ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪಂಚಮಸಾಲಿ ‌ಸಮಾಜ ಸೇರಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಅದನ್ನು ಜಾರಿ ಮಾಡಬೇಕಷ್ಟೆ. ಹಿಂದೆಯೂ ನಮ್ಮ ಹೋರಾಟಕ್ಕೆ ಬಿಎಸ್‌ವೈ, ವಿಜಯೇಂದ್ರ ವಿರೋಧ ಮಾಡಿದ್ದರು. ಹೀಗಾಗಿ ಮೀಸಲಾತಿಗೆ ವಿರೋಧಿಸಿದ ವಿಜಯೇಂದ್ರ, ಬಿಎಸ್‌ವೈರನ್ನು ನಮ್ಮ ಸಮಾಜ ಒಪ್ಪಲ್ಲ ಎಂದು ಮತ್ತೆ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ 

ಬೆಳಗಾವಿ(ಡಿ.12): ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವೆ. ಡಿ.13ರಂದು ನಡೆಯುವ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪಂಚಮಸಾಲಿ ‌ಸಮಾಜ ಸೇರಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಅದನ್ನು ಜಾರಿ ಮಾಡಬೇಕಷ್ಟೆ. ಹಿಂದೆಯೂ ನಮ್ಮ ಹೋರಾಟಕ್ಕೆ ಬಿಎಸ್‌ವೈ, ವಿಜಯೇಂದ್ರ ವಿರೋಧ ಮಾಡಿದ್ದರು. ಹೀಗಾಗಿ ಮೀಸಲಾತಿಗೆ ವಿರೋಧಿಸಿದ ವಿಜಯೇಂದ್ರ, ಬಿಎಸ್‌ವೈರನ್ನು ನಮ್ಮ ಸಮಾಜ ಒಪ್ಪಲ್ಲ ಎಂದು ಮತ್ತೆ ವಾಗ್ದಾಳಿ ನಡೆಸಿದರು.

Add Asianetnews Kannada as a Preferred SourcegooglePreferred

ನಮ್ಮ ಸಮಾಜದ ಕಾಂಗ್ರೆಸ್ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಹೋರಾಟದ ನೇತೃತ್ವದಿಂದ ದೂರ ಇದ್ದಿದ್ದು ನಿಜ. ಆದರೆ, ಕಾಂಗ್ರೆಸ್ ಶಾಸಕರು ಒಂದು ದಿನವೂ ನಮ್ಮ ಮೀಸಲಾತಿ ವಿಚಾರದಲ್ಲಿ ಮಾತನಾಡಿಲ್ಲ. ಕಾಂಗ್ರೆಸ್‌ನ ನಮ್ಮ ಸಮಾಜದ ಶಾಸಕರು ನಮ್ಮ ಸರ್ಕಾರದ ನಿರ್ಧಾರ ಪ್ರತಿಯನ್ನು ಹರಿದು ಹಾಕಿದರು. ಶೇ.15 ರಷ್ಟು ಮೀಸಲಾತಿ ಬೇಕು ಎಂದು ನಮ್ಮ ಸರ್ಕಾರದ ನಿರ್ಧಾರದ ಪ್ರತಿ ಹರಿದ್ದಿದ್ದಕ್ಕೆ ಬೇಜಾರ ಆಗಿ ಹೋರಾಟದಿಂದ ದೂರ ಉಳಿದಿದ್ದು ನಿಜ ಎಂದರು.

ಜಾರಕಿಹೊಳಿ ಸಾಮ್ರಾಜ್ಯ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಬಾಲಚಂದ್ರ ಗುಡುಗು

ನಮ್ಮ ಸಮಾಜದ ಸಚಿವರು, ಕಾಂಗ್ರೆಸ್‌ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಾರೆಂದು ಸುಮ್ಮನಿದ್ದೆ. ಸ್ವಾಮೀಜಿಗಳೇ ಖುದ್ದಾಗಿ ನನ್ನ ಭೇಟಿಗೆ ಆಗಮಿಸಿದ್ದಾರೆ, ಅವರಿಗೆ ಗೌರವ ನೀಡಿ ಮತ್ತೇ ಹೋರಾಟಕ್ಕೆ ಇಳಿಯುತ್ತೇನೆ. ಮೀಸಲಾತಿ ಸಿಗುವವರೆಗೆ ಸಕ್ರಿಯವಾಗಿ ಹೋರಾಟದಲ್ಲಿರುತ್ತೇನೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ನೀಡಿರುವ ಮೀಸಲಾತಿ ಜಾರಿಗೆ ತರಲಿ. ಈ ಮೀಸಲಾತಿ ಜಾರಿಯಾದ ಬಳಿಕ ಎಲ್ಲ ಲಿಂಗಾಯತ ‌ಸಮಾಜಕ್ಕೆ ಕೇಂದ್ರದ ಒಬಿಸಿ ಮೀಸಲಾತಿಗೆ ಹೋರಾಡೋಣ. ಈ ಸಂಬಂಧ ಪಕ್ಷಾತೀತವಾಗಿ ಕೇಂದ್ರ ಬಳಿ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರದ ಒಬಿಸಿ ಘೋಷಿಸುತ್ತೇವೆ ಎಂದರು.

ಪಂಚಮಸಾಲಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವಿಚಾರದಲ್ಲಿ ಯತ್ನಾಳ ಅವರಿಗೆ ಬೇಸರ ಆಗಿದ್ದು ನಿಜ. ಹೀಗಾಗಿಯೇ ಅವರು ಕಳೆದ ತಿಂಗಳಿನಿಂದ ಹೋರಾಟದಿಂದ ದೂರ ಉಳಿದಿದ್ದರು ಎಂದು ಹೇಳಿದರು.

‘ಜಮೀರ್‌ ಗದ್ದಲ’ದ ನಡುವೆಯೇ ಚರ್ಚೆಇಲ್ಲದೇ 5 ಮಸೂದೆ ಅಂಗೀಕಾರ !

ಕಾಂಗ್ರೆಸ್ ಶಾಸಕರು ಸಚಿವರು ಭೇಟಿಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುತ್ತಿಲ್ಲ. ಎರಡು ಬಾರಿ ಸಭೆ ಮಾಡುತ್ತೇವೆ ಎಂದು ಅಂತ ಹೇಳಿ ಸಿಎಂ ದೂರ ಉಳಿದಿದ್ದಾರೆ. ಹಲವು ಕಡೆ ನಮ್ಮ ಸಮಾಜದ ಪ್ರತಿಭಟನೆ ಆದಾಗ ಯತ್ನಾಳ ಅವರನ್ನು ನಮ್ಮ‌ ಸಮಾಜದ ಜನ ಕೇಳುತ್ತಿದ್ದರು. ಹೀಗಾಗಿ ಯತ್ನಾಳ ಭೇಟಿಗೆ ಆಗಮಿಸಿ ಅವರು ಬರಬೇಕು ಎಂದು ಹೇಳಿದ್ದೇವೆ. ಅವರು ಸಹ ಅದಕ್ಕೆ ಸಹಮತ ಸೂಚಿಸಿದ್ದಾರೆ. ಅವರು ಹೋರಾಟಕ್ಕೆ ಬರುತ್ತಾರೆ ಎಂದರು.

ಡಿ.13ರಂದು ಚನ್ನಮ್ಮ ವೃತ್ತದಲ್ಲಿ ಸಾವಿರಾರು ಜನರ ನೇತೃತ್ವದಲ್ಲಿ ಪ್ರತಿಭಟನೆ ಆಗುತ್ತದೆ. ಸಿಎಂ ಬಂದು ನಮ್ಮ ಅಳಲು‌ ಕೇಳಬೇಕು. ಇಲ್ಲವಾದರೆ ನಾವೇ ಸುವರ್ಣ ವಿಧಾನಸೌಧದತ್ತ ಹೋಗುತ್ತೇವೆ. ಸರ್ಕಾರ ಏನು ಬೇಕಾದರೂ ಮಾಡಲಿ ಎಂದ ಸ್ವಾಮೀಜಿ ಹೇಳಿದರು.