ಸುಪ್ರಿಯಾ ಶ್ರೀನಾಥೆ, ದಿಲೀಪ್ ಘೋಷ್ಗೆ ಚುನಾವಣಾ ಆಯೋಗದಿಂದ ನೋಟಿಸ್!
ಚುನಾವಣಾ ಆಯೋಗವು ಕ್ರಮವಾಗಿ ಕಂಗನಾ ರಣಾವತ್ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ವಿವಾದಾತ್ಮಕ ವಿಚಾರಕ್ಕಾಗಿ ಸುಪ್ರಿಯಾ ಶ್ರೀನಾಥೆ ಮತ್ತು ದಿಲೀಪ್ ಘೋಷ್ ಅವರಿಂದ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.
ನವದೆಹಲಿ (ಮಾ.27): "ಮಹಿಳೆಯರ ಗೌರವ ಮತ್ತು ಘನತೆಯ ವಿರುದ್ಧ ಅವಮಾನಕರ, ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಗಳಿಗಾಗಿ" ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಮತ್ತು ಬಿಜೆಪಿಯ ದಿಲೀಪ್ ಘೋಷ್ ಅವರಿಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 29ರ ಸಂಜೆ 5 ಗಂಟೆಯ ಒಳಗಾಗಿ ನೋಟಿಸ್ಗೆ ಉತ್ತರ ನೀಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಜೆಪಿಯ ಮಂಡಿ ಲೋಕಸಭಾ ಅಭ್ಯರ್ಥಿ ಕಂಗನಾ ರಣಾವತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಸುಪ್ರಿಯಾ ಶ್ರೀನಾಥೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಬಿಜೆಪಿ ತನ್ನ ಮೇಲೆ ದಾಳಿ ನಡೆಸುತ್ತಿರುವ ನಡುವೆಯೇ ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ನ ಆಕ್ಸೆಸ್ ಹೊಂದಿರುವ ಯಾರೋ ಒಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ ಎಂದು ಸುಪ್ರಿಯಾ ಶ್ರೀನಾಥೆ ನಂತರ ಸ್ಪಷ್ಟನೆ ನೀಡಿದ್ದರು.
ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಕುಟುಂಬದ ಹಿನ್ನೆಲೆಯನ್ನು ಲೇವಡಿ ಮಾಡಿದ್ದರು. ವೀಡಿಯೊವೊಂದರಲ್ಲಿ, ದಿಲೀಪ್ ಘೋಷ್ ಅವರು ಮುಖ್ಯಮಂತ್ರಿಗಳ 'ರಾಜ್ಯದ ಮಗಳು' ಹೇಳಿಕೆಯನ್ನು ಲೇವಡಿ ಮಾಡಿದರು ಮತ್ತು "ಅವರು ಮೊದಲು ತನ್ನ ತಂದೆ ಯಾರೆಂದು ನಿರ್ಧರಿಸಬೇಕು" ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಮೇಲೆ ಕಾನೂನು ಕ್ರಮಕ್ಕೆ ಕಂಗನಾ ಚಿಂತನೆ
ಗೋವಾಕ್ಕೆ ಹೋಗುವ ನಮ್ಮ ಮುಖ್ಯಮಂತ್ರಿ, ನಾನು ಗೋವಾದ ಮಗಳು ಎಂದು ಹೇಳುತ್ತಾರೆ. ಬಳಿಕ ತ್ರಿಪುರಕ್ಕೆ ಹೋಗುವ ಅವರು ಅಲ್ಲಿಯೂ ನಾನು ತ್ರಿಪುರದ ಮಗಳು ಎನ್ನುತ್ತಾರೆ. ನನ್ನ ಪ್ರಕಾರ ಅವರು ತಮ್ಮ ತಂದೆ ಯಾರು ಅನ್ನೋದನ್ನ ಮೊದಲು ನಿರ್ಧಾರ ಮಾಡಬೇಕು ಎಂದು 59 ವರ್ಷದ ಬಿಜೆಪಿ ನಾಯಕ ಹೇಳಿದ್ದಾರೆ.
ಪ್ರತಿ ಹೆಣ್ಣು ತನ್ನ ಘನತೆಗೆ ಅರ್ಹ, ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಪೋಸ್ಟ್ಗೆ ಕಂಗನಾ ತಿರುಗೇಟು!