Asianet Suvarna News Asianet Suvarna News

ನಿತ್ಯಾನಂದನ ರಿಸರ್ವ್ ಬ್ಯಾಂಕ್ ಶುರು, ಕೈಲಾಸಿಯನ್ ಡಾಲರ್ ಕರೆನ್ಸಿ ಬಿಡುಗಡೆ!

ನಿತ್ಯಾನಿಂದನ ರಿಸವ್‌ರ್‍ ಬ್ಯಾಂಕ್‌, ಕರೆನ್ಸಿ ಬಿಡುಗಡೆ| ಗಣೇಶ ಚತುರ್ಥಿಯಂದು ವಿವಾದಿತ ಸ್ವಾಮಿಯಿಂದ ನಾಣ್ಯ ಅನಾವರಣ

Rape Accused Fugitive Godman Nithyananda Launches Reserve Bank of Kailasa on Ganesh Chaturthi
Author
Bangalore, First Published Aug 24, 2020, 7:16 AM IST

ನವದೆಹಲಿ(ಆ.24): ದಕ್ಷಿಣ ಅಮೆರಿಕದ ದ್ವೀಪವೊಂದರಲ್ಲಿ ಕೈಲಾಸ ಎಂಬ ದೇಶ ಸ್ಥಾಪಿಸಿರುವ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮಿ ನಿತ್ಯಾನಂದ, ತನ್ನ ಹೊಸ ದೇಶದಲ್ಲಿ ರಿಸವ್‌ರ್‍ ಬ್ಯಾಂಕ್‌ ಸ್ಥಾಪನೆ ಮಾಡಿ, ಹೊಸ ಕರೆನ್ಸಿ ಬಿಡುಗಡೆ ಮಾಡಿದ್ದಾನೆ. ಗಣೇಶ ಚತುರ್ಥಿಯ ದಿನವಾದ ಶನಿವಾರ ಆತ ‘ರಿಸವ್‌ರ್‍ ಬ್ಯಾಂಕ್‌ ಆಫ್‌ ಕೈಲಾಸ’ ಮತ್ತು ಕೈಲಾಸ ದೇಶದ ಕರೆನ್ಸಿಯಾದ ‘ಕೈಲಾಸಿಯನ್‌ ಡಾಲರ್‌’ ಅನ್ನು ಅನಾವರಣಗೊಳಿಸಿದ್ದಾನೆ.

ಈ ಕುರಿತು ಆತ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ನಮ್ಮ ‘ರಿಸವ್‌ರ್‍ ಬ್ಯಾಂಕ್‌ ಆಫ ಕೈಲಾಸ’ ಕಾನೂನು ಬದ್ಧವಾಗಿ ಸ್ಥಾಪನೆಯಾದ ಸಂಸ್ಥೆಯಾಗಿದೆ. ಇದನ್ನು ಸ್ಥಾಪನೆ ಮಾಡಲು ಈಗಾಗಲೇ ನಾವು ದೇಶವೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ದೇಶಗಳೊಂದಿಗೆ ರಾಜತಾಂತ್ರಿಕ ಒಪ್ಪಂದ ಮಾಡಿಕೊಳ್ಳುತ್ತೇವೋ ಆ ದೇಶಗಳೊಂದಿಗೆ ಮಾತ್ರವೇ ನಮ್ಮ ಕರೆನ್ಸಿ ಬಳಸಬಹುದು. ಈಗ ನಾವು ಶುಭ ಮುಹೂರ್ತವೆಂದು ಆನ್‌ಲೈನ್‌ ಮೂಲಕ ನಾಣ್ಯ ಬಿಡುಗಡೆ ಮಾಡಲಿದ್ದೇವೆ. ಶೀಘ್ರವೇ ಇನ್ನೊಮ್ಮೆ ಕಾರ್ಯಕ್ರಮ ಆಯೋಜಿಸಿ ನಾಣ್ಯ ಬಿಡುಗಡೆ ಮಾಡಲಾಗುವುದು’ ಎಂದು ಹೇಳಲಾಗಿದೆ.

8 ವಿವಿಧ ಮುಖಬೆಲೆ ನಾಣ್ಯ

ನಿತ್ಯಾನಂದ ಶನಿವಾರ ಬಿಡುಗಡೆ ಮಾಡಿರುವ 8 ವಿವಿಧ ಮೌಲ್ಯಗಳನ್ನು ಹೊಂದಿವೆ. ಇಂಥ ಒಟ್ಟು 77 ಮಾದರಿಯ ನಾಣ್ಯಗಳನ್ನು ಅನಾವರಣಗೊಳಿಸಲಾಗಿದೆ.

ಎಲ್ಲವೂ ಬಂಗಾರದ ನಾಣ್ಯ

1 ಕೈಲಾಸಿಯನ್‌ ಡಾಲರ್‌ ಮುಖಬೆಲೆಯ ನಾಣ್ಯವು 11.66 ಗ್ರಾಮ್‌ ತೂಕ ಹೊಂದಿದೆ. ಮುಕ್ಕಾಲು ಡಾಲರ ನಾಣ್ಯ 8.74 ಗ್ರಾಂ, ಅರ್ಧ ಕೈಲಾಸಿಯನ್‌ ಡಾಲರ್‌ 5.81 ಗ್ರಾಂ, ಕಾಲು ಡಾಲರ್‌ನ ನಾಣ್ಯ 2.91 ಗ್ರಾಂ ತೂಕ ಹೊಂದಿದೆ. ಇದೇ ರೀತಿ 3,4,5,10 ಡಾಲರ್‌ನ ನಾಣ್ಯಗಳನ್ನೂ ಬಿಡುಗಡೆ ಮಾಡಲಾಗಿದೆ. ಈ ನಾಣ್ಯಗಳು ಶತಮಾನಗಳ ಹಿಂದೆ ಹಿಂದೂ ದೇಶಗಳಲ್ಲಿ ಬಳಸಲಾಗುತ್ತಿದ್ದ ನಾಣ್ಯಗಳ ಶೈಲಿಯನ್ನು ಹೊಂದಿವೆ.

ಚಿಹ್ನೆ, ಸೀಲ್‌ ಬಿಡುಗಡೆ

ನಾಣ್ಯದ ಜೊತೆಗೆ ಕೈಲಾಸ ದೇಶದ ಅಧಿಕೃತ ಚಿಹ್ನೆ ಮತ್ತು ಸೀಲ್‌ ಅನ್ನೂ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಕೈಲಾಸ ಸರ್ಕಾರದ ಸದಸ್ಯರು ಧರಿಸಲಿದ್ದಾರೆ.

ಅಜ್ಞಾತ ಸ್ಥಳವೊಂದರಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ನಿತ್ಯಾನಂದ, ‘ನಾನೊಂದು ಮಹತ್ವದ ಘೋಷಣೆ ಮಾಡುತ್ತಿದ್ದೇನೆ. ಗಣೇಶ ಚತುರ್ಥಿಯಂದು ನಾನು ಕೈಲಾಸ ದೇಶದ ಕರೆನ್ಸಿಯನ್ನು ಬಿಡುಗಡೆ ಮಾಡಲಿದ್ದೇನೆ. ಎಲ್ಲಾ ಆರ್ಥಿಕ ಯೋಜನೆಗಳು ಸಿದ್ಧವಾಗಿವೆ. 300 ಪುಟಗಳ ಸಮಗ್ರ ಆರ್ಥಿಕ ಯೋಜನೆಯನ್ನು ಬಿಡುಗಡೆ ಮಾಡಲಾಗುವುದು. ಈ ಎಲ್ಲಾ ಪ್ರಕ್ರಿಯೆಗಳು ಕಾನೂನು ಸಮ್ಮತವಾಗಿಯೇ ನಡೆದಿವೆ. ನಮ್ಮ ರಿಸವ್‌ರ್‍ ಬ್ಯಾಂಕ್‌ ಕೂಡ ಕಾನೂನು ಸಮ್ಮತವಾಗಿಯೇ ಸ್ಥಾಪನೆಗೊಂಡಿದೆ. ವ್ಯಾಟಿಕನ್‌ ಬ್ಯಾಂಕಿನ ಮಾದರಿಯಲ್ಲಿ ಈ ಬ್ಯಾಂಕ್‌ ರಚನೆ ಮಾಡಲಾಗಿದೆ. ವಿಶ್ವದೆಲ್ಲೆಡೆಯಿಂದ ಭಕ್ತರಿಂದ ಸಂಗ್ರಹಿಸಿದ ಹಣವನ್ನು ಇಲ್ಲಿ ಇಡಲಾಗುತ್ತದೆ. ಈ ಹಣವನ್ನು ಸಂಘಟಿತ ವಿಧಾನದ ಮೂಲಕ ಬಳಕೆ ಮಾಡಲಾಗುತ್ತದೆ. ಕೈಲಾಸ ದೇಶದ ಉದ್ದೇಶಿತ ಯೋಜನೆಗಳಿಗಾಗಿ ಹಣವನ್ನು ಬಳಸಲಾಗುವುದು. ಆ.22ರಂದು ಕರೆನ್ಸಿಯ ಹೆಸರು ಮತ್ತು ವಿನ್ಯಾಸವನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿಕೊಂಡಿದ್ದಾನೆ.

ಇದೇ ವೇಳೆ ನಿತ್ಯಾನಂದ ಬಿಡುಗಡೆ ಮಾಡಲಿದ್ದಾನೆ ಎಂದು ಹೇಳಲಾಗಿರುವ ಕರೆನ್ಸಿಯ ಫೋಟೋವೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಕರೆನ್ಸಿಯಲ್ಲಿ ನಿತ್ಯಾನಂದನ ಫೋಟೋವನ್ನು ಮುದ್ರಿಸಲಾಗಿದ್ದು, ಅದರ ಕೆಳಗೆ ‘ನಿತ್ಯಾನಂದ ಪರಮ ಶಿವಂ’ ಎಂದು ಬರೆಯಲಾಗಿದೆ.

ಅತ್ಯಾಚಾರ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ನಿತ್ಯಾನಂದ ಬೆಂಗಳೂರಿನ ಬಿಡದಿಯ ಸಮೀಪ ಆಶ್ರಮವೊಂದನ್ನು ಸ್ಥಾಪಿಸಿದ್ದು, ಬಂಧನ ಭೀತಿಯಿಂದ ಭಾರತ ಬಿಟ್ಟು ಪರಾರಿ ಆಗಿದ್ದಾನೆ. ದಕ್ಷಿಣ ಅಮೆರಿಕದ ಈಕ್ವೆಡಾರ್‌ನಿಂದ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅದನ್ನು ಸ್ವಾಯತ್ತ ದೇಶ ಎಂಬುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ ಕೈಲಾಸ ಎಂಬುದಾಗಿಯೂ ನಿತ್ಯಾನಂದ ಹೆಸರನ್ನು ಇಟ್ಟಿದ್ದಾನೆ. ಕೈಲಾಸ ದ್ವೀಪದಲ್ಲಿ ನಿತ್ಯಾನಂದನ ಸಾವಿರ ಭಕ್ತರು ತಂಗಿದ್ದಾರೆ ಎನ್ನಲಾಗಿದೆ. ತನ್ನ ದ್ವೀಪಕ್ಕೆ ಸ್ವತಂತ್ರ ದೇಶದ ಸ್ಥಾನಮಾನ ನೀಡುವಂತೆ ವಿಶ್ವಸಂಸ್ಥೆಗೂ ಪತ್ರ ಬರೆದು ನಿತ್ಯಾನಂದ ಸುದ್ದಿಯಾಗಿದ್ದ. ಆದರೆ, ಕೈಲಾಸಕ್ಕೆ ಇನ್ನೂ ದೇಶದ ಸ್ಥಾನಮಾನ ಲಭ್ಯವಾಗಿಲ್ಲ. ಅದು ಇನ್ನೂ ಈಕ್ವೆಡಾರ್‌ ಸ್ವಾಧೀನದಲ್ಲೇ ಇದೆ.

ನಿತ್ಯಾನಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಆರೋಪವನ್ನು ಎದುರಿಸುತ್ತಿದ್ದು, ಆತನ ಪತ್ತೆಗೆ ಇಂಟರ್‌ಪೋಲ್‌ ಈಗಾಗಲೇ ರೆಡ್‌ ಕಾರ್ನರ್‌ ನೋಟಿಸ್‌ ಅನ್ನು ಜಾರಿ ಮಾಡಿದೆ.

Follow Us:
Download App:
  • android
  • ios