Asianet Suvarna News Asianet Suvarna News

ಕಲಬುರ್ಗಿಯಲ್ಲಿ ಕನ್ನಡ ನುಡಿಜಾತ್ರೆ: ಕಲ್ಯಾಣ ಕರ್ನಾಟಕದ ನಿರೀಕ್ಷೆಗಳೇನು?

ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಕನ್ನಡದ ಕಲ್ಯಾಣಕ್ಕೆ ಮತ್ತೊಂದು ಹೆದ್ದಾರಿಯಾಗಬೇಕಿದೆ. ಇಲ್ಲಿನ ಹಿಂದುಳಿದ ಜಿಲ್ಲೆಗಳನ್ನು ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಸುಧಾರಿಸಲು ಈ ಸಮ್ಮೇಳನ ನಾಂದಿಯಾಗಲಿ. 

Expectations from Akhila Kannada Sahitya Sammelana in 85 th Kalaburgi
Author
Bengaluru, First Published Feb 4, 2020, 2:46 PM IST

ರಾಜ್ಯದ ಗಡಿನಾಡಿನ ಕನ್ನಡಿಗರ ಸ್ಥಿತಿಗತಿ ಸುಧಾರಿಸದೆ ನಾಡು ನುಡಿಯ ಬೆಳವಣಿಗೆ ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಭಾಗದ ಜನರು ದೊಡ್ಡವರಾಗದೆ ನಮ್ಮ ನಾಡು ನುಡಿಗಳು ದೊಡ್ಡದಾಗುವುದಿಲ್ಲ ಎಂದು 1985ರಲ್ಲಿ ನಡೆದ 57ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಡಾ.ಹಾ.ಮಾ.ನಾಯಕ್‌ ಹೇಳಿದ್ದರು. ಇಂತಹ ಜಾಗ್ರತೆಯ ಆಶಯವನ್ನು ಹಾಮಾನಾ ವ್ಯಕ್ತಪಡಿಸಿ ಮೂರು ದಶಕಗಳೇ ಗತಿಸಿವೆ.

ಅವರ ಎಚ್ಚರಿಕೆಯ ನುಡಿಗಳು ಬೀದರ್‌ ನೆಲದಲ್ಲಿಯೇ ಮೊಳಗಿದ್ದವು. ಬೀದರ್‌ ಅಂಚಿನಲ್ಲೇ ಇರುವ ಗುಲ್ಬರ್ಗಾ ತನ್ನ ಹೆಸರು ಬದಲಿಸಿಕೊಂಡು ಈಗ ಕಲಬುರಗಿ ಆಗಿದೆ. ಆಗ ಹೈದ್ರಾಬಾದ್‌ ಕರ್ನಾಟಕ ಇದ್ದದ್ದು ಈಗ ಕಲ್ಯಾಣ ಕರ್ನಾಟಕ ಆಗಿದೆ. ಆದರೆ ಹೆಸರು ಬದಲಾದಂತೆ ಈ ಭಾಗದ ಜನರ ಸ್ಥಿತಿಗತಿ ಸುಧಾರಿಸಿಲ್ಲ. ಹಾಮಾನಾ ನೀಡಿದ್ದ ಎಚ್ಚರಿಕೆಯ ಮಾತುಗಳನ್ನು ಜಾಗೃತ ಜನಸಮುದಾಯ ಗಂಭೀರವಾಗಿ ಪರಿಗಣಿಸಿದ್ದರೆ ಈ ಭಾಗದ ಜನರು ಇವತ್ತು ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ.

ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಸಭಾಂಗಣಕ್ಕೆ ಪಾರಂಪರಿಕ ಸ್ಪರ್ಶ

ಐತಿಹಾಸಿಕ ಭೂಮಿ ಕಲಬುರಗಿ

ಹೈದರಾಬಾದ್‌ ಕರ್ನಾಟಕ ಕಲ್ಯಾಣ ಕರ್ನಾಟಕವಾದ ನಂತರ ಮೊದಲ ಬಾರಿಗೆ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 1957ರಲ್ಲಿ ಕನ್ನಡ ಸಾಹಿತ್ಯದ ಹಬ್ಬ ಕಲಬುರಗಿಯಲ್ಲಿ ನೆರವೇರಿತ್ತು. ಸೂಫಿ ಸಂತರ ನಾಡು ಎಂದೇ ಪ್ರಸಿದ್ಧಿ ಪಡೆದ ಕಲಬುರಗಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಚರಿತ್ರೆಯೇ ಇದೆ.

ಸರ್ವಧರ್ಮಗಳು ಇಲ್ಲಿ ಮೇಳೈಸಿವೆ. ಭಾರತೀಯ ನ್ಯಾಯಶಾಸ್ತ್ರದ ಪಿತಾಮಹ ಮರತೂರಿನ ವಿಜ್ಞಾನೇಶ್ವರನ ಸಂಶೋಧನಾ ಕೇಂದ್ರ ಇಲ್ಲಿದೆ. ಕಾಕತೀಯ ಅರಸರು, ದೆಹಲಿಯ ಸುಲ್ತಾನರು, ಬಹಮನಿ ಸಾಮ್ರಾಜ್ಯ, ಹೈದ್ರಾಬಾದ್‌ ಸಂಸ್ಥಾನ ಹೀಗೆ ನಾನಾ ಆಡಳಿತಕ್ಕೆ ಒಳಪಟ್ಟು ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಯಲ್ಲಿ ಸಾಗಿಬಂದ ಐತಿಹಾಸಿಕ ಭೂಮಿ ಕಲಬುರಗಿ.

ಗಡಿನಾಡಿಗೆ ಸಿಕ್ಕ ಅಮೂಲ್ಯ ಅವಕಾಶ

ಭೌಗೋಳಿಕವಾಗಿ ರಾಜ್ಯದ ರಾಜಧಾನಿಯಿಂದ ಬಹುದೂರದಲ್ಲಿರುವ ಕಲಬುರಗಿ ಅಭಿವೃದ್ಧಿಯ ವಿಚಾರದಲ್ಲಿಯೂ ಅಷ್ಟೇ ಅಂತರದಲ್ಲಿದೆ. ಒಂದೆಡೆ ಆಳಿದವರ ಪ್ರಭಾವದಿಂದ ಬಂದ ಹಿಂದಿ, ಉರ್ದು, ಮರಾಠಿ, ತೆಲಗು ನಂಟು ಕನ್ನಡಕ್ಕೆ ಕಗ್ಗಂಟಾಗಿವೆ. ಸರ್ವರೊಳಗೊಂದಾಗು ಮಂಕುತಿಮ್ಮ ಎನ್ನುವ ಮಾತಿಗೆ ಅನುರೂಪವಾಗಿ ಕಲಬುರಗಿ ಇದ್ದರೂ ಇಲ್ಲಿ ಕನ್ನಡದ ವಾತಾವರಣ, ಕನ್ನಡಿಗರ ಬದುಕನ್ನು ಹಸನು ಮಾಡುವ ದೊಡ್ಡಮಟ್ಟದ ಪ್ರಯತ್ನಗಳು ಇನ್ನೂ ಆಗಬೇಕಿದೆ.

ಕಾಕತಾಳೀಯವೆಂಬಂತೆ, ‘58’ನೇ ಸಾಹಿತ್ಯ ಸಮ್ಮೇಳನ ನಡೆದಿದ್ದ ಜಿಲ್ಲೆಯಲ್ಲಿ ಈಗ ‘85’ನೇ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ಗಡಿನಾಡಿನಲ್ಲಿ ಕನ್ನಡದ ಕಂಪನ್ನು ವಿಸ್ತಾರ ಮಾಡುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನವು ಇನ್ನೊಂದು ಆಯಾಮಕ್ಕೆ ಏರಲು ಇದೊಂದು ಅಮೂಲ್ಯ ಅವಕಾಶ.

5 ಸಮಸ್ಯೆಗೆ ಬೇಕು ಪರಿಹಾರ

ಹಲವಾರು ದಶಕಗಳಿಂದ ಕಲ್ಯಾಣ ಕರ್ನಾಟಕಕ್ಕೆ ಕಾಡುವ ಪ್ರಮುಖ 5 ಸಮಸ್ಯೆಗಳ ಗಂಟನ್ನು 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಿಚ್ಚಬೇಕಿದೆ. 1.ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ವಲಸೆ. 2.ದೇಶದ ತೊಗರಿ ಕಣಜವೇ ಆದ ಕಲಬುರಗಿಯಲ್ಲಿ ದೊಡ್ಡ ಮಟ್ಟದ ತೊಗರಿ ಹಬ್‌ ಇನ್ನೂ ಆಗಿಲ್ಲ.

3.ಹಲವಾರು ಜೀವ ನದಿಗಳು ಕಲ್ಯಾಣ ಕರ್ನಾಟಕದಲ್ಲಿ ಹರಿದರೂ ನೀರಾವರಿ ಯೋಜನೆಗಳು ಇಡೀ ಜಿಲ್ಲೆಯನ್ನು ವ್ಯಾಪಿಸಿಕೊಂಡಿಲ್ಲ. 4.ಕನ್ನಡ ಆಡುವ, ಆಳುವ ಭಾಷೆಯಾಗದೇ ಅನ್ಯ ಭಾಷೆಗೆ ಇಲ್ಲಿನ ಜನರು ಒಗ್ಗಿ ಹೋಗುತ್ತಿದ್ದಾರೆ. 5.ರಾಜಕೀಯವಾಗಿ ಕಲ್ಯಾಣ ಕರ್ನಾಟಕ ಸಾಕಷ್ಟುಪ್ರಾಧಾನ್ಯತೆ ಪಡೆದುಕೊಂಡಿಲ್ಲ. ಈ ಐದು ಸಮಸ್ಯೆಗಳಿಂದ ಈ ಭಾಗ ಇನ್ನೂ ಹಿಂದುಳಿದಿದೆ.

ಕಲಬುರಗಿ ಅಕ್ಷರ ಜಾತ್ರೆ: ಸಾಹಿತ್ಯದ ರಸದೌತಣದ ಜೊತೆಗೇ ದೇಸಿ ಅಡುಗೆ ಘಮ

ಸಮ್ಮೇಳನ ಬರೀ ಮೆರವಣಿಗೆಯಾಗದಿರಲಿ

ಸರ್ವಭಾಷೆಗಳ ಸಂಕಲಿತ ಭೂಪ್ರದೇಶ ಎನಿಸಿದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯ ಮತ್ತು ಅನಿವಾರ್ಯತೆ ಇತ್ತು. ಕನ್ನಡದ ವಾತಾವರಣ ಇನ್ನಷ್ಟುವಿಸ್ತಾರಗೊಂಡು ಗಡಿಭಾಗದ ಅಭಿವೃದ್ಧಿಗಾಗಿ ಮಹಾಪೂರವೇ ಹರಿದು ಬರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಕನ್ನಡ ಅಧ್ಯಯನ ಕೇಂದ್ರ ಹೀಗೆ ಹಲವು ಅಧ್ಯಯನ ಕೇಂದ್ರಗಳು ಕನ್ನಡದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ.

ಕರ್ನಾಟಕ ಸಾಹಿತ್ಯ ಆಕಾಡೆಮಿಯ ಮೊದಲ ಅಧ್ಯಕ್ಷೆಯಾಗಿದ್ದ ಡಾ.ಗೀತಾ ನಾಗಭೂಷಣ ಇದೇ ಜಿಲ್ಲೆಯವರು. ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಇವರು. ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರರನ್ನು ಕೊಡುಗೆ ಕೊಟ್ಟ ಭೂಮಿಯೂ ಹೌದು.

ಹಿಂದಿನ ಸಮ್ಮೇಳನಗಳು ಕೇವಲ ಮೂರು ದಿನಗಳ ಕನ್ನಡಾಂಬೆಯ ಮೆರವಣಿಗೆಗೆ ಮಾತ್ರ ಸಿಮೀತವಾಗಿ ಉಳಿದ 362 ದಿನ ಕನ್ನಡದ ಬಗ್ಗೆ ಎಂದಿನಂತೆ ನಿರ್ಲಕ್ಷ್ಯ ವಹಿಸುತ್ತಿದ್ದುದರ ಫಲವೇ ಈ ಹಿಂದೆ ಹಿರಿಯರಾದ ದೇವನೂರು ಮಹಾದೇವ ಅಧ್ಯಕ್ಷರಾಗಲು ನಿರಾಕರಿಸಿದ್ದು. ಅವರು ಬಯಸಿದ್ದು 3 ದಿನಗಳ ಬದಲಾಗಿ 365 ದಿನವೂ ಕನ್ನಡ ಮಾಧ್ಯಮದ ಮೆರವಣಿಗೆಯಾಗಬೇಕು ಎಂದು. ಈ ನಾಡಿನಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೊಳಿಸದ ಹೊರತು ತಾವು ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಈ ಹಿಂದೆ ಅವರು ಘೋಷಿಸಿದ್ದರು. ಇದು ಕನ್ನಡ ಸಾಂಸ್ಕೃತಿಕ ಪರಂಪರೆಗೆ ಸಂದರ್ಭೋಚಿತ ವಿವೇಕದ ಅಭಿವ್ಯಕ್ತಿ ಕೂಡ.

ಕಟಿಬದ್ಧ ಸಂಕಲ್ಪ ಬೇಕು

ಕನ್ನಡಾಂಬೆಯನ್ನು ಈ ಸುಸಂದರ್ಭದಲ್ಲಿ ಉಳಿಸುವ ಕೆಲಸವಾಗಬೇಕು. ಇಂದು ಸಾಹಿತ್ಯ ಜಾತ್ರೆಯಲ್ಲಿ ಕಟಿಬದ್ಧವಾದ ನಿರ್ಣಯ ತೆಗೆದುಕೊಂಡರೆ, ಒಂದನೆಯ ತರಗತಿಯಿಂದ ಇಂಗ್ಲಿಷ್‌ ಪಠ್ಯ ಹೊರತುಪಡಿಸಿ ಉಳಿದ ವಿಷಯಗಳನ್ನು ನೇರವಾಗಿ ಕನ್ನಡ ಭಾಷಾ ಮಾಧ್ಯಮದಲ್ಲಿಯೇ ಕಲಿಸುವ ವ್ಯವಸ್ಥೆಯನ್ನು ಸಾರ್ವತ್ರೀಕರಿಸಿದರೆ ಇಂಗ್ಲಿಷ್‌ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಅಂತರ ಕಡಿಮೆಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ ಸಾಧಿಸಬಹುದು.

ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ‘ಕನ್ನಡದ ವಿಷಯ ಬಂದಾಗ ನಾನು ಸರ್ವಾಧಿಕಾರಿ ಧೋರಣೆಯವನು’ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇಂದು ಇಂಥದೊಂದು ಕಟಿಬದ್ಧವಾದ ಸಂಕಲ್ಪ ಆಳುವವರಿಗೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಬೇಕಾಗಿದೆ. ಕನ್ನಡ ಮಾಧ್ಯಮದಿಂದ ಕನ್ನಡ ನಾಡು-ನುಡಿಗೆ ನಷ್ಟಕ್ಕಿಂತ ಲಾಭವೇ ಅಧಿಕವಾಗುತ್ತದೆ. ಕೆ.ಎಸ್‌. ನರಸಿಂಹಸ್ವಾಮಿಯವರ ವಾಣಿಯಂತೆ ‘ಕನ್ನಡ ಮಾಧ್ಯಮವಾಗಲೇಬೇಕು ಕನ್ನಡದ ಮಕ್ಕಳಿಗೆ.’

ಕಲಬುರಗಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಕಾಶವಾಣಿ ನೇರ ಪ್ರಸಾರ

ಕನ್ನಡ ಕಲ್ಯಾಣಕ್ಕೆ ಹೆದ್ದಾರಿಯಾಗಲಿ

ಒಂದು ಭಾಷೆಯನ್ನು, ಭಾವನೆಯನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆಯಿರುವ ಸಾಹಿತ್ಯಲೋಕಕ್ಕೆ ಸಾಮಾನ್ಯ ಮನುಷ್ಯರ ಪರವಾಗಿ ಮಾತಾಡುವ ಅವಕಾಶ ಉಳಿದಿದೆ. ಆದರೆ ಈ ಕೆಲಸವನ್ನು ನಮ್ಮ ಕಾಲಕಾಲದ ಸಾಹಿತ್ಯ ಸಮ್ಮೇಳನಗಳು ಪ್ರಾಮಾಣಿಕವಾಗಿ ಮಾಡಬೇಕಿದೆ. ಕಲಬುರಗಿಯಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಆಧುನಿಕ ಸಾಹಿತ್ಯವನ್ನು ನವಪೀಳಿಗೆಗೆ ಎಳೆದು ತಂದವರು.

ಕನ್ನಡದ ಹಲವಾರು ಸವಾಲುಗಳನ್ನು ಬರಹದ ಎಲ್ಲಾ ಆಯಾಮಗಳಲ್ಲೂ ತೆರೆದಿಟ್ಟಎಚ್ಚೆಸ್ವಿಯವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಕಳಶಪ್ರಾಯವೇ ಸರಿ. ಕಲ್ಯಾಣ ಕರ್ನಾಟಕದ ಕನ್ನಡದ ಸಮಸ್ಯೆ, ಗಡಿ ಕನ್ನಡಿಗರ ಸಮಸ್ಯೆ, ಕನ್ನಡದ ಅಸ್ಮಿತೆಯನ್ನು ಅತ್ಯಂತ ವಿಮರ್ಶಾತ್ಮಕವಾಗಿ ನೋಡಿ ಅದಕ್ಕೊಂದು ಜಾಗೃತಿಯ ಜಾಡನ್ನು ಹಾಕಿ ಕೊಡುವ ಸಮರ್ಥ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಅವರ ಮಾರ್ಗದರ್ಶನದಲ್ಲಿ ಕನ್ನಡದ ಪ್ರಸ್ತುತತೆಯನ್ನು ಚರ್ಚೆಯ ಆಯಾಮಕ್ಕೆ ಒಳಪಡಿಸಲು ಈ ಮೂರು ದಿನಗಳಲ್ಲಿ ಪ್ರಯತ್ನ ಮಾಡಬೇಕಿದೆ. ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಕನ್ನಡದ ಕಲ್ಯಾಣಕ್ಕೆ ಮತ್ತೊಂದು ಹೆದ್ದಾರಿಯಾಗಬೇಕಿದೆ. ಇಲ್ಲಿನ ಹಿಂದುಳಿದ ಜಿಲ್ಲೆಗಳನ್ನು ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಸುಧಾರಿಸಲು ಈ ಸಮ್ಮೇಳನ ನಾಂದಿಯಾಗಲಿ.

-  ಪ್ರೊ. ಮಂಜುನಾಥ ಉಲವತ್ತಿ ಶೆಟ್ಟರ್‌, ಹೊಸಪೇಟೆ

Follow Us:
Download App:
  • android
  • ios