ಉತ್ತರಾಖಂಡ್ ನೂತನ ಸಿಎಂ ಆಗಿ ತೀರಥ್ ಸಿಂಗ್ ಪ್ರಮಾಣವಚನ!
ಉತ್ತರಾಖಂಡ್ ರಾಜ್ಯದ ನೂತನ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್| ಪ್ರಮಾಣ ವಚನ ಸ್ವೀಕರಿಸಿದ ನೂತನ ಸಿಎಂ| ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಲ್ಲಿಸಿದ ಕೇವಲ 24 ಗಂಟೆಯೊಳಗೆ ನೂತನ ಸಿಎಂ ಆಯ್ಕೆ
ಡೆಹ್ರಾಡೂನ್(ಮಾ.10): ಉತ್ತರಾಖಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ತೀರಥ್ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಲ್ಲಿಸಿದ ಕೇವಲ 24 ಗಂಟೆಯೊಳಗೆ ನೂತನ ಸಿಎಂ ಆಯ್ಕೆ ಹಾಗೂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜಪಾಲರಾದ ಬೇಬಿ ರಾಣಿ ಮೌರ್ಯ ಇವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ನಿನ್ನೆಯಿಂದ ಆಗಿದ್ದೇನು?
ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಬಳಿಕ ಇಂದು ಬೆಳಗ್ಗೆ ನಡೆದ ಶಾಂಸಕಾಂಗ ಸಭೆಯಲ್ಲಿ ಪೌರಿ ಗರ್ವಾಲ್ ಕ್ಷೇತ್ರದ ಸಂಸದ ತೀರಥ್ ಸಿಂಗ್ ರಾವತ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರಾಖಂಡ್ ಸಂಸದರೂ ಆಗಿರುವ ರಾವತ್ ಈ ಹಿಂದೆ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಹೆಸರು ಕೊನೆಯ ಕ್ಷಣದವರೆಗೂ ಕೇಳಿಬಂದಿತ್ತು, ಅಂತಿಮವಾಗಿ ತೀರಥ್ ಸಿಂಗ್ ರಾವತ್ ಹೆಸರನ್ನು ಅಂತಿಮಗೊಳಿಸಲಾಗಿತ್ತು.