* ಕುಂಬಳಗೋಡು ಸಮೀಪ ಘಟನೆ, ಜಲ್ಲಿ ತುಂಬಿದ್ದ ಲಾರಿ ಏಕಾಏಕಿ ಪಲ್ಟಿ* ಎರಡು ಕಾರ್‌ಗಳು, ಬೈಕ್‌ ಜಖಂ, ಒಂದೇ ಕುಟುಂಬದ ನಾಲ್ವರು* ಟೊಯೋಟಾ ಸಿಬ್ಬಂದಿ, ಬೈಕ್‌ ಸವಾರ ಸಾವು, ಕುಂಬಳಗೋಡು ಸಮೀಪ ಘಟನೆ* ರಸ್ತೆ ಕಾಮಗಾರಿ, ವೇಗದ ಚಾಲನೆ ಅಪಘಾತಕ್ಕೆ ಕಾರಣ* ಐವರು ಪ್ರಯಾಣಿಕರು ಪಾರು, ರಸ್ತೆ ಕಾಮಗಾರಿ, ವೇಗದ ಚಾಲನೆ ಅಪಘಾತಕ್ಕೆ ಕಾರಣ

ಕೆಂಗೇರಿ(ಜ.11: ಮೈಸೂರು ಮುಖ್ಯರಸ್ತೆಯ ಕುಂಬಳಗೋಡು ಸಮೀಪ ಸೋಮವಾರ ಸಂಜೆ ಲಾರಿ, ಕಾರು ಹಾಗೂ ಬೈಕ್‌ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೈಸೂರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್‌ ಲಾರಿ ನಿಯಂತ್ರಣ ತಪ್ಪಿ ಎಡ ಭಾಗಕ್ಕೆ ಪಲ್ಟಿಯಾಗಿದ್ದು, ಪಕ್ಕದಲ್ಲಿಯೇ ಇದ್ದ ಎರಡು ಕಾರು ಒಂದು ಬೈಕ್‌ ಮೇಲೆ ಬಿದ್ದಿದೆ. ಒಂದೇ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು, ಮತ್ತೊಂದು ಕಾರಿನಲ್ಲಿದ್ದ ಒಬ್ಬ ಪ್ರಯಾಣಿಕ ಹಾಗೂ ಒಬ್ಬ ಬೈಕ್‌ ಸವಾರ ಸೇರಿ ಆರು ಮಂದಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಎರಡು ಕಾರುಗಳಲ್ಲಿ ತಲಾ 5ರಂತೆ 10 ಜನ ತೆರಳುತ್ತಿದ್ದರು. ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ. ಉಳಿದಂತೆ ಕಾರ್‌ಗಳಲ್ಲಿದ್ದ ಐದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕ್ಕಪುಟ್ಟಗಾಯಗಳಾಗಿವೆ. ಇದೇ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಸಂಚರಿಸುತ್ತಿದ್ದ ಐದಾರು ವಾಹನಗಳು ಬಹುತೇಕ ಜಖಂ ಆಗಿವೆ.

ಘಟನೆ ಸಂಭವಿಸುತ್ತಿದ್ದಂತೆ, ಕುಂಬಳಗೋಡು ಪೊಲೀಸ್‌ ಠಾಣೆ ಸ್ಥಳಕ್ಕೆ ಆಗಮಿಸಿದ್ದಾರೆ. ಕೆಎ 02 ಎಂಎಂ 7749 ಕಾರಿನಲ್ಲಿದ್ದ ಒಂದೇ ಕುಟುಂಬದ ನಿಖಿತಾ ರಾಣಿ (29), ವೀಣಮ್ಮ (42), ಇಂದ್ರಕುಮಾರ್‌ (14) ಕೀರ್ತಿ ಕುಮಾರ್‌ (40), ಮತ್ತೊಂದು ಕಾರಿನಲ್ಲಿದ್ದ (ಕೆಎ 05 ಎಂಜೆ 9924) ಟೊಯೋಟಾ ಕಂಪನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್‌, ಕೆ.ಎ.02 ಜೆಡ್ಲ್ಯೂ 9277 ಬೈಕ್‌ನಲ್ಲಿದ್ದ ಸವಾರ ಜಿತಿನ್‌ ಬಿ.ಜಾಜ್‌ರ್‍ ಮೃತ ದುರ್ದೈವಿಗಳು. ಆರು ಮೃತದೇಹಗಳನ್ನು ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೈಸೂರು ರಸ್ತೆಯಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟುಅಡ್ಡಿಯಾಗುತ್ತಿದೆ. ಕಾಮಗಾರಿ ಮತ್ತು ಟಿಪ್ಪರ್‌ ವೇಗ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ಸ್ಥಳದಿಂದ ಎರಡು ಕಡೆಗಳಲ್ಲಿ ಸುಮಾರು ಐದು ಕಿಲೋ ಮೀಟರ್‌ನಷ್ಟುಟ್ರಾಫಿಕ್‌ ಜಾಮ್‌ ಆಗಿತ್ತು. ಸದ್ಯ ಲಾರಿಯನ್ನು ಕ್ರೇನ್‌ ಮೂಲಕ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

--