ರೈತ ಹಿಂಸಾ ಸ್ಥಳ ಪ್ರವೇಶಕ್ಕೆ ವಿಪಕ್ಷಗಳಿಗೆ ತಡೆ!
* ಪ್ರಿಯಾಂಕಾ, ಪಂಜಾಬ್ ಡಿಸಿಎಂ ವಶಕ್ಕೆ
*ಅಖಿಲೇಶ್, ಬಾಘೇಲ್, ಚನ್ನಿಗೆ ಅನುಮತಿ ನಕಾರ
* ರೈತ ಹಿಂಸಾ ಸ್ಥಳ ಪ್ರವೇಶಕ್ಕೆ ವಿಪಕ್ಷಗಳಿಗೆ ತಡೆ
ಲಖೀಂಪುರ ಖೇರಿ(ಅ.05): ರೈತರು ಹಾಗೂ ಬಿಜೆಪಿ(BJP) ಕಾರ್ಯಕರ್ತರ ನಡುವೆ ಉತ್ತರ ಪ್ರದೇಶದ(Uttar Pradesh) ಲಖೀಂಪುರ ಖೇರಿ(Lakhimpur Kheri) ಜಿಲ್ಲೆಯ ಟಿಕೋನಿಯಾ ಗ್ರಾಮದಲ್ಲಿ ನಡೆದ ದಂಗೆಯಲ್ಲಿ ಎಂಟು ಮಂದಿ ಮೃತಪಟ್ಟಘಟನೆಗೆ ಸಂಬಂಧಿಸಿದಂತೆ ತೀವ್ರ ರಾಜಕೀಯ ಸಮರ ಆರಂಭವಾಗಿದೆ. ವಿವಿಧ ವಿಪಕ್ಷ ನಾಯಕರಿಗೆ ಘಟನಾ ಸ್ಥಳಕ್ಕೆ ತೆರಳದಂತೆ ನಿರ್ಬಂಧಿಸಲಾಗಿದೆ.
ಘಟನೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ(Congress Leader) ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಲಖೀಂಪುರಕ್ಕೆ ತೆರಳಲು ಮುಂದಾದಾಗ ಅವರನ್ನು ಭಾನುವಾರವೇ ಲಖನೌನಲ್ಲಿ ಪೊಲೀಸರು ಗೃಹ ಬಂಧನಕ್ಕೆ ಒಳಪಡಿಸಿದ್ದರು. ಸೋಮವಾರ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್(Akhilesh yadav), ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಬಿಎಸ್ಪಿ ನಾಯಕ ಎಸ್.ಸಿ.ಮಿಶ್ರಾ, ಆಪ್ನ ಸಂಜಯ್ ಸಿಂಗ್ ಮುಂತಾದವರಿಗೆ ಲಖೀಂಪುರ ಭೇಟಿಗೆ ಅನುಮತಿ ನಿರಾಖರಿಸಿದರು.
ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಂಧಾವಾ ಅವರನ್ನು ಸಹಾರನ್ಪುರದಲ್ಲಿ ವಶಕ್ಕೆ ಪಡೆಯಲಾಯಿತು. ಸದ್ಯ ಘಟನಾ ಸ್ಥಳಕ್ಕೆ ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಎಲ್ಲರ ಪ್ರವೇಶ ನಿರ್ಬಂಧಿಸಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಈ ಘಟನೆಗೆ ಸಂಬಂಧಿಸಿದಂತೆ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ರಣರಂಗ ಏರ್ಪಟ್ಟಿದೆ.
ಪ್ರಿಯಾಂಕಾ, ನೀನು ಹಿಮ್ಮೆಟ್ಟುವುದಿಲ್ಲ ಎಂದು ನನಗೆ ಗೊತ್ತು. ಅವರು ಧೈರ್ಯವಂತರನ್ನು ಕಂಡರೆ ಹೆದರುತ್ತಾರೆ. ದೇಶದ ಅನ್ನದಾತರು ನ್ಯಾಯಕ್ಕಾಗಿ ನಡೆಸುತ್ತಿರುವ ಈ ಅಹಿಂಸಾ ಯುದ್ಧದಲ್ಲಿ ಗೆಲ್ಲುವಂತೆ ನಾವು ಮಾಡೋಣ.
- ರಾಹುಲ್ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ