Tamil Nadu election 2026: ಕಾಲ್ತುಳಿತದ ದುರಂತದ ನಂತರ ಮೊದಲ ಸಭೆ ನಡೆಸಿದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ, ನಟ ವಿಜಯ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. 2026ರ ಚುನಾವಣೆ ಟಿವಿಕೆ ಮತ್ತು ಡಿಎಂಕೆ ನಡುವಿನ ನೇರ ಹಣಾಹಣಿಯಾಗಲಿದೆ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾಬಲಿಪುರಂ (ನ.6): 41 ಜನರನ್ನು ಬಲಿ ಪಡೆದ ಕರೂರು ಕಾಲ್ತುಳಿತದ ಬಳಿಕ ಮೊದಲ ಬಾರಿ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಬುಧವಾರ ಸಾಮಾನ್ಯ ಸಭೆ ನಡೆಸಿದೆ. ಈ ವೇಳೆ, ‘ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಪಕ್ಷ ಗೊತ್ತುವಳಿ ಅಂಗೀಕರಿಸಿದೆ.
2026ರ ಚುನಾವಣೆ ಟಿವಿಕೆ ಮತ್ತು ಡಿಎಂಕೆ ನಡುವಿನ ಯುದ್ಧ
ಇದೇ ವೇಳೆ, ‘2026ರ ಚುನಾವಣೆ ಕೇವಲ 2 ಪಕ್ಷಗಳ(ಟಿವಿಕೆ ಮತ್ತು ಡಿಎಂಕೆ) ನಡುವಿನ ಪ್ರಬಲ ಯುದ್ಧವಾಗಲಿದೆ. ಇದರಲ್ಲಿ ಟಿವಿಕೆಯ ಗೆಲುವು ಶೇ.100ರಷ್ಟು ನಿಶ್ಚಿತ’ ಎಂದು ವಿಜಯ್ ಹೇಳಿದ್ದಾರೆ. ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ, ‘ಡಿಎಂಕೆ ಕಡೆಯವರು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದು, ಪಕ್ಷಕ್ಕಾಗಿ ಶ್ರಮಿಸುತ್ತಿರುವವರನ್ನು ಕೆಡವಲು ಅದನ್ನು ಬಳಸಿಕೊಳ್ಳುತ್ತಿದೆ. ಸಾಕ್ಷ್ಯಗಳೊಂದಿಗೆ ಆಡಳಿತಾರೂಢ ಪಕ್ಷದ ವೈಫಲ್ಯಗಳನ್ನು ತೋರಿಸುವ ವಿಪಕ್ಷ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹತ್ತಿಕ್ಕಲಾಗುತ್ತಿದೆ’ ಎಂದು ಆರೋಪಿಸಲಾಗಿದೆ.
ಜತೆಗೆ, ವಿಜಯ್ ಹಾಗೂ ಸಾರ್ವಜನಿಕರ ಭದ್ರತೆಗಾಗಿ ಯಾವುದೇ ಭೇದವಿಲ್ಲದೆ ಟಿವಿಕೆ ಸಭೆಗಳಿಗೆ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದೆ.
ಹಿನ್ನಡೆ ತಾತ್ಕಾಲಿಕ- ವಿಜಯ್:
ಸೆ.27ರಂದು ನಡೆದ ಕಾಲ್ತುಳಿತವು ವಿಜಯ್ಗೆ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎಂಬ ವಿಶ್ಲೇಷಣೆಗಳಿಗೆ ಪ್ರತಿಕ್ರಿಯಿಸಿ, ‘ಆ ಘಟನೆಯು ಬಹಳ ನೋವುಂಟುಮಾಡಿತ್ತು. ಆದರೆ ಇವೆಲ್ಲಾ ತಾತ್ಕಾಲಿಕ ಅಡೆತಡೆಗಳು. ಎಲ್ಲವನ್ನೂ ಹಿಮ್ಮೆಟ್ಟುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
