ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ
ಇಂದು ರಾಹುಕಾಲದ ಸಮಯ 3 ಗಂಟೆಯಿಂದ 4.30 ರ ವೇಳೆಯಲ್ಲಿ ಆಗಮಿಸಿ 3.02 ನಿಮಿಷಕ್ಕೆ ತಮ್ಮ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗೆ ಒಪ್ಪಿಸಿದ್ದಾರೆ.
ಬೆಳಗಾವಿ(ಏ.24): ಮೇ. 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಅವರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಮೂಢನಂಬಿಕೆ ವಿರುದ್ಧ ತಮ್ಮ ಹೋರಾಟವನ್ನ ಮುಂದುವರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಇಂದು ರಾಹುಕಾಲದ ಸಮಯ 3 ಗಂಟೆಯಿಂದ 4.30 ರ ವೇಳೆಯಲ್ಲಿ ಆಗಮಿಸಿ 3.02 ನಿಮಿಷಕ್ಕೆ ತಮ್ಮ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗೆ ಒಪ್ಪಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹಲವು ದಿನಗಳಿಂದ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ದೇಶದಲ್ಲಿ ಹಲವರು ಮಹೂರ್ತ ನೋಡಿ ತಮ್ಮ ನಾಮಪತ್ರ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ನಾನು ಮೂಢನಂಬಿಕೆ ವಿರುದ್ಧ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಖಂಡಿತಾ ಗೆಲುವು ಸಾಧಿಸಲಿದ್ದೇನೆ'ಎಂದು ವಿಶ್ವಾಸ ವ್ಯಕ್ತಪಡಿಸಿದರು.