ಡ್ಯಾಂ ಕಟ್ಟಲು ದೇಶದಲ್ಲಿ ಜಾಗವಿಲ್ಲ: ಜಲ ಸಚಿವ!| ಅಂತರ್ಜಲ ಮರುಪೂರಣ ಮಾಡಲು ಸಲಹೆ

ನವದೆಹಲಿ(ನ.13): ‘ದೇಶದಲ್ಲಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಲು ಇನ್ನು ಸ್ಥಳವಿಲ್ಲ. ಇದರ ಬದಲು ಅಂತರ್ಜಲ ಮರುಪೂರಣ ಮಾಡಿ ನೀರಿನ ಅಗತ್ಯವನ್ನು ನೀಗಿಸಿಕೊಳ್ಳಬೇಕು’ ಎಂದು ಜನತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಕರೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೆ, ಅದಕ್ಕೆಂದೇ ಜಲಶಕ್ತಿ ಸಚಿವಾಲಯವು ಜಲಶಕ್ತಿ ಮರುಪೂರಣ ಮಾಡುವ ಯೋಜನೆಗಳಲ್ಲಿ ನಿರತವಾಗಿದೆ ಎಂದೂ ಹೇಳಿದ್ದಾರೆ.

ಗುರುವಾರ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ‘ದೇಶದಲ್ಲಿನ ಈಗಿನ ಪರಿಸ್ಥಿತಿ ಗಮನಿಸಿದರೆ ಇನ್ನು ನಮಗೆ ಅಣೆಕಟ್ಟೆಕಟ್ಟಲು ಆಗುವುದಿಲ್ಲ ಎನ್ನಿಸುತ್ತದೆ. ಅಲ್ಲದೆ, ಇದಕ್ಕೆ ಬೇಕಾದ ಜಾಗವೂ ಲಭ್ಯ ಇರುವಂತಿಲ್ಲ. ಈಗಾಗಲೇ ಎಲ್ಲೆಲ್ಲಿ ಅಣೆಕಟ್ಟೆಕಟ್ಟಬೇಕೋ ಅಲ್ಲಿ ಕಟ್ಟಿಕೊಂಡಾಗಿದೆ’ ಎಂದರು.

‘ದೇಶದಲ್ಲಿ ಈಗ 736 ದೊಡ್ಡ ಅಣೆಕಟ್ಟುಗಳಿವೆ. ಇವುಗಳ ನಿರ್ಮಾಣದಿಂದ ಪ್ರದೇಶಗಳು ಮುಳುಗಡೆ ಆಗುತ್ತವೆ. ಜನರು ಸ್ಥಳಾಂತರಗೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಅದಕ್ಕೆಂದೇ ಅಂತರ್ಜಲ ಮರುಪೂರಣ ಮಾಡಬೇಕು. ಇದರಿಂದ ನಮ್ಮ ಮುಂದಿನ ತಲೆಮಾರಿಗೂ ನೀರಿನ ಭದ್ರತೆ ಲಭಿಸುತ್ತದೆ. ಕೇಂದ್ರ ಸರ್ಕಾರವು ವೈಜ್ಞಾನಿಕ ಆಧಾರದಲ್ಲಿ ಜಲಮೂಲದ ಮ್ಯಾಪಿಂಗ್‌ ಮಾಡುತ್ತಿದೆ ಹಾಗೂ ಅಂತರ್ಜಲ ಮರುಪೂರಣ ಕೈಗೊಂಡಿದೆ’ ಎಂದರು.

ಕೆರೆ, ಕೊಳ, ಬಾವಿಗಳ ರಕ್ಷಣೆ ಮಾಡಬೇಕು ಎಂದೂ ಕರೆ ನೀಡಿದರು.