ಅನ್ಯ ಕೋಮಿನ ಯುವಕನ ಜೊತೆ ಯುವತಿಯರ ಪ್ರಯಾಣ ಆರೋಪ : ಬಸ್ ತಡೆದ ಭಜರಂಗದಳ ಯುವಕರು
- ಅನ್ಯಕೋಮಿನ ಯುವಕನ ಜೊತೆಗೆ ಹಿಂದೂ ಯುವತಿಯರು ಬಸ್ ನಲ್ಲಿ ಪ್ರಯಾಣ ಮಾಡಿರುವ ಆರೋಪ
- ಪುತ್ತೂರಿನಲ್ಲಿ ಬಸ್ ಅಡ್ಡಗಟ್ಟಿದ ಹಿಂದೂ ಸಂಘಟನೆ ಕಾರ್ಯಕರ್ತರು
ಪುತ್ತೂರು (ಆ.21): ಅನ್ಯಕೋಮಿನ ಯುವಕನ ಜೊತೆಗೆ ಹಿಂದೂ ಯುವತಿಯರು ಬಸ್ ನಲ್ಲಿ ಪ್ರಯಾಣ ಮಾಡಿರುವ ಆರೋಪ ಮಾಡಿದ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರಿನಲ್ಲಿ ಬಸ್ ಅಡ್ಡಗಟ್ಟಿದ ಘಟನೆಯಿಂದು ನಡೆದಿದೆ.
ಪುತ್ತೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಗೆ ಇಬ್ಬರು ಯುವತಿಯರು ಹತ್ತಿದ್ದರು. ಅದೇ ಬಸ್ಸಲ್ಲಿ ಕುಂಬ್ರದವರೆಗೆ ಬರಲು ಬೆಳ್ಳಾರೆ ಸಮೀಪದ ಯುವಕ ಹತ್ತಿದ್ದ. ಆದರೆ ಕುಂಬ್ರ ತಲುಪಿದಾಗ ಆ ಯುವಕ ಅಲ್ಲಿ ಇಳಿಯದೇ ಬೆಂಗಳೂರಿಗೆ ಮತ್ತೆ ಟಿಕೆಟ್ ಮಾಡಿದ್ದ.
ಈ ಬಗ್ಗೆ ಬಸ್ ನಲ್ಲಿದ್ದ ವ್ಯಕ್ತಿಯೊಬ್ಬ ಪುತ್ತೂರಿನ ಭಜರಂಗ ದಳದ ಯುವಕರಿಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನ ಐದಾರು ಯುವಕರು ಕಾರಲ್ಲಿ ಬಂದು ಬಸ್ಸನ್ನು ಬೆನ್ನಟ್ಟಿ ಆನೆಗುಂಡಿಯಲ್ಲಿ ತಡೆದಿದ್ದಾರೆ.
ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆಗೆ VHP-ಭಜರಂಗದಳ ಮುತ್ತಿಗೆ : ಲವ್ ಜಿಹಾದ್ ಅರೋಪ
ಬಸ್ ಹತ್ತಿ ನೌಷಾದ್ನನ್ನು ವಿಚಾರಿಸಿ ಆತನ ಮೊಬೈಲ್ ಕಿತ್ತುಕೊಂಡಿದ್ದಲ್ಲದೇ ಯುವತಿಯರಿಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಿರ್ವಾಹಕ ಮತ್ತು ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಬಸ್ಸನ್ನ ಸುಳ್ಯ ಠಾಣೆಯತ್ತ ಚಲಾಯಿಸಿಕೊಂಡು ಚಾಲಕ ತೆರಳಿದ್ದಾರೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದು ಯುವತಿಯರು ಮತ್ತು ಯುವಕನ ಮೊಬೈಲ್ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಇಬ್ಬರ ಮಧ್ಯೆ ಯಾವುದೇ ಸಂಪರ್ಕ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಭಜರಂಗದಳದ ಕಾರ್ಯಕರ್ತರಿಗೆ ತಲುಪಿದ ತಪ್ಪು ಮಾಹಿತಿಯಿಂದ ಅಚಾತುರ್ಯವಾಗಿದ್ದು ಕೊನೆಗೆ ಎಚ್ಚರಿಕೆ ಕೊಟ್ಟು ಸಂಘಟನೆ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಲಾಗಿದೆ.