ರಾಯಚೂರಲ್ಲಿ ಮತ್ತೊಬ್ಬಳು ವಿದ್ಯಾರ್ಥಿನಿ ಶವವಾಗಿ ಪತ್ತೆ| ಮಧುಪತ್ತಾರ್‌ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ

ರಾಯಚೂರು[ಆ.22]: ಇಲ್ಲಿನ ನವೋದಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಕೊಲೆ ಪ್ರಕರಣ ಮಾಸುವ ಮುನ್ನವೇ ಈಗ ನಾಪತ್ತೆಯಾಗಿದ್ದ ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಆತಂಕ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಗಣಮೂರು ಗ್ರಾಮದ ಅಪ್ರಾಪ್ತ ವಿದ್ಯಾರ್ಥಿನಿ ಆ.16ರಂದು ಕಾಣೆಯಾಗಿ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಗುಡೂರು ಸಮೀಪದ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ನಗರದ ನವೋದಯ ಕಾಲೇಜಿನಲ್ಲಿ ಅರೆ ವೈದ್ಯಕೀಯ ಕೋರ್ಸ್‌ ಓದುತ್ತಿದ್ದ ವಿದ್ಯಾರ್ಥಿನಿ ಗಣಮೂರಿನಿಂದ ಓಡಾಡುತ್ತಿದ್ದಳು. ಆ.16ರಂದು ಕಾಲೇಜಿಗೆ ಬಂದು ಮರಳಿ ಊರಿಗೆ ಹೋಗದೇ ಸ್ಥಳೀಯ ಬಸ್‌ ನಿಲ್ದಾಣದಿಂದ ಅಪಹರಣಗೊಂಡಿದ್ದಾಳೆ ಎಂದು ವಿದ್ಯಾರ್ಥಿನಿ ತಂದೆ ಈರಣ್ಣ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ವೇಳೆ ಅವರು ನೀಡಿದ ಮಾಹಿತಿಯಂತೆ ಆ.20ರಂದು ಅದೇ ಗ್ರಾಮದ ಯುವಕ ವೀರೇಂದ್ರನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಏತನ್ಮಧ್ಯೆ, ಆಂಧ್ರದ ಗುಡೂರು ಠಾಣೆ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿಯಲ್ಲಿ ಯುವತಿ ಶವಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಪ್ರಕರಣದ ಕುರಿತು ಯಾವುದೇ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಮಧು ಪ್ರಕರಣ ಮಾಸಿಲ್ಲ:

ಏ.15ರಂದು ರಾಯಚೂರು ನಗರದ ನವೋದಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಮಧು ಪತ್ತಾರ್‌ ಅನುಮಾನಸ್ಪದ ಸಾವು ಇಡೀ ರಾಜ್ಯದ ಗಮನ ಸೆಳೆದಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ಶಿಕ್ಷಣ ಸಂಸ್ಥೆಯ ಅರೆ ವೈದ್ಯಕೀಯ ಕಾಲಾಜು ವಿದ್ಯಾರ್ಥಿನಿಯು ಸಹ ಅಪಹರಣಕ್ಕೊಳಗಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಇಬ್ಬರೂ ವಿದ್ಯಾರ್ಥಿನಿಯರು ವಿಶ್ವಕರ್ಮ ಸಮಾಜಕ್ಕೆ ಸೇರಿದವರಾಗಿರುವುದಷ್ಟೇ ಅಲ್ಲದೆ, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ತಮ್ಮ ಸಮುದಾಯದ ಇಬ್ಬರು ಯುವತಿಯರ ಸಾವಿಗೆ ಸಮಾಜ ಕಳಕಳ ವ್ಯಕ್ತಪಡಿಸಿದೆ.