Asianet Suvarna News Asianet Suvarna News

ಕಾಂಗ್ರೆಸ್ ಪಕ್ಷದ ವಿರುದ್ಧ ಹಾರ್ದಿಕ್ ಪಟೇಲ್ ಕಿಡಿ, ಸಂತಾನಹರಣ ಮಾಡಿದ ವರನಂತೆ ನನ್ನ ಸ್ಥಿತಿ!

* ಗುಜರಾತ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಗೊಂದಲ'

* ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ತಮ್ಮದೇ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ

* ಪಾಟಿದಾರ್ ಸಮುದಾಯದವರು ತಮ್ಮನ್ನು ಅವಮಾನಿಸಿದ್ದಾರೆ ಎಂದು ಆರೋಪ

Patidar leader Hardik Patel lashes out at Congress claims to be sidelined in Gujarat unit pod
Author
Bangalore, First Published Apr 14, 2022, 10:36 AM IST

ಅಹಮದಾಬಾದ್(ಏ.14): ಈ ವರ್ಷಾಂತ್ಯದಲ್ಲಿ ಗುಜರಾತ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಪಾಟಿದಾರ್ ಸಮಾಜದ ದೊಡ್ಡ ನಾಯಕ ಹಾಗೂ ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ತಮ್ಮದೇ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಪಾಟಿದಾರ್ ಸಮುದಾಯದವರು ತಮ್ಮನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ನಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಗುಜರಾತ್ ಕಾಂಗ್ರೆಸ್‌ನಲ್ಲಿ ನನ್ನ ಸ್ಥಿತಿ ಮದುವೆಯ ನಂತರ ಸಂತಾನಹರಣ ಮಾಡಿಕೊಂಡ ವರನಂತಾಗಿದೆ ಎಂದು ಹೇಳಿದ್ದಾರೆ.

26 ನೇ ವಯಸ್ಸಿನಲ್ಲಿ ರಾಜ್ಯ ಕಾಂಗ್ರೆಸ್‌ನ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಹೊರಹೊಮ್ಮಿದ ಹಾರ್ದಿಕ್ ಬುಧವಾರ ಕಾಂಗ್ರೆಸ್‌ಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಕೊರತೆಯಿದೆ ಎಂದು ಆರೋಪಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಹೆಚ್ಚಿನ ನಾಯಕರು ಇರುವುದರಿಂದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಟಿದಾರ್ ನಾಯಕ ನರೇಶ್ ಪಟೇಲ್ ಕಾಂಗ್ರೆಸ್ ಸೇರ್ಪಡೆ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿದ ಅವರು, ಪ್ರತಿದಿನ ಮಾಧ್ಯಮಗಳಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಬರುತ್ತಿದ್ದು, ಇದರಿಂದ ಇಡೀ ಪಾಟಿದಾರ್ ಸಮಾಜಕ್ಕೆ ಅವಮಾನವಾಗುತ್ತಿದೆ. ಈ ಪಾಟಿದಾರ್ ಸಮಾಜ ಸಹಿಸುವುದಿಲ್ಲ. ಎರಡು ತಿಂಗಳಾದರೂ ನರೇಶ್ ಪಟೇಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಇದುವರೆಗೆ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಸ್ಥಳೀಯ ನಾಯಕತ್ವ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಹಾರ್ದಿಕ್ ಪಟೇಲ್ ತನ್ನನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ ಮತ್ತು ಪಿಸಿಸಿ (ರಾಜ್ಯ ಕಾಂಗ್ರೆಸ್ ಸಮಿತಿ) ಯ ಯಾವುದೇ ಸಭೆಗೆ ನನಗೆ ಆಹ್ವಾನವಿಲ್ಲ ಎಂದು ಹೇಳಿದರು. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನನ್ನು ಸಂಪರ್ಕಿಸುವುದಿಲ್ಲ, ಹಾಗಾದರೆ ಈ ಹುದ್ದೆಯ ಮಹತ್ವವೇನು? ಗುಜರಾತ್ ಕಾಂಗ್ರೆಸ್‌ನಲ್ಲಿ ಕಾರ್ಯಕಾರಿ ಅಧ್ಯಕ್ಷರ ಅರ್ಥವು ಮದುವೆಯ ನಂತರ ವರನಿಗೆ ಸಂತಾನಹರಣ ಮಾಡಿದ ಸ್ಥಿತಿಯಂತಾಗಿದೆ ಎಂದಿದ್ದಾರೆ. 

ಟೈಮ್ಸ್‌ ಆಫ್ ಇಂಡಿಯಾ ವರದಿಯ ಪ್ರಕಾರ, 2015 ರ ಸ್ಥಳೀಯ ಚುನಾವಣೆಗಳು ಮತ್ತು 2017 ರ ವಿಧಾನಸಭಾ ಚುನಾವಣೆಯಲ್ಲಿ ಪಾಟಿದಾರ್ ಸಮುದಾಯದ ಆಂದೋಲನವು ಕಾಂಗ್ರೆಸ್‌ಗೆ ದೊಡ್ಡ ಚುನಾವಣಾ ಲಾಭವನ್ನು ನೀಡಿತು ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ. ಅದರ ನಂತರ ಏನಾಯಿತು ಎಂದು ಹಾರ್ದಿಕ್ ಪಟೇಲ್ ಕೇಳಿದರು. 2019ರ ನಂತರ ಹಾರ್ದಿಕ್ ಪಟೇಲ್ ಅವರನ್ನು ಪಕ್ಷವು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ನ ಅನೇಕರು ನಂಬಿದ್ದಾರೆ ಎಂದು ಅವರು ಹೇಳಿದರು. ಮುಂದಿನ 5-10 ವರ್ಷಗಳಲ್ಲಿ ನಾನು ಅವರ ಪ್ರಗತಿಗೆ ಅಡ್ಡಿಯಾಗಬಹುದು ಎಂದು ಪಕ್ಷದ ಕೆಲವು ಜನರು ಯೋಚಿಸುತ್ತಿರುವುದೇ ಇದಕ್ಕೆ ಕಾರಣ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಟಿದಾರ್ ಹಿಂಸಾಚಾರ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ಘೋಷಿಸಿರುವ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಅವರ ಈ ಅಸಮಾಧಾನ ಮುನ್ನೆಲೆಗೆ ಬಂದಿದೆ. ಇದಾದ ಬಳಿಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಾರ್ದಿಕ್ ಇಂಗಿತ ವ್ಯಕ್ತಪಡಿಸಿದ್ದಾರೆ. 2015 ರಲ್ಲಿ ಹಾರ್ದಿಕ್ ಪಟೇಲ್ ಒಬಿಸಿ ಸಮುದಾಯಕ್ಕೆ ಮೀಸಲಾತಿಗಾಗಿ ಅಹಮದಾಬಾದ್‌ನಲ್ಲಿ ಬೃಹತ್ ರ್ಯಾಲಿಯನ್ನು ನಡೆಸಿದ್ದರು ಎಂಬುವುದು ಉಲ್ಲೇಖನೀಯ. ಆ ನಂತರ ಅವರು ಗುಜರಾತ್‌ನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದರು. ಮಾರ್ಚ್ 2019 ರಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಜುಲೈ 2020 ರಲ್ಲಿ ಅವರನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು.

ಹಾರ್ದಿಕ್ ಅಸಮಾಧಾನದ ಬಗ್ಗೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಅವರನ್ನು ಕೇಳಿದಾಗ, ನಾನು ಹಾರ್ದಿಕ್ ಅವರೊಂದಿಗೆ ಮಾತನಾಡುತ್ತೇನೆ ಮತ್ತು ಅವರ ಅಸಮಾಧಾನಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯುತ್ತೇನೆ ಎಂದು ಹೇಳಿದರು. ನರೇಶ್ ಪಟೇಲ್ ಅವರನ್ನು ಸೇರಿಸಿಕೊಳ್ಳಲು ಪಕ್ಷ ಸಿದ್ಧವಿದೆ ಎಂದು ಠಾಕೂರ್ ಹೇಳಿದ್ದಾರೆ. ಅವರ ಜೊತೆ ಹಲವು ವಿಷಯಗಳ ಚರ್ಚೆ ನಡೆದಿದ್ದು, ಕಾಂಗ್ರೆಸ್ ಸೇರಬೇಕೋ ಬೇಡವೋ ಎಂಬುದು ಅವರೇ ನಿರ್ಧರಿಸಬೇಕು. ಹೀಗಿರುವಾಗ ಅವರನ್ನು ಮತ್ತು ಅವರ ಸಮುದಾಯವನ್ನು ಕಾಂಗ್ರೆಸ್ ಹೇಗೆ ಅವಮಾನಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios