Asianet Suvarna News Asianet Suvarna News

ಬಡವರ ಮಕ್ಕಳ ಅಭ್ಯುದಯಕ್ಕೂ ಅವಕಾಶ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹಸಿರುಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಂ ಅವರು ಬಡವ, ಹಿಂದುಳಿದ ಹಾಗೂ ನೊಂದವರಿಗೆ ಧ್ವನಿಯಾಗಿದ್ದರು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

An opportunity for the prosperity of the childrens of the poor says Minister Kota Srinivas Poojary gvd
Author
First Published Dec 11, 2022, 11:04 AM IST

ಇಳಕಲ್ಲ (ಡಿ.11): ಹಸಿರುಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಂ ಅವರು ಬಡವ, ಹಿಂದುಳಿದ ಹಾಗೂ ನೊಂದವರಿಗೆ ಧ್ವನಿಯಾಗಿದ್ದರು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇಲಕಲ್ಲ ನಗರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಂ ಭವನ ಉದ್ಘಾಟಿಸಿ ಅವರು ಮಾತನಾಡಿ, 5 ಕೋಟಿ ವೆಚ್ಚದಲ್ಲಿ ಜಗಜೀವರಾಂ ಹೆಸರಿನಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗಿದ್ದು, ಅದರ ಸದ್ಬಳಕೆಯಾಗಬೇಕು ಎಂದರು.

ಸಮಾಜದ ನೊಂದ ಜನಾಂಗದವರನ್ನು ಮೇಲೆತ್ತುವ ಕೆಲಸವನ್ನು ಬಾಬೂಜಿ ಮಾಡಿದ್ದಾರೆ. ದೇಶದ ಉಪಪ್ರಧಾನಮಂತ್ರಿಯಾಗಿ ಕ್ರಾಂತಿಕಾರಿ ಕೆಲಸ ಕೈಗೊಂಡು ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ಹಿಂದೆ ಡಾಕ್ಟರ್‌ ಮಕ್ಕಳು ಡಾಕ್ಟರ್‌, ವಕೀಲರ ಮಕ್ಕಳು ವಕೀಲರು ಆಗುತ್ತಿದ್ದರು. ಈಗ ಕಾಲ ಬದಲಾಗಿದ್ದು, ಕೂಲಿ ಮಾಡುವವನ ಮಗಳು ಮೆರಿಟ್‌ನಲ್ಲಿ ರಾರ‍ಯಂಕ್‌ ಪಡೆದು ಎಂಬಿ.ಬಿ.ಎಸ್‌ ಸೀಟು ಪಡೆದಿರುವದನ್ನು ನೋಡುತ್ತಿದ್ದೇವೆ. ಅಷ್ಟೇ ಅಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯ ಅನುದಾನ ಬಳಸಿಕೊಂಡು ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಜನಾಂಗದವರಿಗೆ ಶ್ರಮಿಸಲಾಗುತ್ತಿದೆ ಎಂದರು.

ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸುಸಜ್ಜಿತ ಭವನ ನಿರ್ಮಿಸಲಾಗಿದ್ದು, ಸಭೆ-ಸಮಾರಂಭ ಹಾಗೂ ಮದುವೆಗಳಿಗೆ ಸದ್ಬಳಕೆಯಾಗಬೇಕು. ಈ ಭವನದ ನಿರ್ವಹಣೆ ತುಂಬ ಮುಖ್ಯವಾಗಿದ್ದು, ಆಸನ ಮತ್ತು ಧ್ವನಿ ವ್ಯವಸ್ಥೆಗೂ ಸಹ ಅನುದಾನ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ಸಮುದಾಯದ ಅಭಿವೃದ್ಧಿಗೆ ಕಾಳಜಿ ವಹಿಸುತ್ತಿವೆ. ನಮ್ಮ ಸರ್ಕಾರ ಬಂದ ಮೇಲೆ ಪರಿಶಿಷ್ಟಜಾತಿ, ಪಂಗಡದ ಜನತೆಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ ಎಂದರು.

ನಾನು ಉಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಮೂರು ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೇ 4835 ಎಕರೆ ಜಮೀನು ಖರೀದಿ ಮಾಡಿ ಭೂರಹಿತ ಪರಿಶಿಷ್ಟಜಾತಿ, ಪರಿಶಿಷ್ಟವರ್ಗಗಳ ಕುಟುಂಬಗಳಿಗೆ ನೀಡಲಾಗಿದೆ. ವಸತಿಶಾಲೆ ಮತ್ತು ವಸತಿನಿಲಯ ಕಟ್ಟಲಿಕ್ಕೆ ಹೆಚ್ಚಿನ ಅನುದಾನ ಸಹ ನೀಡಲಾಗಿದೆ ಎಂದರು. ಇಂದು ನಾವೆಲ್ಲ ಇಂಥ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದೇವೆ ಎಂದರೆ ಸಂವಿಧಾನದ ಮೂಲಕ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ನಮಗೆ ಕೊಟ್ಟಿರುವ ವಿಶೇಷ ಹಕ್ಕುಗಳೇ ಕಾರಣ. ನಮ್ಮ ಬಿಜೆಪಿ ಸರ್ಕಾರ ಬಡವರ ಪರ ಸರಕಾರ ಅದರಲ್ಲೂ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಹತ್ತು ಹಲವಾರು ಯೋಜನೆಗಳ ಮೂಲಕ ಸತತವಾಗಿ ಶ್ರಮಿಸುತ್ತಿದೆ. 

ರಾಜ್ಯದ ಬೊಮ್ಮಾಯಿ ಸರಕಾರ ಮತ್ತು ಕೇಂದ್ರದ ಮೋದಿಯವರ ಸರಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಉತ್ತರ ಕರ್ನಾಟಕದಲ್ಲೇ ಭವಿಷ್ಯ ಇಂತಹ ಸಮುದಾಯ ಭವನ ಇಲ್ಲವೇ ಇಲ್ಲ. ಅಷ್ಟೊಂದು ಅದ್ಭುತವಾದ ವ್ಯವಸ್ಥಿತವಾದ ಸಮುದಾಯ ಭವನ ನಿರ್ಮಾಣದಲ್ಲಿ ನಿಮ್ಮ ಶಾಸಕ ದೊಡ್ಡನಗೌಡರ ಪರಿಶ್ರಮ ಶ್ಲಾಘನೀಯವಾಗಿದೆ. ಈ ಮುಖಾಂತರ ಪರಿಶಿಷ್ಟಜಾತಿ ಪರಿಶಿಷ್ಟಪಂಗಡಗಳ ಮೇಲೆ ಇವರಿಗೆ ಇರುವ ಪ್ರೀತಿ ಎಂಥದ್ದು ಎಂಬುದನ್ನು ತಿಳಿಯಬಹುದು. ಇಂಥ ಶಾಸಕರ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಹೇಳಿದರು. ಪೌರಾಡಳಿತ ಸಚಿವ ಎನ್‌.ನಾಗರಾಜ ಮಾತನಾಡಿ, ಪರಿಶಿಷ್ಟಜಾತಿ, ಪಂಗಡದ ಜನರಿಗೆ ಅನುಕೂಲವಾಗಲಿ ಎಂದು ಭವ್ಯವಾದ ಸಮುದಾಯ ಭವನ ನಿರ್ಮಿಸಲಾಗಿದೆ. ಈ ತರಹದ ಭವನ ನಾನು ಎಲ್ಲಿ ನೋಡಿಲ್ಲ. 

ಇಷ್ಟೊಂದು ಸುಸಜ್ಜಿತ ಭವನಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಾಗಿರುವುದು, ಪರಿಶಿಷ್ಟಸಮುದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸೌಲಭ್ಯಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಜಿ. ಪಾಟೀಲ ಮಾತನಾಡಿ, ನಮ್ಮ ಕ್ಷೇತ್ರದ ಅಭಿವೃದ್ದಿ ಕಾರ‍್ಯಗಳಿಗೆ ಸತತವಾಗಿ ಬೆಂಬಲಿಸುತ್ತಿರುವ ಸಚಿವ ಗೋವಿಂದ ಕಾರಜೋಳ ಅವರ ಸಹಕಾರದಿಂದಲೇ ನನ್ನ ಕ್ಷೇತ್ರದಲ್ಲಿ 75ಕೋಟಿ ವೆಚ್ಚದಲ್ಲಿ ಮೂರು ವಸತಿ ಶಾಲೆಗಳನ್ನು ನಿರ್ಮಿಲು ಸಾಧ್ಯವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಕಷ್ಟಸಂದರ್ಭದಲ್ಲಿಯೂ ನಮ್ಮ ಕ್ಷೇತ್ರಕ್ಕೆ ಸಾಕಷ್ಟುಅನುದಾನ ನೀಡಿ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಗೆಲ್ಲುವಂತಿದ್ರೆ ಒಂದೇ ಕುಟುಂಬಕ್ಕೆ ಎರಡ್ಮೂರು ಟಿಕೆಟ್‌ ನೀಡಲಿ: ಸತೀಶ್‌ ಜಾರಕಿಹೊಳಿ

ವಿಧಾನ ಪರಿಷತ್‌ ಶಾಸಕ ಹನಮಂತ ನಿರಾಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಸೌಲಭ್ಯಗಳ ಕುರಿತು ಹೊರತಂದ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹನಮರಟ್ಟಿ, ತಹಸೀಲ್ದಾರ ಬಸವರಾಜ ಮೆಳವಂಕಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್‌ ಜುನ್ನೂರ, ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಎಂ.ಎಚ್‌.ಕಟ್ಟಿಮನಿ, ಇಳಕಲ್ಲ ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ಬಾಬು ಜಗಜೀವನರಾಂ ಸಮಿತಿ ಅಧ್ಯಕ್ಷ ಲಕ್ಷ್ಮಣ ಚಂದ್ರಗಿರಿ ಸೇರಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Follow Us:
Download App:
  • android
  • ios