ಧನ್ವಂತರಿ ಜನ್ಮದಿನದಂದು ದೇಶದಲ್ಲಿ 12,850 ಕೋಟಿ ರು.ವೆಚ್ಚದಲ್ಲಿ ಆರೋಗ್ಯ ಕ್ಷೇತ್ರದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಅದರಲ್ಲಿ ಕರ್ನಾಟಕದ ನಾಲ್ಕು ಯೋಜನೆಗಳೂ ಇವೆ. 

ನವದೆಹಲಿ (ಅ.30): ಧನ್ವಂತರಿ ಜನ್ಮದಿನದಂದು ದೇಶದಲ್ಲಿ 12,850 ಕೋಟಿ ರು.ವೆಚ್ಚದಲ್ಲಿ ಆರೋಗ್ಯ ಕ್ಷೇತ್ರದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಅದರಲ್ಲಿ ಕರ್ನಾಟಕದ ನಾಲ್ಕು ಯೋಜನೆಗಳೂ ಇವೆ. ಆಯುಷ್ಮಾನ್‌ ಭಾರತ ಆರೋಗ್ಯ ಮೂಲಸೌಕರ್ಯ ಯೋಜನೆಯಡಿ ಕರ್ನಾಟಕ ಸೇರಿ ದೇಶದ 21 ಕಡೆ ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗಳ ನಿರ್ಮಾಣಕ್ಕೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ರಾಜ್ಯದ ನಾಲ್ಕು ಯೋಜನೆಗಳು: ಬೆಂಗಳೂರಿನ ಬೊಮ್ಮಸಂದ್ರ ಹಾಗೂ ಕೋಲಾರ ತಾಲೂಕಿನ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 23.75 ಕೋಟಿ ರು.ಗಳಲ್ಲಿ ನಿರ್ಮಾಣಗೊಳ್ಳಲಿರುವ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡ (ಕ್ರಿಟಿಕಲ್‌ ಕೇರ್‌ ಬ್ಲಾಕ್‌)ಕ್ಕೆ ಶಿಲಾನ್ಯಾಸ ನೆರವೇರಿಸಿದರು. 

ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ 50 ಹಾಸಿಗೆಯ ತೀವ್ರ ನಿಗಾ ಘಟಕಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ, ಬೆಂಗಳೂರು ಸೇರಿ ಐದು ಕಡೆ ಉತ್ಪಾದನೆ ಆಧರಿತ ಪ್ರೋತ್ಸಾಹ ಯೋಜನೆಯಡಿ ವೈದ್ಯ ಸೇವೆ ಹಾಗೂ ಸಗಟು ಔಷಧ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದಲ್ಲದೆ ಬೆಂಗಳೂರಿನ ಇಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ)ನಲ್ಲಿ ಆಯುಷ್‌ ಸಚಿವಾಲಯ ಪ್ರಾಯೋಜಿತ ‘ಮಧುಮೇಹ ಮತ್ತು ಮೆಟಬಾಲಿಕ್‌ ಸಂಡ್ರೋಮ್‌ಗೆ ಆಯುರ್ವೇದ’ ಎಂಬ ಉತ್ಕೃಷ್ಟತಾ ಕೇಂದ್ರಕ್ಕೂಮೋದಿ ಚಾಲನೆ ನೀಡಿದರು. 

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ: ಸ್ಟಾರ್‌ವಾರ್ ಮಾತ್ರವಲ್ಲ ಕುಟುಂಬ ಕದನಕ್ಕೂ ಸಿದ್ಧ!

ಆಧುನಿಕ ಔಷಧವು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತಿದ್ದು, ಇನ್ನು ಉತ್ತಮ ಚಿಕಿತ್ಸೆಗಳನ್ನು ಒದಗಿಸಲು ಆಯುರ್ವೇದದಂತಹ ಪರ್ಯಾಯ ವಿಧಾನಗಳನ್ನು ಅನ್ವೇಷಿಸಲು ಆಸ್ತಕಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಪ್ರಾಚೀನ ವ್ಯವಸ್ಥೆಯು ಸಮಗ್ರ ಮಧುಮೇಹ ತಡೆಗಟ್ಟುವಿಕೆಯಲ್ಲಿ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಸಂಶೋಧನೆಗಳು ಹೆಚ್ಚಲಿವೆ ಎಂದು ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ ಹೇಳಿದೆ.