ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಶಾಸಕ ಆರ್.ಮಂಜುನಾಥ್ ಫೋಟೋ ಇರುವ ಗ್ರೀನ್ ಶೆಫ್ ಕಂಪನಿಯ ಕುಕ್ ಸೆಟ್ ಪತ್ತೆಯಾಗಿದೆ. ಕೂಡಲೇ ಚಾಲಕನ ಸಮೇತ ವಾಹನವನ್ನು ವಶಕ್ಕೆ ಪಡೆದು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಅಡಿ ಅಧಿಕಾರಿಗಳು ದೂರು ದಾಖಲಿಸಿದರು.
ಪೀಣ್ಯ ದಾಸರಹಳ್ಳಿ(ಮಾ.31): ಗ್ರೀನ್ ಶೆಫ್ ಕಂಪನಿಯ ಸುಮಾರು 2.5 ಲಕ್ಷ ಮೌಲ್ಯದ ಕುಕ್ಕರ್, ತವಾ ಸೆಟ್ ಹೊಂದಿದ ಸುಮಾರು 800 ಬಾಕ್ಸ್ಗಳನ್ನು ಸಾಗಾಣೆ ಮಾಡುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಗುರುವಾರ ಬೆಳಗ್ಗೆ 7ರ ಸುಮಾರಿಗೆ ಪೀಣ್ಯ ಬೃಂದಾವನ ಬಸ್ ನಿಲ್ದಾಣದ ಬಳಿ ಟ್ರಕ್ ಅಡ್ಡಗಟ್ಟಿ ಪರಿಶೀಲಿಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಶಾಸಕ ಆರ್.ಮಂಜುನಾಥ್ ಫೋಟೋ ಇರುವ ಗ್ರೀನ್ ಶೆಫ್ ಕಂಪನಿಯ ಕುಕ್ ಸೆಟ್ ಪತ್ತೆಯಾಗಿದೆ. ಕೂಡಲೇ ಚಾಲಕನ ಸಮೇತ ವಾಹನವನ್ನು ವಶಕ್ಕೆ ಪಡೆದು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಅಡಿ ಅಧಿಕಾರಿಗಳು ದೂರು ದಾಖಲಿಸಿದರು.
ಈ ವೇಳೆ ಪೊಲೀಸ್ ಠಾಣಾ ಬಳಿಗೆ ಬಂದ ಮಾಜಿ ಶಾಸಕ ಎಸ್.ಮುನಿರಾಜು, ಪೊಲೀಸರು ಮತ್ತು ಚುನಾವಣಾಧಿಕಾರಿಗಳ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಮುನಿರಾಜು, ಕಳೆದ ಬಾರಿ ಇದೇ ರೀತಿ ಮತದಾರರಿಗೆ ಕೂಪನ್ ಕೊಟ್ಟು ಅವ್ಯವಹಾರದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಮತ ಪಡೆಯೋ ಯೋಗ್ಯತೆ ಇಲ್ಲ. ವಾಮಮಾರ್ಗದಲ್ಲಿ ಮತದಾರರಿಗೆ ಆಮಿಷ ಒಡ್ಡಿ ಮತ ಪಡೆಯಲು ಮುಂದಾಗಿದ್ದಾರೆ. ಅದಕ್ಕೆ ಸಾಕ್ಷಿ ನಿಮ್ಮ ಕಣ್ಣ ಮುಂದಿದೆ. ಈ ಪ್ರಕರಣಕ್ಕೆ ಸಂಬಂಧ ಚುನಾವಣಾ ಅಧಿಕಾರಿಗಳು, ತಹಸೀಲ್ದಾರ್, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯನಗರದಲ್ಲಿ ಭರ್ಜರಿ ಬೇಟೆ: ದಾಖಲೆ ಇಲ್ಲದ ಕೋಟ್ಯಂತರ ರೂ. ಜಪ್ತಿ..!
ಕಳೆದ ಒಂದು ವಾರದಿಂದ ದಾಸರಹಳ್ಳಿ ಕ್ಷೇತ್ರದಲ್ಲಿ ಮತದಾರರ ಮನೆ ಮನೆಗೆ ತೆರಳಿ ಕುಕ್ಕರ್, ತವ, ಹಾಟ್ ಬಾಕ್ಸ್ ಹಂಚಿ ಜೆಡಿಎಸ್ ಶಾಸಕ ಆರ್.ಮಂಜುನಾಥ್ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ವಾರದಿಂದಲೂ ಪೀಣ್ಯ, ಬಾಗಲಗುಂಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತದಾರರ ಮನೆಗೆ ತೆರಳಿ ಬಾಕ್ಸ್ಗಳ ಹಂಚಿಕೆ ಬಗ್ಗೆ ಸಾಕಷ್ಟುದೂರುಗಳು ಬಂದಿದ್ದವು ಅಂತ ಮಾಜಿ ಶಾಸಕ ಎಸ್.ಮುನಿರಾಜು ತಿಳಿಸಿದ್ದಾರೆ.
ಶ್ರೀರಾಮ ನವಮಿ ಪ್ರಯುಕ್ತ ಕೆಲವು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಬ್ಬಕ್ಕೆ ಉಡುಗೊರೆ ಕೇಳಿದ್ದರು. ಹಾಗಾಗಿ ಒಂದು ವಾರದ ಹಿಂದೆ ಗ್ರೀನ್ ಶೆಫ್ ಕಂಪನಿಯಿಂದ ಬುಕ್ ಮಾಡಲಾಗಿತ್ತು. ದಿಢೀರನೇ ನೀತಿ ಸಂಹಿತಿ ಜಾರಿ ಆಗಿದ್ದರಿಂದ ಕಂಪನಿಗೆ ಹಿಂದುರಿಗಿಸುವಂತೆ ಸೂಚಿಸಲಾಗಿತ್ತು. ಫ್ಯಾಕ್ಟರಿಗೆ ಹೋಗುವಾಗ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಅಂತ ಶಾಸಕ ಆರ್.ಮಂಜುನಾಥ್ ತಿಳಿಸಿದ್ದಾರೆ.
