ಡಿಕೆಶಿ ಎಲ್ಲಿದ್ದೀಯಪ್ಪಾ ಎನ್ನುತ್ತಾರೆ ಬಳ್ಳಾರಿ ಜನ| ಟ್ವೀಟರ್ನಲ್ಲಿ ಡಿಕೆಶಿಗೆ ಶ್ರೀರಾಮುಲು ಚಾಟಿ| ಚುನಾವಣೆಗೆ ಮಾತ್ರವಲ್ಲ, ಶುಭ ಮುಹೂರ್ತದ ಸಚಿವರಾಗಿ
ಬಳ್ಳಾರಿ[ಜೂ.24]: ನನ್ನನ್ನು ಶಕುನಿ ಎಂದ ಶ್ರೀರಾಮುಲು ಅಣ್ಣನಿಗೆ ಮುಹೂರ್ತ ನೋಡಿ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಅವರದ್ದೇ ಶೈಲಿಯಲ್ಲಿ ಟ್ವೀಟರ್ ಮೂಲಕ ಕಿಚಾಯಿಸಿದ್ದಾರೆ. ‘ಡಿಕೆಶಿ ಅಣ್ಣನವರೇ ನಾನು ಬಳ್ಳಾರಿ ಮಣ್ಣಿನ ಮಗ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ನಿಮ್ಮನ್ನು ಜನ ಶಿವಕುಮಾರ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ. ಕೇವಲ ಚುನಾವಣೆಗೆ ಮಾತ್ರ ನೀವು ಸಚಿವರಾಗದೆ ಶುಭ ಘಳಿಗೆ, ಶುಭ ಮಹೂರ್ತದ ಸಚಿವರಾಗಿರಿ. ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿ’ ಎಂದಿದ್ದಾರೆ.
ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಅಣ್ಣಾ ಎಂದು ಸಂಬೋಧಿಸುವ ಮೂಲಕ ಕಿಚಾಯಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಶ್ರೀರಾಮುಲು ಅದೇ ಶೈಲಿಯಲ್ಲಿ ಎದುರೇಟು ನೀಡಿದ್ದಾರೆ.
ಬಳ್ಳಾರಿಗೆ ವಲಸೆ ಬಂದವರಿಗೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ವಾಭಿಮಾನದ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರ ಮೇಲಿನ ನಿಮ್ಮ ಕುರುಡು ಪ್ರೇಮಕ್ಕಾಗಿ ರಾಜ್ಯದ ಕಾಂಗ್ರೆಸ್ನ್ನು ಒಂದಂಕಿಗೆ ಇಳಿಸಿದ ಕೀರ್ತಿ ತಮಗೆ ಸಲ್ಲಬೇಕು. ಬಳ್ಳಾರಿ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು, ಬಳ್ಳಾರಿಯ ಮಂತ್ರಿಗಳ ಪೈಕಿ ಯಾರನ್ನಾದರೂ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಿ. ಕೇವಲ ಚುನಾವಣೆಗೆ ಮಾತ್ರ ನೀವು ಸಚಿವರಾಗದೆ ಶುಭ ಘಳಿಗೆ, ಶುಭ ಮಹೂರ್ತದ ಸಚಿವರಾಗಿರಿ. ಬಳ್ಳಾರಿಗೆ ಅಭಿವೃದ್ಧಿಗೆ ಶ್ರಮಿಸಿ ಎಂದು ಮನವಿ ಮಾಡುತ್ತಿದ್ದೇನೆ ಅಣ್ಣಾ... ಎಂದು ಶ್ರೀರಾಮುಲು ಟ್ವೀಟರ್ ಸಮರಕ್ಕೆ ನಾಂದಿ ಹಾಡಿದ್ದಾರೆ.
