ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಕ್ಯಾಂಪಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಉಪಪ್ರಾಂಶುಪಾಲ ಮುರಳಿಧರ ರಾವ್‌, ಸಹ ಶಿಕ್ಷಕರಾದ ಲಿಂಗಪ್ಪ ಪೂಜಾರ, ಕೇಶವ ಕುಮಾರ, ಅಬ್ದುಲ್‌ ಅಜೀಜ್‌ ಮತ್ತು ಚನ್ನಪ್ಪ ರಾಠೋಡ ಅವರು ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.

ರಾಯಚೂರು(ಡಿ.25): ಶಾಲೆ ಅವಧಿಯಲ್ಲಿ ಮದ್ಯ ಸೇವಿಸಿದ ಐದು ಜನ ಶಿಕ್ಷಕರನ್ನು ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಗರಿಮಾ ಪವಾರ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಕ್ಯಾಂಪಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಉಪಪ್ರಾಂಶುಪಾಲ ಮುರಳಿಧರ ರಾವ್‌, ಸಹ ಶಿಕ್ಷಕರಾದ ಲಿಂಗಪ್ಪ ಪೂಜಾರ, ಕೇಶವ ಕುಮಾರ, ಅಬ್ದುಲ್‌ ಅಜೀಜ್‌ ಮತ್ತು ಚನ್ನಪ್ಪ ರಾಠೋಡ ಅವರು ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.

Add Asianetnews Kannada as a Preferred SourcegooglePreferred

ಐದು ಜನ ಶಿಕ್ಷಕರು ಅವಧಿಗಿಂತ ಮುಂಚಿತವಾಗಿ ಶಾಲೆ ಮುಚ್ಚಿ ಹಟ್ಟಿಯ ಹೊರವಲಯದಲ್ಲಿನ ಡಾಬಾವೊಂದರಲ್ಲಿ ಮದ್ಯಪಾನ ಮಾಡಿದ್ದು, ಶಿಕ್ಷಕರ ದುರ್ನಡತೆಯ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಗೊಂಡಿದ್ದವು. ಇದನ್ನಾಧರಿಸಿ ಲಿಂಗಸುಗೂರು ಬಿಇಒ ಐದು ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ ಮೇಲಾಧಿಕಾರಿಗಳಿಗೆ ದೂರನ್ನು ಸಹ ಸಲ್ಲಿಸಿದ್ದರು. ಇದನ್ನಾಧರಿಸಿ ಡಿಡಿಪಿಐ ವೃಷಬೇಂದ್ರ ಅವರು ಆಯುಕ್ತರಿಗೆ ವರದಿ ಸಲ್ಲಿಸಿ ಕ್ರಮಕೈಗೊಳ್ಳಲು ತಿಳಿಸಿದ್ದರು. ಮಕ್ಕಳ ಉತ್ತಮ ಜೀವನ ನಿರ್ಮಾಣ ಮಾಡುವ ಪವಿತ್ರ ವೃತ್ತಿಯಾದ ಶಿಕ್ಷಕ ಹುದ್ದೆಗೆ ಕುಂದುಂಟು ಮಾಡಿ, ದುರ್ವತನೆ ಹಾಗೂ ಕರ್ತವ್ಯಲೋಪವೆಸಗಿದ್ದರಿಂದ ಐದು ಜನರನ್ನು ಅಮಾನತು ಮಾಡಲಾಗಿದೆ.

Raichur: ಸಂತೋಷ್‌ ಜಿ ಬಗ್ಗೆ ಮಾತನಾಡುವ ನೈತಿಕತೆ ಕುಮಾರಸ್ವಾಮಿಗೆ ಇಲ್ಲ : ಶಾಸಕ ಕೆ.ಶಿವನಗೌಡ ನಾಯಕ

ಈ ಶಿಕ್ಷಕರ ವರ್ತನೆಯು ಸಮಾಜಕ್ಕೆ ಹಾಗೂ ಇಲಾಖೆಗೆ ತೀವ್ರ ಮುಜುಗುರ ಉಂಟು ಮಾಡಿದೆ. ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳನ್ನು ಉಲ್ಲಂಘಿಸಿ, ಸರ್ಕಾರಿ ನೌಕರನು ಅಧಿಕೃತ ಕರ್ತವ್ಯದ ಸಮಯದಲ್ಲಿ ಯಾವುದೇ ಅಮಲುಕಾರಕ ಮದ್ಯಪಾನ ಅಥವಾ ಮಾದಕ ವಸ್ತುಗಳ ಸೇವೆಯ ಅಮಲಿನಲ್ಲಿರಬಾರದು. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯವನ್ನು ಅಥವಾ ಮಾದಕ ವಸ್ತುವನ್ನು ಸೇವಿಸತಕ್ಕದಲ್ಲ ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಸಹ ಶಿಕ್ಷಕರು ದುವರ್ತನೆ ತೋರಿದ್ದಾರೆ. ಜವಾಬ್ದಾರಿ ಹಾಗೂ ಗೌರವಾನ್ವಿತ ಶಿಕ್ಷಕ ಹುದ್ದೆಗೆ ಅಗೌರವ ಉಂಟು ಮಾಡಿದ್ದಲ್ಲದೆ ಶಿಕ್ಷಕರ ನಡತೆ ನಿಯಮಗಳನ್ನು ಉಲ್ಲಂಘಿಸಿ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದಾರೆ.