ಚಾಮರಾಜನಗರ ಬೆತ್ತಲೆ ಮೆರವಣಿಗೆ : ಆರು ಮಂದಿಗೆ ಜಾಮೀನು
ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಚಾಮರಾಜನಗರ (ಜು.23) : ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಕೆಬ್ಬೇಕಟ್ಟೆಗ್ರಾಮದಲ್ಲಿ ನಡೆದಿದ್ದ ದಲಿತ ಯುವಕನ ದೌರ್ಜನ್ಯ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿಗೆ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಗುಂಡ್ಲುಪೇಟೆಯ ಕೆಬ್ಬೇಕಟ್ಟೆಯಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಎಸಗಲಾಗಿದೆ ಎಂದು ಜೂ.11ರಂದು ಯುವಕನ ಸಂಬಂಧಿ ಕಾಂತರಾಜು ಎಂಬುವರು ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳಾದ ದೇವಾಲಯದ ಅರ್ಚಕ ಶಿವಪ್ಪ, ಬಸವರಾಜು, ಪುಟ್ಟಸ್ವಾಮಿ, ಮಾಣಿಕ್ಯ, ಸತೀಶ್, ಚನ್ನಕೇಶವಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ಕಳೆದ ಒಂದು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಆರೋಪಿಗಳ ಪರವಾಗಿ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ.ಬಸವರಾಜ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದರು.