ಐತಿಹಾಸಿಕ ಉಚ್ಚಂಗಮ್ಮ ಜಾತ್ರೆಗೆ ಚಾಲನೆ  ಐತಿಹಾಸಿಕ ರಾಜ್ಯಪ್ರಸಿದ್ದಿ ಉಚ್ಚಂಗಿದುರ್ಗ  ಜಾತ್ರೆಗೆ ಹರಿದು ಬರುತ್ತಿರುವ ಜನಸಾಗರ  ವಿಜಯನಗರ  ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಪ್ರತಿ ವರ್ಷ ಯುಗಾದಿಗೆ ಜಾತ್ರೆ  

ವರದಿ: ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯನಗರ, (ಏ.01) : ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕಳೆಗುಂದಿದ್ದ ಐತಿಹಾಸಿಕ ಉಚ್ಚಂಗಮ್ಮ ಜಾತ್ರೆಗೆ ಚಾಲನೆ ಸಿಕ್ಕಿದೆ. ವಿಜಯನಗರ  ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಪ್ರತಿ ವರ್ಷ ಯುಗಾದಿಗೆ ಉಚ್ಚಂಗಮ್ಮನ ಜಾತ್ರಾ ಮಹೋತ್ಸವ  ನಡೆಯುತ್ತದೆ. 

ಉಚ್ಚಂಗಿದುರ್ಗ ಗ್ರಾಮದ ಬೆಟ್ಟಕ್ಕೆ ಹೊಂದಿಕೊಂಡಿರುವ  ಹಾಲಮ್ಮನ ತೋಫಿನಲ್ಲಿ ಮಾ.31 ರಿಂದ ಏ.04 ರವರೆಗೂ  ಜಾತ್ರೆ  ನಡೆಯಲಿದೆ. ಕೋವಿಡ್-19 ನಿಂದ ಕಳೆದ ಎರಡು ವರ್ಷ ಜಾತ್ರೆಗೆ ನಿರ್ಬಂಧ ಹೇರಿದ್ದು, ಈ ವರ್ಷ ಕೋವಿಡ್ ಸೋಂಕು ಕಡಿಮೆಯಾದ ಕಾರಣ ಜಾತ್ರೆಗೆ ಭಕ್ತ ಸಾಗರವೇ ಹರಿದುಬರುತ್ತಿದೆ‌. ಬಂಡಿ ಗಾಡಿ ಟ್ರಾಕ್ಟರ್ , ಬಸ್ ಇತರೇ ವಾಹನಗಳಲ್ಲಿ  ಬರುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯ ಕೊರತೆಯಾಗದಂತೆ ತಾಲ್ಲೂಕು  ಆಡಳಿತ, ಉಚ್ಚಂಗಿದುರ್ಗ ಗ್ರಾಮ ಪಂಚಾಯಿತಿ ಎಚ್ಚರವಹಿಸಿದೆ. ನೀರು‌ ವಸತಿ ಶುದ್ಧ ಕುಡಿಯುವ ನೀರು ಸ್ವಚ್ಛತೆ ಸೇರಿದಂತೆ ಎಲ್ಲವುಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು‌ ನಿಗಾವಹಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀ ಹಾಲಮ್ಮ ದೇವಸ್ಥಾನದ ಸಮಿತಿ, ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳ ಆಧಿಕಾರಿಗಳು ಭಕ್ತರ ಬಗ್ಗೆ ವಿಶೇಷ ನಿಗಾವಹಿಸಿವೆ.

ದೇವದಾಸಿ ಪದ್ಧತಿ ಮೌಢ್ಯ ಆಚರಣೆಗೆ ಕಟ್ಟುನಿಟ್ಟಿನ ಬ್ರೇಕ್
ಹರಪನಹಳ್ಳಿ ತಹಶೀಲ್ದಾರ್  ಪ್ರಭಾಕರ್, ಡಿವೈಎಸ್ಪಿ ಹಾಲುಮೂರ್ತಿರಾವ್ , ಸಿಪಿಐ ನಾಗರಾಜ್  ಉಚ್ಚಂಗಿದುರ್ಗಕ್ಕೆ ಭೇಟಿ ನೀಡಿ ಪರಿಶೀಲನೆ   ಯುಗಾದಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯಕ್ಕೆ ಕೊರತೆಯಾಗದಂತೆ ಎಚ್ಚರವಹಿಸಬೇಕು.ಅದೇ ರೀತಿ  ದೇವದಾಸಿ ಪದ್ಧತಿ ಆಚರಣೆ  ನಡೆಯದಂತೆ ಸಂಬಂಧಪಟ್ಟ ಸೂಚನೆ ನೀಡಿ ಅಧಿಕಾರಿಗಳು 24 ಗಂಟೆ ಕಣ್ಗಾವಲಿರುವಂತೆ ಸೂಚಿಸಿದ್ದಾರೆ.

ಸಾರಿಗೆ ಇಲಾಖೆಯಿಂದ ವಿಶೇಷ ಬಸ್ ವ್ಯವಸ್ಥೆ
 ಕ್ಷೇತ್ರ ಉಚ್ಚಂಗಿದುರ್ಗದಲ್ಲಿ ಏ.03 ಮತ್ತು 04 ರಂದು ಜರುಗಲಿರುವ ಉತ್ಸವಾಂಬ ದೇವಿ ಜಾತ್ರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಾವಣಗೆರೆ ಘಟಕಗಳ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಭಕ್ತಾಧಿಕಾಗಳ ಅನುಕೂಲಕ್ಕಾಗಿ 35 ಹೆಚ್ಚುವರಿ ವಿಶೇಷ ಬಸ್ ಬಿಡಲಾಗಿದೆ. ಪ್ರಯಾಣಿಕರ ಜನದಟ್ಟಣೆಗನುಣವಾಗಿ ಹೆಚ್ಚುವರಿ ವಾಹನ ಸಂಚಾರ ಮಾಡಲಿವೆ  ಭಕ್ತಾದಿಗಳು ಇದರ ಸದುಪಯೋಗ ಪಡೆಯಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈ ಬಾರಿ ಯುಗಾಧಿ ಪ್ರಯುಕ್ತ ದೇವಸ್ಥಾನದಲ್ಲೇ ಬೇವು ಬೆಲ್ಲ ವಿತರಣೆ
ವಿಶೇಷವಾಗಿ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಏ.02 ರಂದು ಶನಿವಾರ ಧಾರ್ಮಿಕ ಆಚರಣೆ ಪ್ರಯುಕ್ತ ದೇವಸ್ಥಾನದಲ್ಲಿ ಹೊಸ ಶುಭ ಕೃತ ನಾಮ ಸಂವತ್ಸರದ ರಾಶಿ ಫಲಗಳ ಮಾಹಿತಿ, ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ,ದೇವಿಯ ಭಜನೆ,ಚೌಟಕಿ ಪದಗಳು,ಬೇವು ಬೆಲ್ಲ ವಿತರಣೆ ಮೂಲಕ ಯುಗಾದಿ ಆಚರಿಸಲಾಗುತ್ತದೆ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಕೋರಿದ್ದಾರೆ.