ಆಟವಾಡಲು ಬಲೂನು ಖರೀದಿಸಲು ಚಿಕ್ಕಪ್ಪನಿಂದ ಒಂದು ರು. ನಾಣ್ಯ ಪಡೆದ 4 ವರ್ಷದ ಮಗು ಆಟವಾಡುತ್ತಲೇ ನಾಣ್ಯವನ್ನು ನುಂಗಿ ಜೀವವನ್ನೇ ಕಳೆದುಕೊಂಡಿದೆ

ಹುಣಸೂರು (ಸೆ.07): ಆಟವಾಡಲು ಬಲೂನು ಖರೀದಿಸಲು ಚಿಕ್ಕಪ್ಪನಿಂದ ಒಂದು ರು. ನಾಣ್ಯ ಪಡೆದ 4 ವರ್ಷದ ಮಗು ಆಟವಾಡುತ್ತಲೇ ನಾಣ್ಯವನ್ನು ನುಂಗಿ ಜೀವವನ್ನೇ ಕಳೆದುಕೊಂಡಿರುವ ದಾರುಣ ಘಟನೆ ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಬಿಳಿಕೆರೆ ಹೋಬಳಿ ಆಯರಹಳ್ಳಿ ಗ್ರಾಮದ ದಿನೇಶ್‌-ಸುಮ ದಂಪತಿ ಪುತ್ರಿ ಖುಷಿ ನಾಣ್ಯ ನುಂಗಿ ಜೀವ ಕಳೆದುಕೊಂಡ ಮಗು.

ಬಾಲಕಿಗೆ ಬಲವಂತದ ಬಾಲ್ಯ ವಿವಾಹ : ಮಗುವಿಗೆ ಜನ್ಮ ನೀಡಿದ ಬಳಿಕ ಬೆಳಕಿಗೆ

ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಖುಷಿ ಬಲೂನು ಬೇಕೆಂದು ಹಠ ಹಿಡಿದ ಕಾರಣ ಚಿಕ್ಕಪ್ಪ ಒಂದು ರು. ನೀಡಿದ್ದರು. ಅದನ್ನು ಆಟವಾಡುತ್ತಲೇ ಬಾಯೊಳಗೆ ಹಾಕಿಕೊಂಡಿದ್ದಾಳೆ. ಆದರೆ ಇದನ್ನು ಮನೆಯವರಿಗೆ ತಿಳಿಸಿರಲಿಲ್ಲ. ಖುಷಿ ಆಗಾಗ ಕೆಮ್ಮು ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದ್ದು, ಕಳೆದೆರಡು ದಿನಗಳಿಂದ ಕೆಮ್ಮು ಉಲ್ಬಣವಾದ ಪರಿಣಾಮ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ತಯಾರಾದ ವೇಳೆ ನಾಣ್ಯ ನುಂಗಿದ್ದೇನೆಂದು ಮಗು ಹೇಳಿದೆ. ಆದರೆ ಅಷ್ಟರಲ್ಲಾಗಲೇ ಮಗುವಿನ ಪರಿಸ್ಥಿತಿ ತೀರ ಹದಗೆಟ್ಟು ಪ್ರಾಣಪಕ್ಷಿ ಹಾರಿ ಹೋಗಿತ್ತು.

ಮುದ್ದಾದ ಮಗುವನ್ನು ಕಳೆದುಕೊಂಡ ದಂಪತಿ ಮತ್ತವರ ಸಂಬಂಧಿಕರ ಗೋಳು ಹೇಳತೀರದಾಗಿತ್ತು. ಖುಷಿ ಖುಷಿಯಾಗಿರುತ್ತಿದ್ದ ಖುಷಿ ಹೆತ್ತವರ ಪಾಲಿಗೆ ಶಾಶ್ವತವಾಗಿ ದುಃಖ ನೀಡಿ ಹೋಗಿದ್ದಾಳೆ.