ತಿರುಪತಿ ತಿಮ್ಮಪ್ಪನ 23 ಆಸ್ತಿ ಹರಾಜು!
ತಿರುಪತಿ ತಿಮ್ಮಪ್ಪನ 22 ಆಸ್ತಿ ಹರಾಜು| ಹರಾಜು ನೋಟಿಸ್ ಪ್ರಕಟ| ಅಂದಾಜು 2 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆ
ಹೈದ್ರಾಬಾದ್(ಮೇ.24): ತಿರುಪತಿ ತಿಮ್ಮಪ್ಪನ ಭಕ್ತರು ನೀಡಿದ್ದ, ತಮಿಳುನಾಡಿನ ವಿವಿಧ ಭಾಗಗಳಲ್ಲಿನ 23 ಆಸ್ತಿಗಳನ್ನು ಹರಾಜು ಆಗಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಕುರಿತು ಅದು ಹರಾಜು ನೋಟಿಸ್ ಅನ್ನೂ ಪ್ರಕಟಿಸಿದೆ.
ವೆಲ್ಲೂರು, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಯಲ್ಲಿನ ಮನೆ, ಸೈಟ್ ಮತ್ತು ಕೆಲ ಕೃಷಿ ಭೂಮಿಯನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ. ಇವುಗಳಿಂದ ಅಂದಾಜು 2 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆಯನ್ನು ಟಿಟಿಡಿ ಇಟ್ಟುಕೊಂಡಿದೆ.
ಈ ನಡುವೆ ಲಾಕ್ಡೌನ್ನಿಂದಾಗಿ ದೇಗುಲ ಹಣಕಾಸಿನ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕಾಗಿ ಆಸ್ತಿ ಹರಾಜು ಮಾಡಲಾಗುತ್ತಿದೆ ಎಂಬ ವರದಿಗಳನ್ನು ಟಿಟಿಡಿ ತಳ್ಳಿಹಾಕಿದೆ. ಇವೆಲ್ಲಾ ನಿರುಪಯುಕ್ತ ಆಸ್ತಿಗಳು. ಇವುಗಳ ನಿರ್ವಹಣೆಗೇ ಹೆಚ್ಚಿನ ಹಣ ವೆಚ್ಚ ಮಾಡಬೇಕಾಗಿ ಬರುತ್ತಿದೆ. ಹೀಗಾಗಿ ಫೆ.29ರಂದು ನಡೆದ ಟಿಟಿಡಿ ಮಂಡಳಿ ಸಭೆಯಲ್ಲಿ ಇವುಗಳ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ಇದು ಆದಾಯ ಕುಸಿತದಿಂದಾದ ನಷ್ಟಭರ್ತಿಗೆ ರೂಪಿಸಿದ ಯೋಜನೆ ಅಲ್ಲ ಎಂದು ಸ್ಪಷ್ಟಪಡಿಸಿದೆ.