Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಚುನಾವಣೆ ಕಾವು

ಕಳೆದ ಎರಡು ತಿಂಗಳಿನಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂಬ ಆರೋಪದ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಗಳು ಆಗಮಿಸಿದ್ದು, ಮತ್ತೆ ನೀತಿ ಸಂಹಿತೆ ಜಾರಿಯಾಗುವ ಎಲ್ಲ ಸೂಚನೆಗಳಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ ತಡೆ ಬೀಳಲಿದೆ.

after byelection chikkaballapur to face Municipal Elections
Author
Bangalore, First Published Dec 14, 2019, 11:48 AM IST

ಚಿಕ್ಕಬಳ್ಳಾಪುರ(ಡಿ.14): ಕ್ಷೇತ್ರದ ಉಪ ಚುನಾವಣೆ ಕಾವು ಇನ್ನೂ ಇಳಿಯುವ ಮೊದಲೇ ಜಿಲ್ಲಾ ಕೇಂದ್ರಕ್ಕೆ ಮತ್ತಂದು ಚುನಾವಣೆ ಎದುರಾಗಿದ್ದು, ಮತ್ತೆ ನಗರದಲ್ಲಿ ಚುನಾವಣಾ ಪ್ರಚಾರದ ಅಬ್ಬರಕ್ಕೆ ಶೀಘ್ರವೇ ನಾಂದಿಯಾಗಲಿದೆ.

ಕಳೆದ ಎರಡು ತಿಂಗಳಿನಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂಬ ಆರೋಪದ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಗಳು ಆಗಮಿಸಿದ್ದು, ಮತ್ತೆ ನೀತಿ ಸಂಹಿತೆ ಜಾರಿಯಾಗುವ ಎಲ್ಲ ಸೂಚನೆಗಳಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ ತಡೆ ಬೀಳಲಿದೆ.

ಏನಿದು ಚುನಾವಣೆ?

ಚಿಕ್ಕಬಳ್ಳಾಪುರ ನಗರಸಭೆಯ ಮಾಜಿ ಸದಸ್ಯರೊಬ್ಬರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ, ಕಳೆದ ಸುಮಾರು ಒಂದು ವರ್ಷದಿಂದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದೆ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಕೂಡಲೇ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡುವಂತೆ ಕೋರಿದ್ದರು.

ಕರ್ತವ್ಯದ ವೇಳೆ ಕಚೇರಿಗೆ ಬೀಗ ಹಾಕಿ ತಹಸೀಲ್ದಾರ್‌ ಬರ್ತ್‌ ಡೇ ಪಾರ್ಟಿ..!

ಡಿ.11ರಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಸ್ತುತ ಚಿಕ್ಕಬಳ್ಳಾಪುರ ಉಪ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಮುಂದಿನ 8 ವಾರಗಳ ಒಳಗೆ ನಗರಸಭೆ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಹಾಗಾಗಿ ಅನಿವಾರ್ಯವಾಗಿ 8 ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದ್ದು, ಡಿಸೆಂಬರ್‌ ಕೊನೇ ವಾರದಲ್ಲಿ ಮತ್ತೆ ನೀತಿಸಂಹಿತೆ ಜಾರಿಯಾಗುವ ಸೂಚನೆಗಳಿವೆ ಎನ್ನಲಾಗಿದೆ.

10 ತಿಂಗಳಿಂದ ಆಡಳಿತ ಮಂಡಳಿ ಇಲ್ಲ

ಚಿಕ್ಕಬಳ್ಳಾಪುರ ನಗರಸಭೆಯ ಕಳೆದ ಆಡಳಿತ ಮಂಡಳಿ ಅವಧಿ 2019ರ ಮಾಚ್‌ರ್‍ 18ಕ್ಕೆ ಮುಕ್ತಾಯವಾಗಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2019ರ ಜನವರಿಯಲ್ಲಿಯೇ ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಯಾಗಬೇಕಿತ್ತು. ಆದರೆ ವಾರ್ಡುವಾರು ಮೀಸಲಾತಿಯಲ್ಲಿ ತಪ್ಪುಗಳಿವೆ ಎಂದು ಆರೋಪಿಸಿ ಹಲವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಚುನಾವಣೆ ಮುಂದೂಡಲಾಗಿತ್ತು.

ಇನ್ನೂ ಮುಗಿದಿಲ್ಲ ಮೀಸಲಾತಿ ರಗಳೆ!

ಚಿಕ್ಕಬಳ್ಳಾಪುರ ನಗರ ಸಭೆಯಲ್ಲಿ ಒಟ್ಟು 31 ವಾರ್ಡುಗಳಿದ್ದು, ಇದರಲ್ಲಿ ಸುಮಾರು 7 ವಾರ್ಡುಗಳಲ್ಲಿ ಮೀಸಲಾತಿ ಪದೇ ಪದೇ ಪುನರಾವರ್ತನೆಯಾಗುತ್ತಿದೆ ಎಂದು ಆರೋಪಿಸಿ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟಿನಲ್ಲಿ ರಾಜ್ಯ ಸರ್ಕಾರ ಮಾಡಿದ್ದ ಮೀಸಲಾತಿಯನ್ನೇ ಎತ್ತಿ ಹಿಡಿದ ಪರಿಣಾಮ ಸುಪ್ರೀಂ ಕೋರ್ಟಿನ ಬಾಗಿಲು ಬಡಿಯಲಾಗಿತ್ತು.

ಸುಳ್ವಾಡಿ ವಿಷ ದುರಂತ: ದೇವಳ ಬಾಗಿಲು ತೆರೆಯಲು ಹೆಚ್ಚಿದ ಒತ್ತಡ

ಆದರೆ ಸುಪ್ರೀಂ ಕೋರ್ಟಿನಲ್ಲಿಯೂ ಮೀಸಲಾತಿ ಬದಲಾವಣೆ ಅರ್ಜಿ ತಿರಸ್ಕರಿಸುವ ಮೂಲಕ ಚುನಾವಣೆಗೆ ಹಸಿರು ನಿಶಾನೆ ತೋರಿತ್ತು. ಈ ನಡುವೆ ಮತ್ತೊಬ್ಬರು ನಗರದ 17ನೇ ವಾರ್ಡಿನ ಮೀಸಲಾತಿ ಬದಲಿಸುವಂತೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದಾಗಿ ವಿಧಾನಸಭಾ ಉಪ ಚುನಾವಮೆಗೂ ಮೊದಲೇ ನಡೆಯಬೇಕಿದ್ದ ನಗರಸಭಾ ಚುನಾವಣೆ ಮತ್ತೆ ಮುಂದೂಡಲ್ಪಟ್ಟಿತ್ತು.

ಪ್ರಸ್ತುತ ಮೀಸಲಾತಿ ಕತೆ ಏನು?

ಈ ಹಿಂದೆ ರಾಜ್ಯ ಸರ್ಕಾರ ನಿಗದಿ ಮಾಡಿದ್ದ ಮೀಸಲಾತಿಯಂತೆಯೇ ಚುನಾವಣೆ ನಡೆಯಲಿದೆಯೇ ಅಥವಾ ನೂತನ ಬಿಜೆಪಿ ಸರ್ಕಾರದಿಂದ ಮತ್ತೆ ಮೀಸಲಾತಿ ಬದಲಾವಣೆ ಆಗಲಿದೆಯೇ ಎಂಬುದು ಪ್ರಸ್ತುತ ಎದುರಾಗಿರುವ ಪ್ರಶ್ನೆಯಾಗಿದ್ದು, ಪದೇ ಪದೇ ದಶಕಗಳಿಂದ ಪುನರಾವರ್ತನೆಯಾಗುತ್ತಿರುವ ಮೀಸಲಾತಿಗೆ ಶತಾಯಗತಾಯ ಬದಲಿಸಲೇಬೇಕು ಎಂಬ ಹಠದೊಂದಿಗೆ ಸುಪ್ರೀಂ ಕೋರ್ಟಿನವರೆಗೂ ಹೋಗಿದ್ದ ಹಲವರು ಈಗ ರಾಜೀಯಾಗಿ ಹಳೇ ಮೀಸಲಾತಿಗೆ ಜೋತು ಬೀಳಲಿದ್ದಾರೆಯೇ ಅಥವಾ ಬದಲಿಸಲು ಶ್ರಮಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ?

ಇನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಿವೆಯೇ ಅಥವಾ ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸಲಿವೆಯೇ ಎಂಬುದು ಇನ್ನೂ ಬಹಿರಂಗವಾಗಬೇಕಿದೆ. ಒಟ್ಟಿನಲ್ಲಿ ವಿಧಾನಸಭಾ ಉಪ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ನಗರಸಭೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದು, ನಗರ ವ್ಯಾಪ್ತಿಯಲ್ಲಿ ಮತ್ತೆ ಚುನಾವಣಾ ಕಾವು ಮುಗಿಲು ಮುಟ್ಟುವ ಸೂಚನೆಗಳಿವೆ.

ಅರಳಲಿದೆಯೇ ಕಮಲ?

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಈವರೆಗೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರೇ ಪ್ರಾಬಲ್ಯ ಮೆರೆದಿದ್ದಾರೆ. ಆದರೆ ಪ್ರಸ್ತುತ ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕರು ಜಯಗಳಿಸಿರುವ ಕಾರಣ ನಗರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ನಗರಸಭೆ ಚುನಾವಣೆಗಾಗಿ ಈಗಾಗಲೇ ಆಕಾಂಕ್ಷಿಗಳು ಸಿದ್ಧರಾಗಿದ್ದು, ಈವರೆಗೆ ಯಾವುದೇ ಪೈಪೋಟಿ ಇಲ್ಲದ ಟಿಕೆಟ್‌ ಹಂಚಿಕೆಗೆ ಇದೇ ಮೊದಲ ಬಾರಿಗೆ ಬೇಡಿಕೆ ಹೆಚ್ಚಾಗಿದ್ದು, ಎಲ್ಲ ಆಕಾಂಕ್ಷಿಗಳನ್ನು ಸಮಾಧಾನಪಡಿಸಿ, ಮೊದಲ ಬಾರಿಗೆ ನಗರಸಭೆಯನ್ನು ಕೇಸರಿಮಯ ಮಾಡುವತ್ತ ಶಾಸಕ ಡಾ.ಕೆ. ಸುಧಾಕರ್‌ ಅವರ ಚಿತ್ತ ಈಗಾಗಲೇ ಇದೆ ಎನ್ನಲಾಗಿದೆ.

- ಅಶ್ವತ್ಥನಾರಾಯಣ ಎಲ್‌.

Follow Us:
Download App:
  • android
  • ios