* ಕಾಗ್ರೆಸ್‌ನಲ್ಲಿ ಮತ್ತೆ ತಳಮಳ* ಸಿಂಧಿಯಾ, ಜಿತಿನ್ ಬೆನ್ನಲ್ಲೇ ಮತ್ತೊಂದು ವಿಕೆಟ್ ಪತನ?* ದೆಹಲಿಗೆ ಹಾರಿದ ಪೈಲಟ್, ಕೈ ಪಾಳಯಕ್ಕೆ ರೆಡ್‌ ಅಲರ್ಟ್

ನವದೆಹಲಿ(ಜೂ.12): ಕಾಂಗ್ರೆಸ್‌ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಇತ್ತೀಚೆಗೆ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಲು ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ದೆಹಲಿ ತಲುಪಿದ್ದಾರೆ. ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ನೀಡುವ ಭರವಸೆ ನೀಡಿ ತಿಂಗಳುಗಳು ಉರುಳಿದರೂ ಈ ವಿಚಾರ ಬಗೆಹರಿಯದೆ ಉಳಿದಿದೆ ಎಂದು ಪೈಲಟ್ ಹೇಳಿದ್ದಾರೆ. ಜಿತಿನ್ ಪ್ರಸಾದ್ ಕಾಂಗ್ರೆಸ್ ಬಿಟ್ಟ ಹಾಗೂ ಬಿಜೆಪಿಗೆ ಸೇರ್ಪಡೆಗೊಂಡ ಕೆಲವೇ ದಿನಗಳಲ್ಲಿ ರಾಜಸ್ಥಾನ ನಾಯಕನ ಈ ಪ್ರವಾಸ ಪಕ್ಷಕ್ಕೆ ರೆಡ್‌ ಅಲರ್ಟ್‌ ಸಂಕೇತ ನೀಡಿದೆ. ಇದನ್ನು ಕಾಂಗ್ರೆಸ್‌ ಸದ್ಯ ಕಡೆಗಣಿಸುವಂತಿಲ್ಲ.

Add Asianetnews Kannada as a Preferred SourcegooglePreferred

ಬಿಜರೆಪಿ ನಾಯಕಿ ಬಹುಗುಣಾ ಜೋಶಿಯವರ ಹೇಳಿಕೆಯನ್ನು ತಿರಸ್ಕರಿಸಿದ ಕೆಲವೇ ಗಂಟೆ ಬಳಿಕ ಶುಕ್ರವಾರದಂದು ಪೈಲಟ್‌ ದೆಹಲಿ ತಲುಪಿದ್ದಾರೆ. ಅತ್ತ ಬಿಜೆಪಿ ನಾಯಕಿ ಜೋಶಿ ತಾನು ಈಗಾಗಲೇ ಪೈಲಟ್ ಬಳಿ ಮಾತನಾಡಿದ್ದು, ಶೀಘ್ರದಲ್ಲೇ ಕಮಲ ಪಾಳಯಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದಿದ್ದರು.

ಆದರೆ ಈ ಮಾತುಗಳನ್ನು ತಿರಸ್ಕರಿಸಿದ್ದ ಪೈಲಟ್ 'ಜೋಶಿಯವರು ಸಚಿನ್ ಬಳಿ ಮಾತನಾಡಿದ್ದೇನೆ ಎಂದಿದ್ದರು. ಬಹುಶಃ ಸಚಿನ್ ತೆಂಡುಲ್ಕರ್ ಬಳಿ ಇರಬಹುದು. ನನ್ನೊಂದಿಗೆ ಮಾತನಾಡುವ ಧೈರ್ಯ ಅವರಿಗಿಲ್ಲ ಎಂದಿದ್ದಾರೆ.

ಆದರೆ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪೈಲಟ್ ದೆಹಲಿಗೆ ಹಾರಿದ್ದು, ಯಾರೂ ನನ್ನನ್ನು ಸಾಮಾನ್ಯವಾಗಿ ಪರಿಗಣಿಸಬೇಡಿ ಎಂಬ ಸಂದೇಶ ನೀಡಿದ್ದಾರೆ.

ಕಳೆದ ವರ್ಷ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷಕ್ಕೆ ಗುಡ್‌ಬೈ ಹೇಳಿದ್ದರು. ಅದರ ಬೆನ್ನಲ್ಲೇ ಜಿತಿನ್ ಪ್ರಸಾದ್ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸದ್ಯ ಪೈಲಟ್ ಕೂಡಾ ಪಕ್ಷದಿಂದ ದೂರ ಸರಿಯುವ ಲಕ್ಷಣಗಳು ಕಂಡು ಬಂದಿವೆ.