ಬೆಂಗಳೂರಿನಲ್ಲಿ ನಕಲಿ ಗುರುತುಗಳನ್ನು ಬಳಸಿ ವಿವಾಹಿತ ಮಹಿಳೆಯರನ್ನು ಬಲೆಗೆ ಬೀಳಿಸುತ್ತಿದ್ದ ಹನಿಯೂರು ಚಂದ್ರೇಗೌಡ ಎಂಬಾತನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಈತ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ. ತನಿಖೆಯ ವೇಳೆ 20ಕ್ಕೂ ಹೆಚ್ಚು ಮಹಿಳೆಯರನ್ನು ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ನಗರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ಮತ್ತು ಬ್ಲ್ಯಾಕ್ಮೇಲ್ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಹನಿಯೂರು ಚಂದ್ರೇಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವನು ಹಲವು ವಿವಾಹಿತ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿ ದೈಹಿಕವಾಗಿ ದುರುಪಯೋಗಪಡಿಸಿಕೊಂಡು, ನಂತರ ಖಾಸಗಿ ಫೋಟೋ ಮತ್ತು ವಿಡಿಯೋಗಳ ಮೂಲಕ ಬೆದರಿಕೆ ಹಾಕುತ್ತಿದ್ದನೆಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮಹಿಳೆಯರನ್ನು ಸೆಳೆಯಲು ವಿಭಿನ್ನ ರೀತಿಯ ನಕಲಿ ಗುರುತುಗಳನ್ನು ಬಳಸುತ್ತಿದ್ದನು. ಕೆಲವರಿಗೆ ತಾನು ಸೀರಿಯಲ್ ಆರ್ಟಿಸ್ಟ್ ಎಂದು ಪರಿಚಯಿಸಿಕೊಂಡಿದ್ದರೆ, ಇನ್ನೂ ಕೆಲವರಿಗೆ ಮೇಕಪ್ ಆರ್ಟಿಸ್ಟ್, ಪೊಲೀಸ್ ಅಧಿಕಾರಿ, ಆರ್ಟಿಐ ಕಾರ್ಯಕರ್ತ ಅಥವಾ ಲೆಕ್ಚರರ್ ಎಂದು ಹೇಳಿಕೊಂಡು ವಿಶ್ವಾಸ ಗೆಲ್ಲುತ್ತಿದ್ದನು. ಬಣ್ಣ ಬಣ್ಣದ ಮಾತುಗಳಿಂದ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ, ನಂತರ ಹತ್ತಿರವಾಗುತ್ತಿದ್ದನು.
ವಿವಿಧ ರೀತಿಯಲ್ಲಿ ಪರಿಚಯಿಸಕೊಂಡು ವಿಶ್ವಾಸ ಗಳಿಸುತ್ತಿದ್ದ ಕಾಮುಕ
ಒಂದು ಪ್ರಕರಣದಲ್ಲಿ, ಮೇಕಪ್ ಆರ್ಟಿಸ್ಟ್ ಆಗಿದ್ದ ವಿವಾಹಿತ ಮಹಿಳೆಯೊಬ್ಬಳಿಗೆ ತಾನು ಉತ್ತಮ ಸಂಬಳ ಹೊಂದಿರುವ ಲೆಕ್ಚರರ್ ಎಂದು ನಂಬಿಸಿ ಪರಿಚಯ ಮಾಡಿಕೊಂಡಿದ್ದಾನೆ. ಹಂತ ಹಂತವಾಗಿ ಆಕೆಯೊಂದಿಗೆ ಆತ್ಮೀಯತೆ ಸಾಧಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೋ ಗುಪ್ತವಾಗಿ ದಾಖಲಿಸಿಕೊಂಡಿದ್ದಾನೆ.
ನಂತರ ಈ ಖಾಸಗಿ ದೃಶ್ಯಗಳನ್ನು ಬಳಸಿ ಮಹಿಳೆಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದನು. “ನಾನು ಹೇಳಿದಂತೆ ಕೇಳದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿ, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆಯಿಂದ ಸುಮಾರು ಐದು ಲಕ್ಷ ರೂಪಾಯಿ ಹಣ ಪಡೆದಿರುವುದಾಗಿ ತಿಳಿದುಬಂದಿದೆ.
ಮೊಬೈಲ್ ನೋಡಿ ಶಾಕ್ ಆದ ಸಂತೃಸ್ತೆ
ಒಮ್ಮೆ ಆತನ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ, ದೂರುದಾರ ಮಹಿಳೆ ಶಾಕ್ ಆಗಿದ್ದಾಳೆ. ಆಕೆಗೆ ಮತ್ತಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಆತನ ಮೊಬೈಲ್ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋಗಳು, ಫೋಟೋಗಳು ಹಾಗೂ ಚಾಟಿಂಗ್ ದಾಖಲೆಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ಮಹಿಳೆಯರನ್ನು ಇದೇ ರೀತಿಯಲ್ಲಿ ಬಲೆಗೆ ಬೀಳಿಸಿ ವಂಚನೆ ನಡೆಸಿರುವುದು ಸಂತೃಸ್ತೆಗೆ ದೃಢಪಟ್ಟಿದೆ.
ಈ ಘಟನೆಗೆ ಸಂಬಂಧಿಸಿ ಸಂತ್ರಸ್ತ ಮಹಿಳೆ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಕೈಗೊಂಡಿದ್ದಾರೆ. ತನಿಖೆಯ ವೇಳೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ಹನಿಯೂರು ಚಂದ್ರೇಗೌಡನನ್ನು ಬಂಧಿಸಲಾಗಿದೆ.
ಇನ್ನು ಆರೋಪಿಯು ರಾಮನಗರ ಮಕ್ಕಳ ಆಯೋಗ ಸಮಿತಿಯ ಸದಸ್ಯನಾಗಿದ್ದಾನೆ ಎಂಬ ಮಾಹಿತಿ ಕೂಡ ಹೊರಬಂದಿದ್ದು, ನಕಲಿ ಐಡಿ ಕಾರ್ಡ್ಗಳನ್ನು ಬಳಸಿ ಹಲವರಿಗೆ ಬೆದರಿಕೆ ಹಾಕುತ್ತಿದ್ದನೆಂಬ ಆರೋಪವೂ ಇದೆ. ಈ ಎಲ್ಲಾ ಅಂಶಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ, ಮಹಿಳೆಯರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ವಂಚನೆ ಮತ್ತು ಬ್ಲ್ಯಾಕ್ಮೇಲ್ ನಡೆಸುತ್ತಿದ್ದ ಈ ಪ್ರಕರಣವು ಸಮಾಜದಲ್ಲಿ ಆತಂಕ ಮೂಡಿಸಿದ್ದು, ಇಂತಹ ಘಟನೆಗಳಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


