋಟಿ ಬೋನಸ್‌ ಹಣವನ್ನು ದಸರಾ ಹಬ್ಬದಲ್ಲೇ(Dasara Festival) ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಟ್ರ್ಯಾಕ್‌ ನಿರ್ವಹಣೆ, ಚಾಲಕರು ಮತ್ತು ಸಿಬ್ಬಂದಿ, ಸ್ಟೇಷನ್‌ ಮಾಸ್ಟರ್‌, ಮೇಲ್ವಿಚಾರಕರು, ತಂತ್ರಜ್ಞ, ತಂತ್ರಜ್ಞ ಸಹಾಯಕರು, ನಿಯಂತ್ರಕ, ಪಾಯಿಂಟ್ಸ್‌ ಮೆನ್‌, ಮಿನಿಸ್ಟ್ರಿಯಲ್‌ ಸಿಬ್ಬಂದಿ ಮತ್ತು ಇತರ ಗ್ರೂಪ್‌ ಸಿ ಸಿಬ್ಬಂದಿಗಳು ಬೋನಸ್‌ಗೆ ಅರ್ಹತೆ ಹೊಂದಿದ್ದಾರೆ.

ಕೊರೋನಾ(Coronavirus) ಸಂಕಷ್ಟದ ಮಧ್ಯೆಯೂ ಸರಕಾರ ಬೋನಸ್‌ ವಿತರಣೆಗೆ ಮುಂದಾಗಿರುವುದು ನೌಕರರಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇದರ ಜತೆಗೆ ನಗದು ಹರಿವು ಹೆಚ್ಚಳಗೊಂಡು ಪೂರಕ ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು.

ಸರಕು ಸಾಗಾಟದಿಂದ ನೈಋುತ್ಯ ರೈಲ್ವೆಗೆ 2.03 ಕೋಟಿ ಆದಾಯ

ಜೋಡಿ ಮಾರ್ಗ:

ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೋಡಿ ಮಾರ್ಗ ಯೋಜನೆಗಳನ್ನು 2022 ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ ಅವರು, ದಾವಣಗೆರೆ-ತುಮಕೂರು ಮಧ್ಯೆ ಭೂ ಸ್ವಾಧೀನ ನಡೆಯಬೇಕಿದೆ. ಇದು ಪೂರ್ಣವಾದ ಬಳಿಕ ಹೈ ಸ್ಪೀಡ್‌ ರೈಲು ಓಡಿಸಲಾಗುವುದು ಎಂದು ತಿಳಿಸಿದರು. ಮುಂದಿನ ಮೂರು ವರ್ಷದೊಳಗೆ ವಲಯ ವ್ಯಾಪ್ತಿಯಲ್ಲಿ ರೈಲು ಮಾರ್ಗ ವಿದ್ಯುದೀಕರಣ ಯೋಜನೆ ಮುಗಿಯಲಿದೆ ಎಂದು ಸ್ಪಷ್ಟಪಡಿಸಿದರು.

ಆದಾಯ ಮತ್ತು ಸೇವೆಯಲ್ಲಿ ನೈರುತ್ಯ ರೈಲ್ವೆ ದೇಶದಲ್ಲೇ 4 ಸ್ಥಾನದಲ್ಲಿದೆ. ನೆರೆ ರಾಜ್ಯಗಳು ಸೇರಿ ಇತರೆಡೆಗಳಲ್ಲಿ ಕೊರೋನಾ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣಕ್ಕೆ ಪೂರ್ಣ ಪ್ರಮಾಣದ ಪ್ರಯಾಣಿಕ ರೈಲು ಓಡಿಸಲು ಸಾಧ್ಯವಾಗುತ್ತಿಲ್ಲ. ಹಂತ ಹಂತವಾಗಿ ಓಡಿಸಲಾಗುವುದು ಎಂದರು.

ಈ ವೇಳೆ ಹಾಜರಿದ್ದ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ಮಾತನಾಡಿ, ಗಂಗಾವತಿ ಹಾಗೂ ಕಜ್ಜಿಡೋಣಿಯಲ್ಲಿ ರೈಲ್ವೆ ಗುಡ್‌ಶೆಡ್‌ ಗಳನ್ನು ನಿರ್ಮಿಸಲಾಗಿದ್ದು, ಗಂಗಾವತಿಯಿಂದ ಅಕ್ಕಿ ಹಾಗೂ ಕಜ್ಜಿಡೋಣಿಯಲ್ಲಿ ಸಿಮೆಂಟ್‌ ಹಾಗೂ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಸೇರಿದಂತೆ ಹಲವರಿದ್ದರು.
 

Follow Us:
Download App:
  • android
  • ios