‘10 ಕೋಟಿ ಪಡೆದು ಜೆಡಿಎಸ್ ಶಾಸಕ ಆಪರೇಷನ್ ಕಮಲಕ್ಕೆ ತುತ್ತು’
ಜೆಡಿಎಸ್ ಶಾಸಕರೋರ್ವರು ಆಪರೇಷನ್ ಕಮಲಕ್ಕೆ ತುತ್ತಾಗಿದ್ದಾರೆ ಎಂದು ಕೈ ನಾಯಕರೋರ್ವರು ಹೇಳಿದ್ದಾರೆ.
ಕೆ.ಆರ್.ಪೇಟೆ : ಲೋಕಸಭೆ ಚುನಾವಣೆ ಮೇ 23ರ ಫಲಿತಾಂಶದ ನಂತರ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಲಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನಾರಾಯಣಗೌಡ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿ 10 ಕೋಟಿ ಪಡೆದುಕೊಂಡಿದ್ದಾರೆ. ಮೇ 23ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಬಿಜೆಪಿಯಿಂದ ಬಾಕಿ ಹಣ ಕೊಟ್ಟರೆ ಮುಂಬೈಗೆ ಹೋಗುತ್ತೇನೆ ಎಂದು ಬಿಜೆಪಿಯವರಿಗೆ ಹೇಳಿದ್ದಾರೆ ಎಂದು ನನಗೆ ಪರಿಚಿತ ಬಿಜೆಪಿ ಆತ್ಮೀಯರಿಂದಲೇ ಮಾಹಿತಿ ಬಂದಿದೆ ಎಂದರು.
ರಾಜ್ಯ ಬಜೆಚ್ ವೇಳೆ ಮುಂಬೈನಲ್ಲಿ ಆರೋಗ್ಯ ಸರಿಯಿಲ್ಲ ಎಂದು ಆಸ್ಪತ್ರೆಯಲ್ಲಿ ಮಲಗಿ ನಾಟಕವಾಡುವ ಮೂಲಕ ಕ್ಷೇತ್ರದ ಜನತೆಯ ಮಾನ-ಮರ್ಯಾದೆಯನ್ನು ನಾರಾಯಣಗೌಡ ಹರಾಜು ಹಾಕಿದ್ದಾರೆ ಎಂದು ಇದೇ ವೇಳೆ ಚಂದ್ರಶೇಖರ್ ಕಿಡಿಕಾರಿದರು.