Asianet Suvarna News Asianet Suvarna News

Bhadra Wildlife Sanctuary: ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ದಟ್ಟಣೆ ತಡೆಯಿರಿ

ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ದಟ್ಟಣೆ ತಡೆಯಲು ವನ್ಯಜೀವಿ ವಿಭಾಗ ತಕ್ಷಣ ಕ್ರಮ ಕೈಗೊಳ್ಳಬೇಕು. ಅಭಯಾರಣ್ಯದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಭದ್ರಾ ವೈಲ್ಡ್‌ ಲೈಫ್‌ ಕನ್ಸರ್ವೇಶನ್‌ ಟ್ರಸ್ಟ್‌ನ ಡಿ.ವಿ.ಗಿರೀಶ್‌, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ್‌ ಆಗ್ರಹಿಸಿದರು.

Avoid tourist traffic in Bhadra Sanctuary at chikkamagaluru rav
Author
First Published Jan 1, 2023, 7:42 AM IST

ಚಿಕ್ಕಮಗಳೂರು (ಜ.1) : ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ದಟ್ಟಣೆ ತಡೆಯಲು ವನ್ಯಜೀವಿ ವಿಭಾಗ ತಕ್ಷಣ ಕ್ರಮ ಕೈಗೊಳ್ಳಬೇಕು. ಅಭಯಾರಣ್ಯದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಭದ್ರಾ ವೈಲ್ಡ್‌ ಲೈಫ್‌ ಕನ್ಸರ್ವೇಶನ್‌ ಟ್ರಸ್ಟ್‌ನ ಡಿ.ವಿ.ಗಿರೀಶ್‌, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ್‌ ಆಗ್ರಹಿಸಿದರು.

ಜಿಲ್ಲೆಗೆ ವಾರಾಂತ್ಯ ಹಾಗೂ ಇನ್ನಿತರ ರಜಾ ದಿನಗಳಲ್ಲಿ ಬರುತ್ತಿರುವ ಪ್ರವಾಸಿಗರ(Tourists) ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಚಿಕ್ಕಮಗಳೂರು ನಗರ()ಕ್ಕೆ ಬಂದು ಮುಳ್ಳಯ್ಯನಗಿರಿ ಹಾಗೂ ಸುತ್ತಲ ಪ್ರದೇಶಕ್ಕೆ ಹೋಗುವ ಪ್ರವಾಸಿಗರಲ್ಲಿ ಬಹಳಷ್ಟುಮಂದಿ ಭದ್ರಾ ಅಭಯಾರಣ್ಯಕ್ಕೂ ಭೇಟಿ ನೀಡುತ್ತಾರೆ. ಈ ಹಿನ್ನೆಲೆ ದಿನವೊಂದಕ್ಕೆ ಎಷ್ಟುಮಂದಿ ಪ್ರವಾಸಿಗರನ್ನು ಅಭಯಾರಣ್ಯದೊಳಗೆ ಪ್ರಾಣಿ ವೀಕ್ಷಣೆಗೆ ಬಿಡಬಹುದು ಎಂಬ ಬಗ್ಗೆ ಅರಣ್ಯ ಇಲಾಖೆ ಆಲೋಚಿಸಬೇಕು ಎಂದು ಹೇಳಿದ್ದಾರೆ.

Chikkamagaluru: ಬೇಸಿಗೆ ರಜೆ ಹಿನ್ನಲೆಯಲ್ಲಿ ಭದ್ರಾ ಅಭಯಾರಣ್ಯಕ್ಕೆ ಪ್ರವಾಸಿಗರ ಭೇಟಿ!

ಭದ್ರಾ ಅಭಯಾರಣ್ಯ ವನ್ಯಜೀವಿಗಳ ಸುರಕ್ಷಿತ ತಾಣ. ಈ ಅಭಯಾರಣ್ಯವನ್ನು ಆನೆ ಸೇರಿದಂತೆ ಹಲವು ಸಸ್ಯಾಹಾರಿ ಪ್ರಾಣಿಗಳು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ವಿಶೇಷವೆಂದರೆ, ಈ ಅಭಯಾರಣ್ಯ ಹುಲಿ ಸಂರಕ್ಷಣಾ ತಾಣವೂ ಆಗಿದ್ದು, ವನ್ಯ ಪ್ರಾಣಿಗಳನ್ನು ಹಾಗೂ ಇಲ್ಲಿರುವ ವೈವಿದ್ಯಮಯ ಪಕ್ಷಿ ಪ್ರಭೇದ ಮತ್ತು ಕಾಡನ್ನು ನೋಡಲು ಬರುವವರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಂತ್ರಣ ಅತ್ಯಂತ ಅಗತ್ಯ ಎಂದಿದ್ದಾರೆ.

ವನ್ಯ​ಜೀ​ವಿ​ಗ​ಳಿಗೆ ಆತಂಕ:

ಅಭಯಾರಣ್ಯ ಮನುಷ್ಯರ ಓಡಾಟ ಹಾಗೂ ಚಟುವಟಿಕೆಗಳಿಗೆ ಮುಕ್ತವಾದ ಪ್ರದೇಶವಲ್ಲ. ಈ ರಕ್ಷಿತಾರಣ್ಯ ವನ್ಯ ಪ್ರಾಣಿಗಳಿಗೆ ಅತ್ಯಂತ ಸುರಕ್ಷಿತ ಜಾಗವಾಗಿದ್ದು, ಹೆಚ್ಚಿನ ಜನ ಹಾಗೂ ವಾಹನ ಓಡಾಟಕ್ಕೆ ಇಲ್ಲಿ ಅವಕಾಶ ಇರಬಾರದು. ಹಾಗೆಂದ ಮಾತ್ರಕ್ಕೆ ಪ್ರವಾಸಿಗರು ಇಲ್ಲಿಗೆ ಬರಲೇಬಾರದೆಂಬ ಅಭಿಪ್ರಾಯವಲ್ಲ. ಆದರೆ, ಇತ್ತೀಚೆಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ 250ರಿಂದ 300 ಮಂದಿ ಬರುತ್ತಿದ್ದು, ಬಂದ ಪ್ರತೀ ಪ್ರವಾಸಿಗರನ್ನು ವನ್ಯಪ್ರಾಣಿ ವೀಕ್ಷಣೆಗೆ ವಾಹನದಲ್ಲಿ ಕರೆದೊಯ್ಯುವ ಸೌಲಭ್ಯವಿದೆ. ದಿನಪೂರ್ತಿ ವಾಹನಗಳ ಸತತ ಓಡಾಟ ಇಲ್ಲಿನ ವನ್ಯಜೀವಿಗಳ ನಿರಾತಂಕ ಬದುಕಿಗೆ ಮಾರಕವಾಗುವ ಸಂಭವವೂ ಇದೆ.

ಈ ಪ್ರದೇಶವನ್ನು ಜನ ಹಾಗೂ ವಾಹನ ಮುಕ್ತವಾಗಿಸಿ ಪ್ರಾಣಿಗಳ ಓಡಾಟಕ್ಕೆ ನಿರಾತಂಕ ವಾತಾವರಣ ನಿರ್ಮಿಸಲೆಂದೇ ಸರ್ಕಾರ ಹಾಗೂ ಪರಿಸರಾಸಕ್ತರು ಈ ಅಭಯಾರಣ್ಯದೊಳಗಿದ್ದ 13 ಹಳ್ಳಿಗಳನ್ನು ಸ್ಥಳಾಂತರಿಸಿ ಪೂರ್ಣ 500 ಚ.ಕಿ.ಮೀ. ಅಭಯಾರಣ್ಯವನ್ನು ಅರಣ್ಯೇತರ ಚಟುವಟಿಕೆಗಳಿಂದ ಮುಕ್ತವಾಗಿಸಿದ್ದಾರೆ. ಆದರೆ, ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಾದಂತೆ ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಪ್ರಾಣಿಗಳನ್ನು ತೋರಿಸಲು ಅರಣ್ಯ ಇಲಾಖೆ ಒಂದು ಮಿನಿ ಬಸ್‌ ಹಾಗೂ ಮೂರು ವಾಹನಗಳನ್ನು ವ್ಯವಸ್ಥೆ ಮಾಡಿದೆ. ದಿನವೊಂದಕ್ಕೆ 200 ರಿಂದ 300 ಜನ ಬಂದರೆ 7 ರಿಂದ 8 ಬಾರಿ ಅಭಯಾರಣ್ಯದೊಳಗೆ ವಾಹನಗಳನ್ನು ಓಡಿಸುವುದು ಅನಿವಾರ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಎಷ್ಟುಮಂದಿಗೆ ಅಭಯಾರಣ್ಯದೊಳಗೆ ಹೋಗಲು ಅವಕಾಶ ನೀಡಬೇಕೆಂಬ ಬಗ್ಗೆ ಒಂದು ನಿರ್ದಿಷ್ಟನಿಯಂತ್ರಣ ನೀತಿಯನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಭಯಾರಣ್ಯ ಕೇವಲ ವನ್ಯಜೀವಿಗಳ ಬಗ್ಗೆ ಜನ ಅರಿಯುವ ಪ್ರದೇಶವೇ ಹೊರತು, ಯಾವುದೇ ರೀತಿಯ ಮೋಜು-ಮಸ್ತಿಯ ತಾಣವಲ್ಲ. ಅಲ್ಲಿಗೆ ಬರುವ ಎಲ್ಲಾ ಪ್ರವಾಸಿಗರಿಗೂ ಅಭಯಾರಣ್ಯದೊಳಗೆ ಕರೆದೊಯ್ಯಲೇಬೇಕೆಂಬ ಒತ್ತಡಕ್ಕೆ ಇಲಾಖೆ ಒಳಗಾಗಬಾರದು. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಎಷ್ಟುಮಂದಿಗೆ ಅವಕಾಶ ನೀಡಬಹುದೆಂಬ ಬಗ್ಗೆ ಇಲಾಖೆಗೆ ಒಂದು ನಿರ್ದಿಷ್ಟಮಾನದಂಡವಿರಬೇಕು ಎಂದು ಹೇಳಿದ್ದಾರೆ.

 

Tiger ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ !

ಅಭಯಾರಣ್ಯಕ್ಕೆ ಬರುವ ಪ್ರವಾಸಿಗರಿಗೆ ಒಳಗೆ ಹೋಗಿ ಪ್ರಾಣಿಗಳನ್ನು ವೀಕ್ಷಿಸಲು ಯಾವುದೇ ರೀತಿ ನಿರಾಸೆಯಾಗದಂತೆ ನೋಡಿಕೊಳ್ಳುವುದಾಗಿ ಇಲಾಖೆಯ ಅಧಿಕಾರಿಗಳು ಹೇಳಿದ್ದು, ಇದು ವನ್ಯಜೀವಿಗಳ ನಿರಾತಂಕ ಬದುಕಿಗೆ ಮಾರಕ. ತಕ್ಷಣ ಇಲಾಖೆ ಅಭಯಾರಣ್ಯದೊಳಗೆ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 4 ರಿಂದ 6 ರವರೆಗೆ ಪ್ರವಾಸಿಗರನ್ನು ಕರೆದೊಯ್ಯಲು ಸಮಯ ಸೀಮಿತಗೊಳಿಸಬೇಕು. ಈ ಬಗ್ಗೆ ಅಲ್ಲಿಗೆ ಬರುವ ಪ್ರವಾಸಿಗರಿಗೆ ವೆಬ್‌ಸೈಟ್‌ ಹಾಗೂ ಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios