Asianet Suvarna News Asianet Suvarna News

ವಿವೇಕಾನಂದರು ಯೂತ್‌ ಐಕಾನ್‌ ಆಗಿದ್ದು ಹೇಗೆ?

ಇಂದು ಸ್ವಾಮಿ ವಿವೇಕಾನಂದ ಜಯಂತಿ| ಭಾರತವನ್ನು ಎಚ್ಚರಿಸಿದ ಸನ್ಯಾಸಿ| ಜ್ಞಾನ ಸಂಪನ್ನ ವಿವೇಕಾನಂದ| ಏಕತೆಗೆ ಓಗೊಟ್ಟಾಗ ಭಾರತದ ಪ್ರಗತಿ| ಭಾರತದ ‘ಇಮೇಜ್‌’ ಬದಲಿಸಿದರು| ಶಿಕ್ಷಣವೇ ಅಭಿವೃದ್ಧಿಯ ಕೀಲಿ ಕೈ| ನಾವು ಸಂವೇದನಾಶೀಲರಾಗದಿದ್ದರೆ?| 

This Is How Swami Vivekananda Become youth Icon
Author
Bangalore, First Published Jan 12, 2020, 11:24 AM IST

ಪಶ್ಚಿಮ ಬಂಗಾಳದಲ್ಲಿ 1863ರ ಜನವರಿ 12ರಂದು ಜನಿಸಿದ ನರೇಂದ್ರನಾಥ ಮುಂದೆ ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದ ಜಗದ್ವಿಖ್ಯಾತರಾದರು. ಹಿಂದು ಧರ್ಮದ ಪುನರುಜ್ಜೀವನಕ್ಕೆ ಕಾರಣೀಭೂತರಾದ ಅವರು ರಾಷ್ಟ್ರೀಯತೆಗೆ ನೀಡಿದ ಕೊಡುಗೆ ಬಹುದೊಡ್ಡದು. ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದ ವಿವೇಕಾನಂದರು, ಧರ್ಮಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ; ಜನರ ನಡುವೆ ಇದ್ದುಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನೂ ವಿನಿಯೋಗಿಸುವುದು ಎಂದು ಸಾರಿದರು. ಈ ಸಮಾಜಯಜ್ಞಕ್ಕೆ ಅವರು ವಿಶೇಷ ಆಹ್ವಾನ ನೀಡಿದ್ದು ಯುವಕರಿಗೆ. ‘ಪ್ರಪಂಚ ಇರುವುದು ಹೇಡಿಗಳಿಗಲ್ಲ; ಜೀವನದಲ್ಲಿ ಎದುರಾಗುವ ಸಕಲ ಸೋಲು-ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ‍್ಯದಲ್ಲಿ ತೊಡಗಿಸಿಕೊಳ್ಳಿ’ ಎಂದು ಅವರು ಯುವಕರಿಗೆ ಕರೆಕೊಟ್ಟರು. ಆದ್ದರಿಂದಲೇ ಅವರು ಇಂದಿಗೂ ಯುವಕರಿಗೆ ಆದರ್ಶ ವ್ಯಕ್ತಿ. ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತವನ್ನು ಎಚ್ಚರಿಸಿದ ಸನ್ಯಾಸಿ

ಶ್ರೀಮಂತ ಕುಟುಂಬದಲ್ಲಿ ಜನಿಸಿದ ನರೇಂದ್ರನಾಥ ದತ್ತ ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಅವರ ಜೀವನವೇ ಒಂದು ಹೋರಾಟವಾಗಿತ್ತು. ಒಮ್ಮೆ ಅವರು ಜೀವನದ ಉದ್ದೇಶವೇನು ಎಂಬ ಪ್ರಶ್ನೆ ಕೇಳಿಕೊಂಡರು. ಇದೇ ವೇಳೆ ಭಾರತದ ಬಡತನ ಕಂಡು ಅದರ ಬಗ್ಗೆ ಸಹಾನುಭೂತಿ ಬೆಳೆಸಿಕೊಂಡರು. ಆಗ ದೇವರ ಅಸ್ತಿತ್ವದ ಬಗ್ಗೆಯೇ ಪ್ರಶ್ನಿಸಲು ಆರಂಭಿಸಿದರು. ಆರಂಭದಲ್ಲಿ ರಾಮಕೃಷ್ಣ ಪರಮಹಂಸರ ತತ್ವಜ್ಞಾನವನ್ನು ಒಪ್ಪಿಕೊಳ್ಳದ ವಿವೇಕಾನಂದರು ಕೊನೆಗೆ ಪರಮಹಂಸರನ್ನು ತಮ್ಮ ಗುರು ಎಂದು ಸ್ವೀಕರಿಸಿದರು. ರಾಮಕೃಷ್ಣರ ಆದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟು ಜನಸೇವೆಯೇ ಜನಾರ್ದನ ಸೇವೆ ಎಂದು ತಮ್ಮನ್ನು ತಾವು ತೊಡಗಿಸಿಕೊಂಡರು. ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದರು. ಸ್ವಾಮಿ ವಿವೇಕಾನಂದರು ಕೇವಲ ಆಧ್ಯಾತ್ಮಿಕ ನಾಯಕರಲ್ಲ, ಅವರು ಭಾರತವನ್ನು ಮೌಢ್ಯದಿಂದ ಮೇಲಕ್ಕೆತ್ತಿದ ಮತ್ತು ಜಡ್ಡುಗಟ್ಟಿದ್ದ ಸಮಾಜವನ್ನು ದೀರ್ಘ ನಿದ್ರೆಯಿಂದ ಎಚ್ಚರಗೊಳ್ಳುವಂತೆ ಮಾಡಿದ ನಾಯಕ.

ಜ್ಞಾನ ಸಂಪನ್ನ ವಿವೇಕಾನಂದ

ಸ್ವಾಮಿ ವಿವೇಕಾನಂದರು ಆಧುನಿಕ ವಿಚಾರಶಕ್ತಿಯುಳ್ಳ ವಿಶೇಷ ವ್ಯಕ್ತಿ. ಹಿಂದು ಧರ್ಮದ ಅನೇಕ ನಂಬಿಕೆಗಳ ಬಗ್ಗೆ ಮಾತ್ರವಲ್ಲದೆ ಡೇವಿಟ್‌ ಹ್ಯೂಮ್‌ ಅವರ ವೆಸ್ಟರ್ನ್‌ ಫಿಲಾಸಫೀಸ್‌, ಇಮ್ಯಾನ್ಯುಯೆಲ್‌ ಕಾಂಟ್‌, ಚಾರ್ಲ್ಸ್ ಡಾರ್ವಿನ್‌ ಮತ್ತು ಜಾನ್‌ ಸ್ಟೂವರ್ಟ್‌ ಮಿಲ್‌ ಅವರ ಪುಸ್ತಕಗಳು ಮತ್ತು ಕ್ರೈಸ್ತ ಧರ್ಮದ ಬಗ್ಗೆಯೂ ಓದಿಕೊಂಡು ಅಪಾರ ಜ್ಞಾನ ಸಂಪನ್ನರಾಗಿದ್ದರು. ಅವರ ಜಿಜ್ಞಾಸೆಗಳೇ ಅವರನ್ನು ಬ್ರಹ್ಮ ಸಮಾಜ ಸೇರುವಂತೆ ಮಾಡಿತು. ಜ್ಞಾನದ ಅನ್ವೇಷಣೆ ಮತ್ತು ಜೀವನದ ಉದ್ದೇಶವನ್ನು ಕಂಡುಕೊಳ್ಳುವ ಕುತೂಹಲವೇ ಅವರನ್ನು ಚಿಂತನಾಶೀಲರನ್ನಾಗಿಸಿತು. ಉತ್ತರವನ್ನು ಕಂಡುಕೊಳ್ಳುವ ಬಗೆಗೆ ಅವರಲ್ಲಿದ್ದ ಕುತೂಹಲವೇ ದೂರದೃಷ್ಟಿಮತ್ತು ಮೌಲ್ಯಗಳುಳ್ಳ ಮನುಷ್ಯನನ್ನಾಗಿ ಮಾಡಿತು. ಯುವಕರು ಸಾಧನೆಯ ಮಾರ್ಗದಲ್ಲಿ ಹೋಗಲು ಅವರ ಈ ಗುಣವೇ ಅನುಪಮ ಆದರ್ಶ.

ಗೆದ್ದರೆ ಸಂತೋಷ, ಸೋತರೆ ಅನುಭವ: 20 'ವಿವೇಕ'ವಾಣಿ ಪಾಲಿಸಿದರೆ ಜೀವನವೇ ಪಾವನ!

ಏಕತೆಗೆ ಓಗೊಟ್ಟಾಗ ಭಾರತದ ಪ್ರಗತಿ

ರಾಮಕೃಷ್ಣ ಪರಮಹಂಸರ ಮರಣದ ನಂತರ ಮಠದ ಸಂಪೂರ್ಣ ಜವಾಬ್ದಾರಿ ವಿವೇಕಾನಂದರ ಮೇಲೆ ಬಿತ್ತು. ಬರಂಗಾರ್‌ ಮಠ ನಿರ್ಮಾಣಕ್ಕೆ ವಿವೇಕಾನಂದ ಮುಂದಾದರು. ಇದು ಮೊಟ್ಟಮೊದಲ ರಾಮಕೃಷ್ಣ ಮಠ. ಅನಂತರ ವಿವೇಕಾನಂದರು ಭಾರತದಾದ್ಯಂತ ವ್ಯಾಪಕ ಪ್ರವಾಸ ಮಾಡಿದರು, ವಿದ್ವಾಂಸರು ಮತ್ತು ದಾರ್ಶನಿಕರನ್ನು ಭೇಟಿಯಾದರು. ನಂತರ ಜನರನ್ನು ಪ್ರೇರೇಪಿಸಲು ಭಾರತದಾದ್ಯಂತ ಸರಣಿ ಉಪನ್ಯಾಸಗಳನ್ನು ನೀಡಿದರು ಮತ್ತು ಭವ್ಯ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಇಲ್ಲಿನ ಜನರ ಸಾಮರ್ಥ್ಯಗಳನ್ನು ನೆನಪಿಸಿದರು. ಭಾರತವು ಏಕತೆಯ ಕರೆಗೆ ಓಗೊಟ್ಟಾಗ ಪ್ರಗತಿಯ ಕಡೆಗೆ ಸಾಗುತ್ತದೆ ಎಂದು ಕರೆಕೊಟ್ಟರು. ಜೊತೆಗೆ ಭಾರತದ ತತ್ವಜ್ಞಾನ, ಯೋಗ, ವೇದ ಇವೆಲ್ಲದರ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಾರ ಮಾಡಿದರು. ಒಂದು ರೀತಿಯಲ್ಲಿ ಭರತಖಂಡಕ್ಕೆ ತನ್ನ ಅಪೂರ್ವ ಜ್ಞಾನನಿಧಿಯನ್ನು ಪುನರ್‌ಮನನ ಮಾಡಿಕೊಟ್ಟತತ್ವಜ್ಞಾನಿ ಅವರು.

ಭಾರತದ ‘ಇಮೇಜ್‌’ ಬದಲಿಸಿದರು

1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ಶಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತಾ, ‘ಅಮೆರಿಕದ ಸಹೋದರ ಸಹೋದರಿಯರೇ’ ಎಂದು ಪ್ರೇಕ್ಷಕರನ್ನು ಸಂಬೋಧಿಸಿದರು. ‘ಕಿರುಕುಳಕ್ಕೊಳಗಾದವರಿಗೆ ಮತ್ತು ಎಲ್ಲಾ ಧರ್ಮಗಳ, ಎಲ್ಲಾ ರಾಷ್ಟ್ರಗಳ ನಿರಾಶ್ರಿತರಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನೆಂದು ನನಗೆ ಹೆಮ್ಮೆ ಇದೆ’ ಎಂದು ಹೇಳಿದರು. ಅಲ್ಲಿಯವರೆಗೆ ಬ್ರಿಟಿಷರ ಕೈಲಿದ್ದ ಭಾರತವನ್ನು ಇಡೀ ಜಗತ್ತು ಬಡ ದೇಶ, ಹಾವಾಡಿಗರ ದೇಶ ಎಂದೇ ಪರಿಗಣಿಸಿತ್ತು. ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌ ಮತ್ತಿತರ ದೇಶಗಳಲ್ಲಿ ವಿವೇಕಾನಂದರ ಭಾಷಣಗಳು ಹಾಗೂ ಉಪನ್ಯಾಸಗಳು ಭಾರತದ ಬಗೆಗೆ ಪಾಶ್ಚಿಮಾತ್ಯರಿಗಿದ್ದ ಕೀಳರಿಮೆಯನ್ನು ಹೋಗಲಾಡಿಸಿದವು. ಅನಂತರ ವಿವೇಕಾನಂದರು ಭಾರತದ ಆಧ್ಯಾತ್ಮಿಕ ರಾಯಭಾರಿ ಎಂದೆನಿಸಿದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದು ದರ್ಮದ ಬಗೆಗೆ ಆಸಕ್ತಿ ಕೆರಳಿಸಿದರು. ಪರಿಣಾಮವಾಗಿ ಹಿಂದು ಧರ್ಮದ ತಾತ್ವಿಕ ಹಾಗೂ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು.

ಶಿಕ್ಷಣವೇ ಅಭಿವೃದ್ಧಿಯ ಕೀಲಿ ಕೈ

ವಿವೇಕಾನಂದರು ಭಾರತೀಯರಿಗೆ ಶಿಕ್ಷಣದ ಮೂಲಕ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ಕೌಶಲ್ಯರಹಿತರಿಗೆ ಕೃಷಿ ಮತ್ತು ಕೈಗಾರಿಕಾ ಕೌಶಲ್ಯಗಳನ್ನು ಕಲಿಸುವ ಮತ್ತು ಆರೋಗ್ಯಕರ ಶಿಕ್ಷಣವನ್ನು ನೀಡುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಜಾತ್ಯತೀತ ಶಿಕ್ಷಣವು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉನ್ನತೀಕರಿಸುತ್ತದೆ ಮತ್ತು ಆತ್ಮದ ಜ್ಞಾನ, ಅಂದರೆ ಸ್ವಯಂ-ಅನ್ವೇಷಣೆಯು ಜನರಲ್ಲಿ ನಂಬಿಕೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದರು. ಇದನ್ನು ಉತ್ತೇಜಿಸಲು ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ರಾಮಕೃಷ್ಣ ಮಿಷನ್‌ ಸ್ಥಾಪಿಸಿದರು.

ನಾವು ಸಂವೇದನಾಶೀಲರಾಗದಿದ್ದರೆ?

ದೇವರು ದೇಹವೆಂಬ ದೇಗುಲದಲ್ಲಿ ಮನೆಮಾಡಿರುತ್ತಾನೆ ಎಂಬುದು ಅರಿವಿಗೆ ಬಂದಾಕ್ಷಣ, ಪ್ರತಿಯೊಬ್ಬ ಮನುಷ್ಯನ ಮುಂದೆ ಭಕ್ತಿಯಿಂದ ನಿಂತು ಅವನಲ್ಲಿ ದೇವರನ್ನು ಕಂಡ ಕ್ಷಣದಿಂದ ನಾನು ಬಂಧನದಿಂದ ಮುಕ್ತನಾದೆ. ಬಂಧಿಸುವ ಎಲ್ಲಾ ಮಾಯೆಯೂ ಆ ಕ್ಷಣದಿಂದ ಮಾಯವಾಗಿ ನಾನು ಸ್ವತಂತ್ರನಾದೆ’ - ಇದು ಸ್ವಾಮಿ ವಿವೇಕಾನಂದರ ಆಧ್ಮಾತ್ಮಿಕ ಮತ್ತು ರಾಷ್ಟ್ರೀಯತಾ ದೃಷ್ಟಿಕೋನ. ಭಾಷಣವೊಂದರಲ್ಲಿ ವಿವೇಕಾನಂದರು, ಭಾರತೀಯ ಶಿಕ್ಷಣ ವ್ಯವಸ್ಥೆಯು ಭೂಮಿಯ ಮೇಲಿನ ಲಕ್ಷಾಂತರ ಜೀವಿಗಳಲ್ಲಿ ಮನುಷ್ಯರನ್ನು ಮಾತ್ರ ಭೂಮಿಯ ಮೇಲಿನ ಜೀವಿ ಎಂದು ಪರಿಗಣಿಸುತ್ತದೆ. ಅನ್ವೇಷಣೆಯ ಸಹಾಯದಿಂದ ಮನುಷ್ಯರು ಯೋಚಿಸುವ ಮತ್ತು ಪುನರುತ್ಪಾದಿಸುವ ಸಾಮರ್ಥ್ಯವು ಬುದ್ಧಿವಂತಿಕೆಯ ದೃಷ್ಟಿಯಿಂದ ಸಹ ಭೂಮಿಯ ಇತರ ಜೀವಿಗಳಿಗಿಂತ ಮನುಷ್ಯರನ್ನು ಶ್ರೇಷ್ಠರನ್ನಾಗಿ ಮಾಡಿತು. ಆದರೆ ಅದರ ಅಸಮರ್ಪಕ ಬಳಕೆಯು ನಮ್ಮನ್ನು ಪ್ರಕೃತಿಯ ಬಗ್ಗೆ ಸಂವೇದನಾರಹಿತನ್ನಾಗಿ ಬದಲಾಯಿಸಿತು. ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಅವಳು ನಮ್ಮ ತಾಯಿ. ನಾವು ನಮ್ಮ ತಾಯಿ ಬಗ್ಗೆಯೇ ಸಂವೇದನಾಶೀಲರಾಗದಿದ್ದರೆ ಭವಿಷ್ಯದಲ್ಲಿ ಮಾನವೀಯತೆಗೆ ಜಾಗವಿರುತ್ತದೆಯೇ ಎಂದಿದ್ದರು.

ಗುರಿ ಸಾಧನೆ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆಯಾಗಬೇಕೇ? ಈ ಟಿಪ್ಸ್ ಅನುಸರಿಸಿ!

ಆಧ್ಯಾತ್ಮಿಕ ಪುನರುಜ್ಜೀವನ

ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಹಿಂದುಗಳ ಆಧ್ಯಾತ್ಮಿಕ ಪುನರುಜ್ಜೀವನದೊಂದಿಗೆ ಹೋಲಿಸುತ್ತಾ, ತಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಕಳೆದುಕೊಂಡ ಹಿಂದುಗಳು, ಆರಂಭದಲ್ಲಿ ಪರ್ಷಿಯಾದ ಸುಲ್ತಾನರು, ನಂತರ ಮೊಘಲರು ಮತ್ತು ಅಂತಿಮವಾಗಿ ಯುರೋಪಿಯನ್ನರ ಆಳ್ವಿಕೆಗೆ ಒಳಪಟ್ಟದೇಶವು ಸುಮಾರು 800 ವರ್ಷಗಳ ಗುಲಾಮಗಿರಿಗೆ ಹೋಗುವಂತಾಯಿತು ಎಂದು ವಿವೇಕಾನಂದರು ವಿಷಾದಿಸಿದ್ದರು. ನಮ್ಮ ರಾಷ್ಟ್ರವನ್ನು ಸ್ವತಂತ್ರಗೊಳಸಲು ಹಿಂದುಗಳು ತಮ್ಮೊಳಗಿನ ಆಧ್ಯಾತ್ಮಿಕ ದುಷ್ಕೃತ್ಯಗಳ ವಿರುದ್ಧ ಹೋರಾಡಬೇಕಾಗಿದೆ ಎಂದಿದ್ದರು.

ಕೆಲಸ ಕಾರ‍್ಯದಲ್ಲಿ ಅವರು ಚಿರಸ್ಥಾಯಿ

ತಮ್ಮ 39 ವರ್ಷಗಳ ಜೀವನದಲ್ಲಿ, ಪೂರ್ವ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಸ್ವಾಮಿ ವಿವೇಕಾನಂದರು ಯಶಸ್ವಿಯಾದರು. ವಿಜ್ಞಾನ ಮತ್ತು ಧರ್ಮ ಅಥವಾ ಆಧ್ಯಾತ್ಮಿಕತೆಯ ಮಹತ್ವವನ್ನು ಒತ್ತಿಹೇಳಿದರು. ಧರ್ಮದ ಕುರಿತ ಅವರ ಸಂದೇಶವು ಮೂಢನಂಬಿಕೆ, ಆಚಾರ-ವಿಚಾರಗಳ ಕುರಿತಾಗಿರಲಿಲ್ಲ. ಬದಲಾಗಿ ಭಾರತ ಸೇರಿದಂತೆ ಇಡೀ ಜಗತ್ತು ಯೋಚಿಸಬೇಕಾದ ಸ್ವಯಂ-ಅನ್ವೇಷಣೆ ಮತ್ತು ಸಂತೋಷದ ಅನ್ವೇಷಣೆಯ ಕುರಿತಾಗಿತ್ತು. ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ, ಅವರು ಜಗತ್ತಿಗೆ ಮತ್ತು ತಮ್ಮ ಪ್ರೀತಿಯ ಮಾತೃಭೂಮಿಗೆ ಕೊಡುಗೆ ನೀಡುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ಅವರ ಜೀವನವು ವರ್ಷಗಳ ಲೆಕ್ಕಾಚಾರಕ್ಕಿಂತ ಮಾಡಿದ ಕೆಲಸ ಕಾರ್ಯಗಳಲ್ಲಿ ಚಿರಸ್ಥಾಯಿಯಾಗಿದೆ.

ನೆಲದ ಪರಂಪರೆಯ ಶ್ರದ್ಧಾಳು

ದೃಢ ಮನಸ್ಸಿನ, ನಿರ್ಣಾಯಕ ಶಕ್ತಿ ಇರುವ, ಏಕಮಾತ್ರ ಗುರಿ ಇರುವ ವ್ಯಕ್ತಿಯ ಶಕ್ತಿಯನ್ನು ಯುವಜನರಿಗೆ ತೋರಿಸಲು ವಿವೇಕಾನಂದರು ನಿರಂತರವಾಗಿ ಶ್ರಮಿಸುತ್ತಿದ್ದರು. ಅವರ ಪ್ರೋತ್ಸಾಹಕ ನುಡಿಗಳು ಎಂದೆಂದಿಗೂ ಸಾಂತ್ವನ ಮತ್ತು ಶಕ್ತಿಯನ್ನು ನೀಡುತ್ತವೆ. ‘ದೃಷ್ಟಿಎತ್ತರಕ್ಕಿರಲಿ, ಗುರಿಯೂ ಎತ್ತರಕ್ಕಿರಲಿ. ಆಗ ಅತ್ಯುನ್ನತ ಸ್ಥಾನ ತಲುಪೇ ತಲುಪುತ್ತೀರಿ’ ಎನ್ನುವ ಅವರ ಮಾತುಗಳು ಕಾಲಾತೀತವಾಗಿ ಸ್ಫೂರ್ತಿದಾಯಕ. ಹೀಗೆ ವಿವೇಕಾನಂದರು ಇಡೀ ವಿಶ್ವವನ್ನು ಗೌರವಿಸಿದರು, ಭಾರತವನ್ನು ಪ್ರೀತಿಯಿಂದ ಕಂಡರು. ಈ ನೆಲದ ಪಂರಂಪರೆಯ ಶ್ರದ್ಧಾಳುವಾದರು; ಈ ಕಾರಣದಿಂದಲೇ ಅವರು ಎಂದೆಂದಿಗೂ ಪ್ರಸ್ತುತ ಹಾಗೂ ಯುವಕರಿಗೆ ಸ್ಫೂರ್ತಿ.

ಫಲಪುಷ್ಪ ಪ್ರದರ್ಶನ : ಈ ಬಾರಿ ವಿವೇಕಾನಂದ ಮಾದರಿ

Follow Us:
Download App:
  • android
  • ios