ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ| ಭಾನು​ವಾ​ರ 5,000 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಸೋಮವಾರ 35,880 ಕ್ಯುಸೆಕ್‌ ನೀರನ್ನು ಬಿಡಲಾಯಿತು. ಮಂಗಳವಾರ 22 ಗೇಟ್‌ಗಳ ಮೂಲಕ 73508 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು| ಇಂದು ನದಿಗೆ 80,000 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುವುದು| 

ಮುನಿರಾಬಾದ್‌(ಆ.19): ಮಂಗಳವಾರ ಮಧ್ಯಾಹ್ನದಿಂದ ತುಂಗಭದ್ರಾ ಜಲಾಶಯದ 22 ಗೇಟ್‌ಗಳ ಮೂಲಕ ನದಿಗೆ 73508 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ 22 ಗೇಟ್‌ಗಳನ್ನು 2 ಅಡಿ ಎತ್ತರಕ್ಕೆ ತೆಗೆದು ನದಿಗೆ ನೀರನ್ನು ಹರಿಸಲಾಗುತ್ತಿದೆ. ಜಲಾಶಯಕ್ಕೆ ಅಷ್ಟೇ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಮಂಗಳವಾರ ಬೆಳಗ್ಗೆ ಜಲಾಶಯಕ್ಕೆ 49,439 ಕ್ಯುಸೆಕ್‌ ನೀರು ಹರಿದು ಬಂದಿತ್ತು. 20 ಗೇಟ್‌ಗಳಿಂದ 37,948 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 11 ಗಂಟೆಗೆ ಒಳಹರಿವಿನ ಪ್ರಮಾಣ 50,000 ಕ್ಯುಸೆಕ್‌ಗೆ ಏರಿತು. 20 ಗೇಟ್‌ಗಳ ಪೈಕಿ 10 ಗೇಟನ್ನು 2.5 ಅಡಿ ಎತ್ತರಕ್ಕೆ ತೆಗೆದು ಹಾಗೂ 10 ಗೇಟ್‌ಗಳನ್ನು 1.5 ಅಡಿ ಎತ್ತರಕ್ಕೆ ತೆಗೆದು 52,000 ಕ್ಯುಸೆಕ್‌ ನೀರನ್ನು ಹರಿಸಲಾಯಿತು. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದರಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವನ್ನೂ ಸಂಜೆ ಹೆಚ್ಚಿಸಲಾಯಿತು.

ಕೊಪ್ಪಳ: ಕೇವಲ 10 ದಿನ​ಗ​ಳಲ್ಲಿ ತುಂಬಿದ ತುಂಗಭದ್ರಾ ಜಲಾಶಯ

ನೀರಿನ ಒಳಹರಿವಿನಲ್ಲಿ ಏರಿಕೆ:

ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಭಾನು​ವಾ​ರ 5,000 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಸೋಮವಾರ 35,880 ಕ್ಯುಸೆಕ್‌ ನೀರನ್ನು ಬಿಡಲಾಯಿತು. ಮಂಗಳವಾರ 22 ಗೇಟ್‌ಗಳ ಮೂಲಕ 73508 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಆ. 19ರ ಬುಧವಾರ ನದಿಗೆ 80,000 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ನದಿ ಪಾತ್ರದಲ್ಲಿ ಪ್ರವಾಹ:

ಆನೆಗುಂದಿ ಪ್ರಸಿದ್ಧ ನವ ಬೃಂದಾವನ ಈಗ ಜಲಾವೃತಗೊಂಡಿದೆ. ಹಂಪಿಯ ಪುರಂದರದಾಸರ ಮಂಟಪ ಈಗ ಜಲಾವೃತವಾಗಿದೆ. ಜಲಾಶಯದಿಂದ 80,000 ಕ್ಯುಸೆಕ್‌ ನೀರು ಬಿಟ್ಟರೆ ಅದು ಸಂಪೂರ್ಣವಾಗಿ ಜಲಾವೃತಗೊಳ್ಳಲಿ​ದೆ.