*  ಡಾಂಬರೀಕರಣಕ್ಕಾಗಿ ರಸ್ತೆ ಮೇಲ್ಭಾಗ ತೆಗೆದು ಹಾಗೇ ಬಿಟ್ಟ ಪಾಲಿಕೆ*  ಹೆಚ್ಚಿನ ಸಂಖ್ಯೆಯ ವಾಹನ ಸಂಚರಿಸುವ ಈ ರಸ್ತೆಯ ಮೇಲ್ಪದರವನ್ನು ತೆಗೆಯಲಾಗಿದೆ*  ಕಳೆದ 10 ದಿನಗಳಿಂದ ಪ್ರತಿ ನಿತ್ಯ ಒಂದಲ್ಲಾ ಒಂದು ಅಪಘಾತ

ಬೆಂಗಳೂರು(ಜು.01): ವಿಜಯನಗರದಿಂದ ಅತ್ತಿಗುಪ್ಪೆವರೆಗಿನ ಮೆಟ್ರೋ ಮಾರ್ಗದ ರಸ್ತೆಯ ಮರು ಡಾಂಬರೀಕರಣಕ್ಕೆ ಮೇಲ್ಪದರ ಕಿತ್ತು ಸುಮಾರು 10 ದಿನ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ವಾಹನ ಸವಾರರು ಪ್ರಾಣ ಭಯದಲ್ಲಿ ಸಂಚಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Add Asianetnews Kannada as a Preferred SourcegooglePreferred

ವಿಜಯನಗರ ಮೆಟ್ರೋ ಕಾರಿಡಾರ್‌ನಲ್ಲಿ (ವಿಜಯ ನಗರದಿಂದ ಅತ್ತಿಗುಪ್ಪೆ) ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಿಂದ ಮರು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ವಾಹನ ಸಂಚರಿಸುವ ಈ ರಸ್ತೆಯ ಮೇಲ್ಪದರವನ್ನು ತೆಗೆಯಲಾಗಿದೆ. ಇದರಿಂದ ವಾಹನ ಸವಾರರು ಅದರಲೂ ಬೈಕ್‌ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. ಕಳೆದ 10 ದಿನಗಳಿಂದ ಪ್ರತಿ ನಿತ್ಯ ಒಂದಲ್ಲಾ ಒಂದು ಅಪಘಾತ ಉಂಟಾಗುತ್ತಿವೆ. ಹಾಗಾಗಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನೈಸ್‌ ರಸ್ತೆಯ ಟೋಲ್‌ ಶೇ.17 ಹೆಚ್ಚಳ?

ಕಳೆದ ಒಂದು ತಿಂಗಳ ಹಿಂದೆ ಯಶವಂತಪುರ ಮುಖ್ಯ ರಸ್ತೆಯಲ್ಲಿ ಇದೇ ರೀತಿ ರಸ್ತೆಯ ಮೇಲ್ಪದರವನ್ನು ತೆಗೆಯಲಾಗಿತ್ತು. ಈ ವೇಳೆ ಬೈಕ್‌ ಸವಾರ ಆಯಾ ತಪ್ಪಿ ಬಿದ್ದು, ಹಿಂಬದಿಯಿಂದ ಬಂದ ಭಾರೀ ವಾಹನ ಹರಿದು ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಘಟನೆ ನಡೆದಿತ್ತು. ಆ ರೀತಿ ಅಹಿತಕರ ಘಟನೆಗೆ ಅವಕಾಶ ನೀಡದೇ ತ್ವರಿತವಾಗಿ ರಸ್ತೆ ಮರು ಡಾಂಬರೀಕರಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌, ರಸ್ತೆಯ ಮರು ಡಾಂಬರೀಕರಣಕ್ಕೆ ಮೇಲ್ಪದರ ತೆಗೆಯಲಾಗಿದ್ದು, ಇನ್ನೊಂದು ವಾರದಲ್ಲಿ ಮರು ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.