ಎಚ್.ಡಿ.ರೇವಣ್ಣಗೂ ಬಂದಿತ್ತಾ BJP ಆಫರ್ ?
ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣಗೂ ಆಪರೇಷನ್ ಕಮಲದ ಆಫರ್ ನೀಡಲಾಗಿತ್ತಾ? ಈ ಬಗ್ಗೆ ಬಿಜೆಪಿ ಮುಖಂಡರು ಹೇಳೋದೇನು?
ಸಕಲೇಶಪುರ [ಸೆ.08] : ಆಸೆ ಇಲ್ಲವೆಂದ ಮೇಲೆ ಚುನಾವಣೆ ಮುಗಿದ ಬಳಿಕ ಏಕೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ರು ಎಂದು ಕಾನೂನು ಹಾಗೂ ಸಣ್ಣನೀರಾವರಿ ಸಚಿವ ಮಾಧುಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದರು.
ಸಕಲೇಶಪುರದಲ್ಲಿ ಮಾತನಾಡಿದ ಅವರು ಕೆಎಂಎಫ್ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಮುಖ್ಯಮಂತ್ರಿಗಳಿಗೂ ಕೆಎಂಎಫ್ ಚುನಾವಣೆಗೆ ಯಾವುದೇ ಸಂಬಂಧವಿಲ್ಲ. ಸಿಎಂ ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡುವ ವೇಳೆ ರೇವಣ್ಣ ಪ್ಲಾನ್ ಮಾಡಿ ಕೆಎಂಎಫ್ ಚುನಾವಣೆ ನಡೆಸೋಕೆ ಹೋಗಿದ್ರು. ಅವರ ಮಟ್ಟಕ್ಕೆ ನಾವು ಇಳಿದಿಲ್ಲ ಎಂದರು. ರೇವಣ್ಣ ಅವರು ಅವರ ಇಷ್ಟಬಂದ ಹಾಗೆ ಚುನಾವಣೆ ಮಾಡೋಕೆ ಹೋಗಿದ್ದರು. ಅದಕ್ಕೆ ತಡೆಮಾಡಿ ಚುನಾವಣೆ ಮಾಡಲಾಗಿದೆ ಅಷ್ಟೇ, ಇದರಲ್ಲಿ ಏನು ಪಿತೂರಿ ಇದೆ ಎಂದು ಪ್ರಶ್ನಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೇವಣ್ಣಗೆ ಯಾವ ಆಫರ್ ಮಾಡಿಲ್ಲ : ರಾಜ್ಯದಲ್ಲಿ ಈ ಹಿಂದಿನ ಸಮ್ಮಿಶ್ರ ಸರ್ಕಾರವನ್ನು ನಾವು ಬೀಳಿಸಿಲ್ಲ, ಅವರು ಬೀಳಿಸಿಕೊಂಡ್ರು ನಾವು ಹಿಡಿದುಕೊಂಡಿದ್ದೀವಿ ಅಷ್ಟೇ. ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಗಲಾಟೆ ಮಾಡಿಕೊಂಡು ಓಡಿಹೋಗಿದ್ದರು. ಅಸಮಾಧಾನ ಇದ್ದವರ ನೆರವನ್ನು ಬಳಸಿಕೊಂಡಿದ್ದೀವಿ ಅಷ್ಟೇ. ಸರ್ಕಾರ ಬೀಳಿಸೋ ಪ್ರಯತ್ನ ಮಾಡಿದ್ದೀವಿ ಅನ್ನೋದು ಶುದ್ಧ ಸುಳ್ಳು ಎಂದ ಅವರು, ಜೆಡಿಎಸ್ ನಾಯಕ ರೇವಣ್ಣಗೂ ಆಪರೇಷನ್ ಕಮಲದ ಆಮಿಷ ಒಡ್ಡಲಾಗಿತ್ತು ಎಂಬ ಆರೋಪಕ್ಕೆ ಉತ್ತರಿಸಿದ ಮಾಧುಸ್ವಾಮಿ, ಅಂತಹ ಪರಿಸ್ಥಿತಿ ನಮಗೆ ಬಂದಿಲ್ಲ. ರೇವಣ್ಣಗೆ ನಾವು ಯಾವುದೇ ಆಫರ್ ಮಾಡಿಲ್ಲ ಎಂದರು.