ಹಸು ಸಾಕಾಣಿಕೆಯಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ವೈ.ಡಿ. ರಾಜಣ್ಣ ಹೇಳಿದರು.

 ಸರಗೂರು : ಹಸು ಸಾಕಾಣಿಕೆಯಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ವೈ.ಡಿ. ರಾಜಣ್ಣ ಹೇಳಿದರು.

Add Asianetnews Kannada as a Preferred SourcegooglePreferred

ಕೃಷಿಯಲ್ಲಿ ಸಮಗ್ರ ಬೇಸಾಯ ಮಾಡುವುದರಿಂದ ಉತ್ತಮ ರೀತಿಯ ಆದಾಯ ಗಳಿಸುವುದರ ಕುರಿತು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ವತಿಯಿಂದ ನಡೆದ ಮೂರು ದಿನಗಳ ಹಸು ಸಾಕಾಣಿಕೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಸು ಸಾಕಾಣಿಕೆ ಮಾಡುವುದರಿಂದ ಮನೆಯಲ್ಲಿ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು, ಬಾಣಂತಿಯರು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ. ಎಂದಿಗೂ ಕೂಡ ಹಸುವಿನ ಹಾಲಿಗೆ ಬೇಡಿಕೆ ಕಡಿಮೆಯಾಗಿಲ್ಲ. ಟಮೋಟೊ, ಈರುಳ್ಳಿ ಮುಂತಾದ ತರಕಾರಿ ಬೆಳೆಗಳನ್ನು ಬೆಳೆದು ಒಳ್ಳೆಯ ಬೆಲೆ ಸಿಗದಿರುವುದುಂಟು. ಆದರೆ ಹಸುವಿನ ಹಾಲು ಹಾಲಿನಿಂದ ಬರುವ ಉತ್ಪನ್ನಗಳು ಹೆಚ್ಚಾಗುತ್ತಲೆ ಇದೆ, ಪ್ರತಿ ದಿನ ಹಾಲಿನ ಬೆಲೆ ಏರಿಕೆ ಆಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲವೆಂದು ಹಾಲಿನ ಮಹತ್ವವನ್ನು ತಿಳಿಸಿದರು.

ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ಪ್ರಸನ್ನ ಮಾತನಾಡಿ, ಹಸು ಸಾಕಾಣಿಕೆ ಮಾಡುವುದರ ಮೂಲ ಉದ್ದೇಶ ಉತ್ತಮ ರೀತಿಯ ಹಾಲಿನ ಇಳುವರಿ ಪಡೆಯುವುದು. ಹಾಲಿನ ಇಳುವರಿ ಪಡೆಯುವಲ್ಲಿ ಒಳ್ಳೆಯ ಹಸುವಿನ ತಳಿ. ಸಮತೋಲನ ಆಹಾರದ ಪೂರೈಕೆ, ಉತ್ತಮ ರಾಸುವಿನ ಆಯ್ಕೆ, ಕೊಟ್ಟಿಗೆ ನಿರ್ಮಾಣ ಮತ್ತು ನಿರ್ವಹಣೆ, ಹಸುಗಳ ಪೋಷಣೆ, ಕರುಗಳ ಪೋಷಣೆ, ಆರೋಗ್ಯ ಸಮಸ್ಯೆಗಳು, ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದೆಂದರು.

ತರಬೇತಿಯ ಕೊನೆಯ ದಿನದಲ್ಲಿ ಎಲ್ಲ ಅಭ್ಯರ್ಥಿಗಳನ್ನು ಕ್ಷೇತ್ರಭೇಟಿಗಾಗಿ ಮೈಸೂರಿನ ಮೈಮೂಲ್‌ಗೆ ಭೇಟಿ ನೀಡಿ ಪ್ರಭುಶಂಕರ್‌ ನೇತೃತ್ವದಲ್ಲಿ ಮೇವಿನ ತಳಿಗಳ ಬಗ್ಗೆ ಮಾಹಿತಿ ಪಡೆದು, ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಡಾ. ರಕ್ಷಿತ್‌ ರಾಜ್‌ ನೇತೃತ್ವದಲ್ಲಿ ವಿವಿಧ ರೀತಿಯ ಹಸುಗಳ ತಳಿಗಳನ್ನು ನೋಡಲಾಯಿತು.

ತರಬೇತಿ ಪೂರ್ಣಗೊಳಿಸಿದ 46 ಅಭ್ಯರ್ಥಿಗಳಿಗೆ ವಿವೇಕಾ ಗ್ರಾಮೀಣ ಜೀವನಾಧಾರ ಕೇಂದ್ರ ಕೆಂಚನಹಳ್ಳಿಯಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.

ಮುಖ್ಯಅತಿಥಿಯಾಗಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ಕೆಂಚನಹಳ್ಳಿಯ ಸಹಾಯಕ ವ್ಯವ್ಥಪಾಕ ಪ್ರಸನ್ನ, ಗ್ರಾಪಂ ಸದಸ್ಯ ಸತೀಶ್‌, ಯಾಜಮಾನ ಚಂದ್ರಪ್ಪ, ನಾಗರಾಜಪ್ಪ ಹಾಗೂ ಹಾಲು ಉತ್ಪಾದಕಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶಶಿರೇಖಾ, ಕಾರ್ಯದರ್ಶಿ ವೇದಾವತಿ ಇದ್ದರು.

ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ವ್ಯವ್ಥಪಾಕ ಪಿ.ಡಿ. ನಾಯಕ್‌, ಸಹಾಯಕ ವ್ಯವ್ಥಪಾಕರಾದ ಪ್ರಸನ್ನ, ಕ್ಷೇತ್ರಮಾರ್ಗದರ್ಶಕ ಬಿ.ಎನ್‌. ಉಮೇಶ್‌, ರಂಗಸ್ವಾಮಿ ಹಾಗೂ ಯಶೋದಾ ಇದ್ದರು.