* ಸತತ 3ನೇ ವರ್ಷ ದೇಶದಲ್ಲಿ ಸಾಧಾರಣ ಮಳೆ* ಮುಂಗಾರು ಅಧಿಕೃತವಾಗಿ ಅಂತ್ಯ * ನಿನ್ನೆಯಿಂದಲೇ ಹಿಂಗಾರು ಮಾರುತಗಳ ಪ್ರವೇಶ

ನವದೆಹಲಿ(ಅ.26): ದೇಶದ ಕೃಷಿ ಕ್ಷೇತ್ರದ(Agricultural Sector) ಜೀವನಾಡಿಯಾಗಿರುವ ಮುಂಗಾರು(Monsoon) ಮಾರುತಗಳು ಅಧಿಕೃತವಾಗಿ ಸೋಮವಾರ ಅಂತ್ಯವಾಗಿವೆ. 1975ರ ನಂತರ ಮುಂಗಾರು ಇಷ್ಟು ವಿಳಂಬವಾಗಿ ನಿರ್ಗಮಿಸುತ್ತಿರುವುದು ಇದು ಏಳನೇ ಬಾರಿ ಎಂದು ಭಾರತೀಯ ಹವಾಮಾನ ಇಲಾಖೆ(India Meteorological Department) ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಚಟುವಟಿಕೆ ಗಮನಾರ್ಹವಾಗಿ ಇಳಿಕೆ ಕಂಡಿದೆ. ಇದೇ ವೇಳೆ, ದೇಶಕ್ಕೆ ಹಿಂಗಾರು ಮಾರುತಗಳ ಪ್ರವೇಶವಾಗಿದೆ. ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮಳೆ ಆರಂಭವಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಜೂನ್‌ನಲ್ಲಿ ದೇಶಕ್ಕೆ ಪ್ರವೇಶಿಸುವ ಮುಂಗಾರು ಮಾರುತಗಳು(ಂಒನಸೊಒನ) ಸೆ.17ರಿಂದ ನಿರ್ಗಮಿಸಲು ಆರಂಭಿಸುತ್ತವೆ. ಆದರೆ ಈ ಬಾರಿ ಅ.25ರವರೆಗೂ ಮಾರುತಗಳು ಇದ್ದವು. 1975ರ ಬಳಿಕ ಅ.25 ಅಥವಾ ಆನಂತರ ಮಾರುತ ನಿರ್ಗಮನವಾಗುತ್ತಿರುವುದು ಇದು 7ನೇ ಬಾರಿ. 2010ರಿಂದ 2021ರವರೆಗಿನ ಅವಧಿಯಲ್ಲೇ ಐದು ಬಾರಿ ಈ ರೀತಿ ಆಗಿದೆ ಎಂದು ವಿವರಿಸಿದೆ.

ಜೂ.3ರಂದು ದೇಶಕ್ಕೆ ಪ್ರವೇಶಿಸಿದ್ದ ಮುಂಗಾರು ನಾಲ್ಕು ತಿಂಗಳ ಅವಧಿಯಲ್ಲಿ ಸಾಮಾನ್ಯ ಪ್ರಮಾಣದ ಮಳೆಯನ್ನೇ ಸುರಿಸಿದೆ. ಜೂ.1ರಿಂದ ಸೆ.30ರವರೆಗೆ ದೇಶದಲ್ಲಿ ದೀರ್ಘಾವಧಿ ಸರಾಸರಿ 88 ಸೆಂ.ಮೀ. ಬದಲಿಗೆ 87 ಸೆಂ.ಮೀ. ಮಳೆ ತಂದಿದೆ ಎಂದು ಮಾಹಿತಿ ನೀಡಿದೆ.

ಹಿಂಗಾರು ಮಾರುತಗಳು ದಕ್ಷಿಣದ ರಾಜ್ಯಗಳಲ್ಲಿ ಮಳೆಯನ್ನು ಸುರಿಸಲಿದ್ದು, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಇರಲಿವೆ. ಈ ವರ್ಷ ಹಿಂಗಾರಿನಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.