ಆಡಳಿತದಲ್ಲಿರುವ ಪಕ್ಷ ಬೆಂಬಲಿಸುವುದು ಸಹಜ : ಜೆಡಿಎಸ್ ಶಾಸಕ
ಆಡಳಿತದಲ್ಲಿರುವ ಪಕ್ಷ ಬೆಂಬಲಿಸುವುದು ಸಹಜ ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದ್ದಾರೆ.
ಮದ್ದೂರು (ನ.11): ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿರೀಕ್ಷಿತ. ಮತದಾರರು ಉಪಚುನಾವಣೆಗಳಲ್ಲಿ ಆಡಳಿತರೂಢ ಪಕ್ಷವನ್ನು ಬೆಂಬಲಿಸುವುದು ಸಹಜ ಎಂದು ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಗೆಲುವಿಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಗಳಲ್ಲಿ ಕ್ಷೇತ್ರದ ಮತದಾರರು ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ರೂಢ ಪಕ್ಷವನ್ನು ಬೆಂಬಲಿಸುವುದು ಸಾಮಾನ್ಯ. ಹೀಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದರು.
ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ ...
ಉಪ ಚುನಾವಣೆಗಳಲ್ಲಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದು ಒಪ್ಪಲು ಸಾಧ್ಯವಿಲ್ಲ. ಕೆ.ಆರ್ .ಪೇಟೆ ನಂತರ ಈಗ ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆಗಳು ಹಣದ ಬಲದ ಮೇಲೆ ನಡೆದ ಚುನಾವಣೆಗಳಾಗಿವೆ. ಬಿಜೆಪಿಯ ಇಂತಹ ಆಟಗಳಿಗೆ ಮುಂದೊಂದು ದಿನ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.