ಶಬರಿಮಲೆಯಲ್ಲಿ ಇಂದು ಮಂಡಲ ಪೂಜೆ ಆರಂಭ: ಭಕ್ತರಲ್ಲಿ ಗೊಂದಲ, ಪೊಲೀಸರಲ್ಲಿ ಆತಂಕ!
ಶಬರಿಮಲೆಯಲ್ಲಿ ಇಂದು ಮಂಡಲ ಪೂಜೆ ಆರಂಭ| ವಾರ್ಷಿಕ ಶಬರಿಮಲೆ ಯಾತ್ರಾ ಅವಧಿ ಇಂದಿನಿಂದ ಆರಂಭ| ಇಂದು ಸಂಜೆ 5 ಗಂಟೆಯಿಂದ 41 ದಿನಗಳ ಮಂಡಲ ಪೂಜೆ ಋತುವಿಗೆ ಚಾಲನೆ| ಮರುಪರಿಶೀಲನಾ ಅರ್ಜಿಯನ್ನು ವಿಸ್ತೃತ ಬೆಂಚ್ಗೆ ವರ್ಗಾಯಿಸಿರುವ ಸುಪ್ರೀಂಕೋರ್ಟ್| ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಭಕ್ತರಲ್ಲಿ ಗೊಂದಲ| ಭದ್ರತೆ ಒದಗಿಸುವಲ್ಲಿ ಹೈರಾಣಾಗಿರುವ ಪೊಲೀಸರು|
ತಿರುವನಂತಪುರಂ(ನ.16): ಶಬರಿಮಲೆ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತ ಬೆಂಚ್ಗೆ ವರ್ಗಾಯಿಸಿದ ಪರಿಣಾಮ, ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶದ ಕುರಿತಾದ ಗೊಂದಲ ಮುಂದುವರೆದಿದೆ.
ಈ ಮಧ್ಯೆ ವಾರ್ಷಿಕ ಶಬರಿಮಲೆ ಯಾತ್ರಾ ಅವಧಿ ಇಂದಿನಿಂದ ಆರಂಭವಾಗುತ್ತಿದ್ದು, ಇಂದು ಸಂಜೆ 5 ಗಂಟೆಯಿಂದ 41 ದಿನಗಳ ಮಂಡಲ ಪೂಜೆ ಋತುವಿಗೆ ಅಧಿಕೃತ ಚಾಲನೆ ದೊರೆಯಲಿದೆ.
ಇಂದು ಸಂಜೆ 5 ಗಂಟೆಗೆ ದೇವಾಲಯ ಮುಕ್ತವಾಗಲಿದ್ದು, ಅರ್ಚಕ ಮೆಲ್ಸಂತಿ ವಾಸುದೇವನ್ ನಂಪೂದರಿ ದೇವಾಲಯದ ಶ್ರೀಕೋವಿಲ್ನ್ನು ಮಹೇಶ್ ಮೊಹನರು ತಂತ್ರಿಗಳ ಸಮ್ಮುಖದಲ್ಲಿ ತೆರೆಯಲಿದ್ದಾರೆ.
ಶಬರಿಮಲೆ ವಿವಾದ: ಮಹಿಳೆಯರ ಪ್ರವೇಶಕ್ಕಿಲ್ಲ ತಡೆ, ಆದರೆ ಇದೇ ತೀರ್ಪು ಅಂತಿಮವಲ್ಲ
ಸಂಪ್ರದಾಯದ ಪ್ರಕಾರ ಶ್ರೀಕೋವಿಲ್ ನಲ್ಲಿ ಇಂದು ಸಂಜೆ ಯಾವುದೇ ಸಂಪ್ರದಾಯಗಳು ನಡೆಯುವುದಿಲ್ಲ. ಹೊಸ ಮೆಲ್ಸಂತಿಯ ಕಳಶಾಭಿಷೇಕ ಇಂದು ಸಂಜೆ ನೆರವೇರಲಿದೆ.
ಇನ್ನು ಶಬರಿಮಲೆ ಯಾತ್ರೆಗೆ ಹೋಗುವ ಭಕ್ತರಲ್ಲಿ ಪುನರ್ ಪರಿಶೀಲನಾ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಗೊಂದಲವಿದೆ. ಶಬರಿಮಲೆ ಬೆಟ್ಟಕ್ಕೆ ಹೋಗುವ ಮಧ್ಯೆ, ನಿಲಕ್ಕಲ್ನಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಯಾತ್ರಿಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಅಯ್ಯಪ್ಪ ಭಕ್ತರಲ್ಲಿ ಎದುರಾಗಿದೆ ಕಳವಳ
ಅಲ್ಲದೇ ದೇವಾಲಯ ಪ್ರವೇಶಿಸ ಬಯಸುವ ಮಹಿಳೆಯರಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಹೇಳಿರುವುದರಿಂದ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆ ಒದಗಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.