Asianet Suvarna News Asianet Suvarna News

ವಿಜಯಪುರ: ಬ್ರಿಟಿಷರ ವಿರುದ್ಧ ಹೋರಾಡಿದ ಸೇನಾನಿಗೆ ಬೃಹತ್‌ ದೇಗುಲ, ನನಸಾದ ಭಕ್ತರ ಕನಸು..!

ಈ ವಿಶೇಷ ದೇಗುಲ ನಿರ್ಮಾಣವಾಗಿರೋದು ನಮ್ಮದೆ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ. ಸರಿ ಸುಮಾರು 50 ಕೋಟಿ ವೆಚ್ಚದಲ್ಲಿ ಕೆಂಪು ಕಲ್ಲಿನಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ. ವಿಶೇಷ ಅಂದ್ರೆ ಭಕ್ತರ 35 ವರ್ಷಗಳ ಸತತ ಪ್ರಯತ್ನದಿಂದ ಬಂಗಾರದ ಬಣ್ಣದಲ್ಲಿ ಗೋಲ್ಡರ್ ಟೆಂಪಲ್ ರೀತಿಯಲ್ಲಿ ನಿರ್ಮಾಣವಾಗಿ ನಿಂತಿದೆ. ಸ್ವಾತಂತ್ರ್ಯ ಹೋರಾಟಗಾರನ ಈ ದೇಗುಲ ಜೂ.16 ರಂದು ಲೋಕಾರ್ಪಣೆಗೊಳ್ಳಲಿದೆ.

Big Temple Build to Freedom Fighter in Vijayapura grg
Author
First Published Jun 14, 2024, 12:43 PM IST | Last Updated Jun 14, 2024, 12:43 PM IST

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ(ಜೂ.14):  ದೇವರಿಗೆ ದೊಡ್ಡ-ದೊಡ್ಡ ದೇಗುಲಗಳನ್ನ ಕಟ್ಟೋದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ದೇಶದಲ್ಲಿ ಮೊದಲ ಬಾರಿ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿಗೆ ಬೃಹತ್‌ ದೇಗುಲ ನಿರ್ಮಿಸಲಾಗಿದೆ. ಈ ವಿಶೇಷ ದೇಗುಲ ನಿರ್ಮಾಣವಾಗಿರೋದು ನಮ್ಮದೆ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ. ಸರಿ ಸುಮಾರು 50 ಕೋಟಿ ವೆಚ್ಚದಲ್ಲಿ ಕೆಂಪು ಕಲ್ಲಿನಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ. ವಿಶೇಷ ಅಂದ್ರೆ ಭಕ್ತರ 35 ವರ್ಷಗಳ ಸತತ ಪ್ರಯತ್ನದಿಂದ ಬಂಗಾರದ ಬಣ್ಣದಲ್ಲಿ ಗೋಲ್ಡರ್ ಟೆಂಪಲ್ ರೀತಿಯಲ್ಲಿ ನಿರ್ಮಾಣವಾಗಿ ನಿಂತಿದೆ. ಸ್ವಾತಂತ್ರ್ಯ ಹೋರಾಟಗಾರನ ಈ ದೇಗುಲ ಜೂ.16 ರಂದು ಲೋಕಾರ್ಪಣೆಗೊಳ್ಳಲಿದೆ.

ಸ್ವಾತಂತ್ರ್ಯ ಸೇನಾನಿಗೆ ದೇಶದಲ್ಲೇ ಮೊದಲ ಬೃಹತ್ ದೇಗುಲ..!

ಹೌದು, ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿ, ದೇಶದ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಸ್ವಾತಂತ್ರ್ಯ ಸೇನಾನಿಗೆ ಬೃಹತ್‌ ದೇಗುಲ ನಿರ್ಮಾಣವಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಮುರುಗೋಡು ಮಹಾದೇವಪ್ಪನವರಿಗೆ ಕೋಟಿ-ಕೋಟಿ ಬೆಲೆ ಬಾಳುವ ದೇಗುಲ ಕಟ್ಟಲಾಗಿದೆ. ವಿಶೇಷ ಅಂದರೆ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನಿಗೆ ಇಷ್ಟೊಂದು ದೊಡ್ಡ ದೇಗುಲ ನಿರ್ಮಾಣವಾಗಿದ್ದು ದೇಶದಲ್ಲಿ ಇದೆ ಮೊದಲು ಎನ್ನಲಾಗಿದೆ. ಈ ದೇಗುಲ ಇದೆ ಜೂನ್‌ ೧೬ ರಂದು ಲೋಕಾರ್ಪನೆಯಾಗಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ, ರಾಜ್ಯ ಸರ್ಕಾರದ ಕ್ಯಾಬಿನೆಟ್‌ ಸಚಿವರು, ಶಾಸಕರು ಸಾಕ್ಷಿಯಾಗಲಿದ್ದಾರೆ.

ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮುರುಗೋಡು ಮಹಾದೇವಪ್ಪ..!

ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಮುರುಗೋಡು ಮಹಾದೇವಪ್ಪನವರು ಮಠಾಧೀಶರು ಆಗಿದ್ದರು.  ಗುರುಪರಂಪರೆಯ ಮಠವಾಗಿರುವ ಶ್ರೀಕ್ಷೇತ್ರ ಇಂಚಗೇರಿ ಮಠದ ಮಠಾಧೀಶರಾಗಿದ್ದ ಮಹಾದೇವಪ್ಪನವರು ಮಾಧವಾನಂದ ಪ್ರಭುಜಿಗಳು ಎಂದು ಕರೆಯಿಸಿಕೊಳ್ತಿದ್ರು. ತಮ್ಮ ಪವಾಡಗಳಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡಿದ್ದರು. ಇಂಥಹ ಮಠಾಧೀಶರು ತಮ್ಮ ಗುರುಗಳಾದ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ ಆದೇಶದಂತೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ರು. ತಮ್ಮ ಜೊತೆಗೆ ಇಂಚಗೇರಿ ಸಾಂಪ್ರದಾಯದ ಸಾವಿರಾರು ಭಕ್ತರನ್ನ ಜೊತೆಗೂಡಿಸಿಕೊಂಡು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿದ್ದರು. ಸಶಸ್ತ್ರವಾಗಿ ಬ್ರಿಟಿಷ ವಿರುದ್ಧ ಹೋರಾಡಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು.

30 ವರ್ಷಗಳ ಬಳಿಕ ನನಸಾಯ್ತು ಭಕ್ತರ ಕನಸು..!

ಮಠಾಧೀಶರಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಮಹಾದೇವರ ದೇಗುಲ ನಿರ್ಮಾಣಕ್ಕೆ ಅವರ ಭಕ್ತರು, ಅನುಯಾಯಿಗಳು ಸಂಕಲ್ಪ ಮಾಡಿದ್ದರು. ಮಾಧವಾನಂದ ಪ್ರಭುಜಿಗಳ ಬಳಿಕ ಮಠದ ಪೀಠಕ್ಕೆ ಆಗಮಿಸಿದ ಸದ್ಗುರು ಗುರುಪುತ್ರೇಶ್ವರ ಮಹಾರಾಜರು 35 ವರ್ಷಗಳ ಹಿಂದೆಯೆ ಭಕ್ತರ ಆಶಯದಂತೆ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದರು. ಬೃಹತ್‌ ದೇಗುಲದ ಕನಸು ಹೊತ್ತು 1994 ರಲ್ಲಿ ಮಹಾದೇವರ ದೇಗುಲ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಅಲ್ಲಿಂದ ಇಡೀ ದೇಗುಲ ಪೂರ್ಣಗೊಳ್ಳಲು ಬರೊಬ್ಬರಿ 30 ವರ್ಷಗಳೆ ಕಳೆದಿವೆ. 30 ವರ್ಷಗಳ ಬಳಿಕ ಕನಸು ನನಸಾಗಿದೆ.

ಬ್ರಿಟಿಷರ ಹುಟ್ಟಡಗಿಸಲು ಬಂದೂಕು ಫ್ಯಾಕ್ಟರಿ ತೆರೆದಿದ್ದ ಮಹಾದೇವರು..!

ಅಚ್ಚರಿಯ ವಿಚಾರ ಅಂದ್ರೆ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸದ್ಗುರು ಮಾಧವಾನಂದ ಪ್ರಭುಜಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 2 ಬಂದೂಕು ಕಾರ್ಖಾನೆಗಳನ್ನ ತೆರೆದಿದ್ದರು. ಮಹಾರಾಷ್ಟ್ರದ ಸೊನ್ಯಾಳ ಹಾಗೂ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕೊಟ್ಟಲಗಿಯಲ್ಲಿ ಎರಡು ಬಂದೂಕು ಫ್ಯಾಕ್ಟರಿ ತೆರೆದು ಮುಂಬೈ ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿ ಬ್ರಿಟಿಷರ ಹುಟ್ಟಡಗಿಸಿದ್ದರು. ಅಂದಿನ ಬ್ರಿಟಿಷರ ಹೊರ್ತಿ, ಸಾವಳಗಿ, ಜಮಖಂಡಿ, ಹುಲಕೋಟಿ ಠಾಣೆಗಳಿಗೆ ಬೆಂಕಿ ಹಚ್ಚಿ ಸಾಹಸ ಮೆರೆದಿದ್ದರು. ಈ ಮೂಲಕ ಬ್ರಿಟಿಷರು ದೇಶ ಬಿಡಲು ಅನಿವಾರ್ಯತೆಯ ಸೃಷ್ಟಿ ಮಾಡಿದ್ದರು.

ಗಾಂಧಿಜೀ, ಸುಭಾಷಚಂದ್ರ ಭೋಸ್‌ ಜೊತೆಗೆ ನಂಟು, ಗುಪ್ತಸಭೆ..!

ತಮ್ಮ 15ನೇ ವಯಸ್ಸಿನಲ್ಲೆ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ ಮಾಧವಾನಂದ ಪ್ರಭುಜಿಗಳು ಮಹಾರಾಷ್ಟ್ರ ಗಡಿ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ವಿಜಯಪುರ-ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ಕೊಪ್ಪಳ, ದಾವಣಗೇರೆ ಸೇರಿದಂತೆ ಹಲವೆಡೆ ಅತ್ಯುಗ್ರವಾಗಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ್ದರು. ಇವ್ರ ಉಗ್ರ ಹೋರಾಟ ಕಂಡ ಸುಭಾಷಚಂದ್ರ ಭೋಸರು ಹುಬ್ಬಳ್ಳಿಯ ಗಿರೀಶ್‌ ಆಶ್ರಮದಲ್ಲಿ ಮಾಧವಾನಂದ ಪ್ರಭುಜುಗಳ ಜೊತೆಗೆ ಗುಪ್ತ ಸಭೆ ನಡೆಸಿದ್ದರು. ಮುಂದೆ ಗಾಂಧಿಜೀಯವರ ಅಹಿಂಸಾ ಚಳುವಳಿಗೆ ಬೆಂಬಲಿಸಿದ್ದ ಮಾಧವಾನಂದ ಪ್ರಭುಜಿಗಳು ಬಂದೂಕು, ಮದ್ದು-ಗುಂಡುಗಳ ಬಿಟ್ಟು ಶಾಂತಿಯುತ ಹೋರಾಟದಲ್ಲು ಮುಂಚುನಿಯಲ್ಲಿದ್ದರು. ಆಗ ಗಾಂಧಿಜೀಯವರ ಜೊತೆಗು ಉತ್ತಮ ಭಾಂದವ್ಯ ಹೊಂದಿದ್ದರು.

ಗೋವುಗಳ ಉಳುವಿಗಾಗಿ ದೇವರ ಹೋರಾಟ..!

ಗೋವುಗಳ ಮೇಲೆ ಅಪಾರ ಭಕ್ತಿ ಪ್ರೀತಿಯನ್ನ ಹೊಂದಿದ್ದ ಮಾಧವಾನಂದ ಪ್ರಭುಜಿಗಳು ಗೋ ಹತ್ಯಾ ಬಂಧಿ ಚಳುವಳಿ ನಡೆಸಿದ್ದರು. ಗೋ ಹತ್ಯೆ ಪಾಪ, ಗೋಹತ್ಯೆ ಮಾಡಿದವರನ್ನ ಬಂಧಿಸಬೇಕು ಎಂದು ಆಗಿನ ಕಾಲದಲ್ಲೆ ಹೋರಾಟ, ಚಳುವಳಿ, ಪಾದಯಾತ್ರೆಗಳನ್ನ ಮಾಡಿದ್ರು ಅನ್ನೋದು ವಿಶೇಷ, ಈಗಲೂ ಇಂಚಗೇರಿ ಮಠದಲ್ಲಿ ಜೈ ಜಗತ್...‌ ಜೈ ಗೋಮಾತಾ ಅನ್ನೋ ಘೋಷಣೆಗಳು ಮೊಳಗೋದು ಇದಕ್ಕೆ ತಾಜಾ ಉದಾಹರಣೆ..!

ವಿಜಯಪುರ ಜಿಲ್ಲೆಯಲ್ಲಿ ವರುಣನ ಆರ್ಭಟ: ಬೈಕ್ ಹೊತ್ತು ಹಳ್ಳ ದಾಟಿದ ಗ್ರಾಮಸ್ಥರು..!

25 ಸಾವಿರಕ್ಕು ಅಧಿಕ ಅಂತರ್‌ ಜಾತಿ-ಧರ್ಮಿಯ ವಿವಾಹ..!

ಮಹಾದೇವರು ತಮ್ಮ ಜೀವಿತಾವಧಿಯಲ್ಲಿ ಜಾತಿ-ಧರ್ಮಗಳ ಸಂಕೋಲೆಯನ್ನ ಕಿತ್ತು ಬಿಸಾಕಿದ್ದರು. ಇಂಚಗೇರಿ ಮಠದಲ್ಲಿ ೨೫ ಸಾವಿರಕ್ಕು ಅಧಿಕ ಅಂತರ್‌ ಧರ್ಮಿಯ, ಅಂತರ್‌ ಜಾತಿಯ ಮದುವೆಗಳನ್ನ ಮಾಡಿಸಿದ್ದರು. ಸ್ವತಃ ತಮ್ಮ ಮೊಮ್ಮಗಳು ಕಾಳಮ್ಮದೇವಿಯನ್ನ ಮುಸ್ಲಿಂ ಧರ್ಮಿಯ ಆದಮ್‌ ಅನ್ನೋರಿಗೆ ಮದುವೆ ಮಾಡಿ ಕೊಟ್ಟು ಸೌಹಾರ್ದತೆಗೆ ಸಾಕ್ಷಿರೂಪವಾಗಿದ್ದರು.

ಮಹಾದೇವರ ದೇಗುಲದ ವೈಶಿಷ್ಟ್ಯತೆ ಏನು..!

ಇಡೀ ದೇಗುಲ ನಿರ್ಮಾಣವಾಗಲು ೫೦ ಕೋಟಿಗು ಅಧಿಕ ಖರ್ಚಾಗಿದೆ. ವಿಶೇಷ ಅಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾದೇವರ ದೇಗುಲ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೆ ಧನ ಸಹಾಯ ಪಡೆದಿಲ್ಲ. ಬದಲಿಗೆ ಇಂಚಗೇರಿ ಸಾಂಪ್ರದಾಯದ ಭಕ್ತರೇ ಹಣ ಸೇರಿಸಿ ೩೦ ವರ್ಷಗಳ ಬಳಿಕ ದೇಗುಲ ನಿರ್ಮಾಣ ಮಾಡಿದ್ದಾರೆ. ತಮಿಳಿನಾಡು ಶೈಲಿಯಲ್ಲಿ ನಿರ್ಮಾಣವಾದ ದೇಗುಲ ಎತ್ತರ ೧೦೧ ಅಡಿಗಳಿಷ್ಟಿದೆ. ಸಧ್ಯ ಸ್ಥಾಪನೆಯಾಗಲಿರುವ ಕಳಶವೇ ೭.೯ ಅಡಿಗಳಷ್ಟು ಎತ್ತರವಾಗಿದೆ. ಉತ್ತರ ಭಾರತದಿಂದ ವಿಶೇಷ ಕಲ್ಲುಗಳನ್ನ ತಂದು ಮಹಾದೇವರ ದೇಗುಲ ನಿರ್ಮಾಣ ಮಾಡಲಾಗಿದೆ. ದೇಗುಲದ ಸುತ್ತಲೂ ಶ್ರೀಕೃಷ್ಣ, ಮಹಾಭಾರತದ ಕೆಲ ಸಂದರ್ಭಗಳನ್ನ ಚಿತ್ರಿಸಲಾಗಿದೆ. ಶೇಷಶಯನನಾಗಿರುವ ವಿಷ್ಣು, ಲಕ್ಷ್ಮೀ ದೇವಿಯ ಚಿತ್ರಣ, ೧೨ ಜೋತಿರ್ಲಿಂಗ, ಇಂಚಗೇರಿ ಸಾಂಪ್ರದಾಯದ ಮೂಲಕ ಸತ್ಪುಪುರುಷರು ಕನ್ನೇರಿಯ ಕಾಡಸಿದ್ದೇಶ್ವರ ಮಹಾರಾಜರು, ಗುರುಲಿಂಗಜಂಗಮ ಮಹಾರಾಜರು, ಬಾಹುಸಾಹೇಬ ಮಹಾರಾಜರ ಮೂರ್ತಿಗಳ ಪ್ರತಿಷ್ಟಾಪನೆ ಮಾಡಲಾಗಿದೆ. ಇಡೀ ದೇಗುಲ ಪೂರ್ಣಗೊಳ್ಳುವುದರ ಹಿಂದೆ ಈಗೀನ ಪೀಠಾಧೀಶರಾದ ರೇವಣಸಿದ್ದೇಶ್ವರ ಮಹಾರಾಜರ ಅವಿರತ ಶ್ರಮವಿದೆ.

Latest Videos
Follow Us:
Download App:
  • android
  • ios