ಅಯೋಧ್ಯೆ ಘಟನೆಯ ನಂತರ ಮುಚ್ಚಿದ್ದ ಉತ್ತರ ಪ್ರದೇಶದ ಶಿವ ದೇವಾಲಯವನ್ನು 32 ವರ್ಷಗಳ ನಂತರ ಪುನಃ ತೆರೆಯಲಾಗಿದೆ. ಮುಸ್ಲಿಮರು ಪುಷ್ಪವೃಷ್ಟಿ ಮಾಡುವ ಮೂಲಕ ಕೋಮು ಸೌಹಾರ್ದತೆ ಮೆರೆದರು.

ಮುಜಫ್ಫರ್‌ನಗರ (ಉತ್ತರ ಪ್ರದೇಶ) : 32 ವರ್ಷಗಳ ಹಿಂದೆ ಅಯೋಧ್ಯೆ ದಾಳಿ ವೇಳೆ ಮುಚ್ಚಲ್ಪಟ್ಟಿದ್ದ ಉತ್ತರಪ್ರದೇಶದ ಶಿವ ದೇವಾಲಯವೊಂದರ ಬಾಗಿಲನ್ನು ಸೋಮವಾರ ಪುನಃ ತೆಗೆಯಲಾಗಿದೆ. ಈ ವೇಳೆ ನಡೆದ ಮೆರವಣಿಗೆ ಮೇಲೆ ಮುಸ್ಲಿಮರು ಪುಷ್ಪವೃಷ್ಟಿ ಸುರಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.

Add Asianetnews Kannada as a Preferred SourcegooglePreferred

1992ರಲ್ಲಿ ನಡೆದ ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸದ ವೇಳೆ ಉತ್ತರ ಪ್ರದೇಶದ ಲುಧಾವಾಲಾ ಎಂಬಲ್ಲಿ ಕೋಮುಗಲಭೆ ಉಂಟಾಗಿತ್ತು. ಆ ವೇಳೆ ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿದ್ದ ಶಿವ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಕುಟುಂಬವು ವಿಗ್ರಹ, ಶಿವನ ಲಿಂಗವನ್ನು ತೆಗೆದುಕೊಂಡು ವಲಸೆ ಹೊರಟಿತ್ತು. ಬಳಿಕ ದೇಗುಲ ಪೂಜೆ ಕಾಣದೆ ಪಾಳುಬಿದ್ದಿತ್ತು.

ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಇನ್ನೊಂದು ನಿರ್ಮಾಣಕ್ಕೆ ಹಣದ ಕೊರತೆ : ದೇಣಿಗೆ ಹಣ ಕೇವಲ 1 ಕೋಟಿ ರು. ಮಾತ್ರ!

ಆದರೆ ಜಿಲ್ಲಾಡಳಿತದ ಶ್ರಮದಿಂದಾಗಿ ಮತ್ತೆ ದೇಗುಲಕ್ಕೆ ಜೀವಕಳೆ ಬಂದಿದ್ದು ದೇವರನ್ನು ಮರು ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಸ್ವಾಮಿ ಯಶವೀರ್‌ ಮಹಾರಾಜ್ ಅವರ ನೇತೃತ್ವದಲ್ಲಿ ದೇಗುಲ ಶುದ್ಧೀಕರಣ, ಹೋಮ ಹವನ, ಪೂಜಾ ಕೈಂಕರ್ಯ ನಡೆದವು. ಈ ವೇಳೆ ಮುಸ್ಲಿಮರು ಹಿಂದೂಗಳು ನಡೆಸಿದ ಮೆರವಣಿಗೆ ಮೇಲೆ ಪುಷ್ಪ ಸುರಿಸಿ ಆನಂದದಿಂದ ಸ್ವಾಗತಿಸಿದರು.

ಎನ್‌ಸಿಇಆರ್‌ಟಿ ಪಠ್ಯ ಪುಸ್ತಕದಲ್ಲಿ ಬಾಬ್ರಿ ಹೆಸರು ಮಾಯ: ಚರ್ಚೆಗೆ ಗ್ರಾಸವಾದ ಪಠ್ಯ ತಿದ್ದುಪಡಿ

ಸಿಟಿ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ಅವರು ದೇಗುಲ ಪುನರಾರಂಭ ಕುರಿತು ಮಾತನಾಡಿದ್ದು, ಎಲ್ಲಾ ಕಾರ್ಯಕ್ರಮಗಳು ಯಾವುದೇ ಗೊಂದಲವಿಲ್ಲದೆ ನಡೆದವು. ವಾತಾವರಣವು ಸೌಹಾರ್ದಯುತವಾಗಿತ್ತು ಮತ್ತು ಸ್ವಾಮಿ ಯಶ್ವೀರ್ ಮಹಾರಾಜ್ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಶಾಂತಿಯುತವಾಗಿ ಹಿಂದಿರುಗಿದರು ಎಂದು ತಿಳಿಸಿದ್ದಾರೆ. ಅಲ್ಲದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಮುಸ್ಲಿಂ ಬಾಂಧವರು ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು ವಿಶೇಷವಾಗಿದೆ. 'ಹವನ' ಮತ್ತು ಇತರ ಆಚರಣೆಗಳೊಂದಿಗೆ ಶುದ್ಧೀಕರಣ ಸಮಾರಂಭದ ನೇತೃತ್ವ ವಹಿಸಿದ್ದ ಸ್ವಾಮಿ ಯಶ್ವೀರ್ ಮಹಾರಾಜ್, "ಇದು ನಮಗೆ ಮಹತ್ವದ ಕ್ಷಣವಾಗಿದೆ. ವರ್ಷಗಳ ಕಾಲ ಮುಚ್ಚಿದ ದೇವಾಲಯವನ್ನು ಸರಿಯಾದ ಶುದ್ಧೀಕರಣದ ನಂತರ ಮತ್ತೆ ತೆರೆಯಲಾಗಿದೆ" ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.