ತಾಲೂಕಿನಾದ್ಯಂತ ಸೋಮವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಗದಗ- ವಾಡಿ ರೈಲ್ವೆ ಯೋಜನೆಗೆ ನಿರ್ಮಿಸಿರುವ ತಾಲೂಕಿನ ದ್ಯಾಂಪೂರು ಗ್ರಾಮದ ತೊಂಡಿಹಾಳ ರಸ್ತೆಯ ಬ್ರಿಡ್ಜ್‌ ಮಳೆನೀರಿನಿಂದ ಹಳ್ಳದಂತಾಗಿದೆ.

ಕುಕನೂರು (ಅ.11) : ತಾಲೂಕಿನಾದ್ಯಂತ ಸೋಮವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಗದಗ- ವಾಡಿ ರೈಲ್ವೆ ಯೋಜನೆಗೆ ನಿರ್ಮಿಸಿರುವ ತಾಲೂಕಿನ ದ್ಯಾಂಪೂರು ಗ್ರಾಮದ ತೊಂಡಿಹಾಳ ರಸ್ತೆಯ ಬ್ರಿಡ್ಜ್‌ ಮಳೆನೀರಿನಿಂದ ಹಳ್ಳದಂತಾಗಿದೆ.. ಗ್ರಾಮೀಣ ಪ್ರದೇಶಕ್ಕೆ ತೆರಳಲು ಮುಖ್ಯ ರಸ್ತೆಯಲ್ಲಿ ರೈಲ್ವೆ ಹಳಿ ದಾಟಲು ಅಂಡರ್‌ ಬ್ರಿಡ್ಜ್‌ ನಿರ್ಮಿಸಿದ್ದಾರೆ. ಆದರೆ ಇದು ಸದ್ಯ ಎಲ್ಲರಿಗೂ ತೊಂದರೆದಾಯಕವಾಗಿದೆ. ಇಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಹೀಗಾಗಿ ಅಂಡರ್‌ ಬ್ರಿಡ್ಜ್‌ ಮಾಡಿದ್ದಕ್ಕೆ ಸದ್ಯ ಸ್ಥಳೀಯರು ರೈಲ್ವೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬಹುತೇಕ ಮಳೆಗಾಲದಲ್ಲಿ ಸಮಸ್ಯೆ ಜನರಿಗೆ ತಪ್ಪಿದ್ದಲ್ಲ.

ಮಳೆಯಾದರೆ ರೈಲ್ವೆ ಬ್ರಿಡ್ಜ್‌ ಸುಮಾರು ಏಳರಿಂದ ಎಂಟು ಅಡಿ ನೀರಿನಿಂದ ಆವೃತ್ತವಾಗಿ ಬಿಡುತ್ತವೆ. ಹಳ್ಳದ ಹರಿವಿಗಿಂತ ಹೆಚ್ಚಾಗಿ ಬ್ರಿಡ್ಜ್‌ ಕೆಳಗೆ ಮಳೆ ನೀರಿನ ಹರಿವು ಹೆಚ್ಚಾಗಿರುತ್ತದೆ. ಬೇರೆ ರಸ್ತೆ ಮಾರ್ಗವಿಲ್ಲದೆ ಜನರು ಮಳೆ ನೀರಿನ ಹರಿವು ತಗ್ಗುವರೆಗೂ ಕಾದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಸಿಲುಕಿದ ಟ್ರ್ಯಾಕ್ಟರ್‌:

ರೈಲ್ವೆ ಸೇತುವೆ ಕೆಳಗೆ ನೀರಿನ ಹರಿವು ತಿಳಿಯದೇ ಟ್ರ್ಯಾಕ್ಟರ್‌ ಚಾಲಕರೊಬ್ಬರು ಬಂದಿದ್ದು, ವಾಹನದ ಎಂಜಿನಿನ ಫ್ಯಾನ್‌ ನೀರಿನ ರಭಸಕ್ಕೆ ತುಂಡಾಗಿದೆ. ಇದರಿಂದ ಟ್ರ್ಯಾಕ್ಟರ್‌ ನೀರಿನಲ್ಲಿಯೇ ನಿಲ್ಲುವಂತಾಗಿತ್ತು.

ರೈತರ ಜಮೀನು ಹಾಳು:

ಬ್ರಿಡ್ಜ್‌ ಬಳಿ ಇರುವ ರೈತರ ಜಮೀನು ಬಹುತೇಕ ಮಳೆನೀರಿನಿಂದ ಹಾಳಾಗುತ್ತಿವೆ. ನೀರಿನ ಹರಿವು ಸರಾಗವಾಗದ ಕಾರಣ ಸುತ್ತಮುತ್ತಲಿನ ಜಮೀನು ಕೆಟ್ಟು ಹೋಗುತ್ತಿವೆ. ಜಮೀನಿನ ಮಣ್ಣು ಕೊಚ್ಚಿಕೊಂಡುಹೋಗುತ್ತಿದೆ. ಹಳ್ಳದ ನೀರಿನ ರಭಸಕ್ಕೆ ಬ್ರಿಡ್ಜ್‌ ಬಳಿಯ ಎರಡು ಬದಿಯ ತಡೆಗೋಡೆಗಳಿಗೆ ಹಾನಿಯಾಗಿವೆ. ಇದರಿಂದ ರೈತರ ಜಮೀನು ಸಹ ಹಾಳಾಗುತ್ತಿದೆ. ಅಲ್ಲದೆ ರಸ್ತೆಯೂ ಕಿತ್ತುಕೊಂಡು ಹೋಗುತ್ತಿದೆ.

Dharwad Heavy Rains: ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ