ಸದ್ಯಕ್ಕೆ ಬಸ್‌ ಪ್ರಯಾಣ ದರ ಏರಿಕೆ ಬೇಡ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಸೂಚಿಸಿದ ಸಿಎಂ ಯಡಿಯೂರಪ್ಪ| ಕೋವಿಡ್‌ನಿಂದ ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತ| ಆದಾಯ ಇಲ್ಲದೆ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಬಿಎಂಟಿಸಿ| ಸಾರಿಗೆ ನಿಗಮಕ್ಕೆ ನುಂಗಲಾರದ ತುತ್ತಾದ ಡೀಸೆಲ್‌ ದರ ಏರಿಕೆ| 

ಬೆಂಗಳೂರು(ಮಾ.17): ಬಸ್‌ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಳ ಮಾಡುವಂತೆ ಬಿಎಂಟಿಸಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡಿಲ್ಲ.

ಈಗಾಗಲೇ ತೈಲ, ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಿದರೆ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ. ಹೀಗಾಗಿ ಸದ್ಯಕ್ಕೆ ಬಸ್‌ ಪ್ರಯಾಣ ದರ ಏರಿಕೆ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೇ ಕಾರ್ಡಲ್ಲಿ ಮೆಟ್ರೋ, ಬಿಎಂಟಿಸಿ ಬಸಲ್ಲಿ ಸಂಚರಿಸಿ

ಕೋವಿಡ್‌ನಿಂದ ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಸಾರಿಗೆ ಆದಾಯ ಇಲ್ಲದೆ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ನಡುವೆ ಡೀಸೆಲ್‌ ದರ ಏರಿಕೆ ನಿಗಮಕ್ಕೆ ನುಂಗಲಾರದ ತುತ್ತಾಗಿದೆ. ನೌಕರರಿಗೆ ಮಾಸಿಕ ವೇತನ ನೀಡಲು ಪರದಾಡುವ ಸ್ಥಿತಿಯಲ್ಲಿರುವ ಬಿಎಂಟಿಸಿ ನಿಗಮ, ಪ್ರಯಾಣ ದರ ಏರಿಕೆ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸುವ ನಿರೀಕ್ಷೆಯಲ್ಲಿತ್ತು.