ಕಾವೇರಿ ನದಿ ತೀರದಲ್ಲಿ ವಶೀಕರಣ, ವಾಮಾಚಾರ ಪೂಜೆ
ಕಾವೇರಿ ನದಿ ತೀರದಲ್ಲಿ ಮಾಟ ಮಂತ್ರ, ವಾಮಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಪ್ರಾಣಿಗಳನ್ನು ಬಲಿ ಕೊಟ್ಟು ವಿವಿಧ ಪೂಜೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿದೆ.
ಶ್ರೀರಂಗಪಟ್ಟಣ (ಸೆ.16): ಪಟ್ಟಣದ ಹೊರವಲಯದ ಪುಣ್ಯ ಕ್ಷೇತ್ರ ಪಶ್ಚಿಮವಾಹಿನಿಯ ಕಾವೇರಿ ನದಿ ತೀರದಲ್ಲಿ ವಶೀಕರಣ, ವಾಮಾಚಾರಂತಹ ಪೂಜೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಪಶ್ಚಿಮ ದಿಕ್ಕಿಗೆ ಹರಿಯುವ ಪವಿತ್ರ ಕಾವೇರಿ ನದಿ ಬಳಿ ಅಸ್ತಿ ವಿಸರ್ಜಿಸಿದರೆ ಸ್ವರ್ಗ ಪ್ರಾಪ್ತಿಯಾಗಲಿದೆ ಎಂಬ ವಿಶೇಷ ನಂಬಿಕೆಯೊಂದಿಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಗಣ್ಯಾತಿ ಗಣ್ಯರ ಅಸ್ತಿಗಳನ್ನು ಇಲ್ಲಿ ವಿಸರ್ಜಿಸುವುದು ವಾಡಿಕೆ. ಈಗ ಪಿತೃಪಕ್ಷ ಸಮೀಪಿಸಿದ್ದರಿಂದ ಈ ಸ್ಥಳದಲ್ಲಿ ಪಿಂಡ ಪ್ರದಾನ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿದೆ. ಇದೇ ಸಮಯವನ್ನು ಸದುಪಯೋಗಿಸಿಕೊಂಡ ಕೆಲ ದುಷ್ಕರ್ಮಿಗಳು ಈ ಜಾಗದಲ್ಲಿ ವಾಮಾಚಾರ ನಡೆಸುತ್ತಿರುವ ಬಗ್ಗೆ ಕುರುಹುಗಳು ಲಭ್ಯವಾಗಿದೆ.
ಕೆಆರ್ಎಸ್ : ನಿರ್ಬಂಧ ಸಡಿಲಿಸಿದ ಜಿಲ್ಲಾಡಳಿತ ...
ಕುರಿ, ಕೋಳಿ ಹಾಗೂ ಹಂದಿಗಳನ್ನು ಬಲಿ ಕೊಟ್ಟು ಮಾಟಮಂತ್ರದಂತಹ ಅಪಾಯಕಾರಿ ಪೂಜೆಗಳು ಕದ್ದು-ಮುಚ್ಚಿ ನಡೆಯುತ್ತಿದೆ. ವಶೀಕರಣದಂತಹ ಅಪಾಯಕಾರಿ ದಂಧೆಯೂ ನಡೆಯುತ್ತಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸ್ಥಳದಲ್ಲಿ ಮಹಾತ್ಮ ಗಾಂಧಿ, ಜವಹರ್ ಲಾಲ್ ನೆಹರು, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ರವರಂತಹ ಗಣ್ಯಾತಿ ಗಣ್ಯರ ಅಸ್ಥಿಗಳನ್ನು ವಿಸರ್ಜಿಸಲಾಗಿದೆ. ಇಂತಹ ಪವಿತ್ರ ಸ್ಥಳದಲ್ಲಿ ಕೆಲ ದಂಧೆಕೋರರು ಅಮಾಯಕ ಮುಗ್ಧ ಹುಡುಗಿಯರನ್ನು ಕರೆತಂದು ವಶೀಕರಣದಂತಹ ಸಮಾಜಕ್ಕೆ ಮಾರಕವಾದ ವಾಮಾಚಾರದ ಪೂಜೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.