ಕರ್ನಾಟಕ, ಕೇರಳ ಸೇರಿ ದೇಶದ 10 ರಾಜ್ಯಗಳಲ್ಲಿ ಎನ್‌ಐಎ, ಇಡಿ ಅಧಿಕಾರಿಗಳು ರೇಡ್‌ ನಡೆಸುತ್ತಿದ್ದಾರೆ. ಪಿಎಫ್‌ಐ, ಎಸ್‌ಡಿಪಿಐ ನಾಯಕರನ್ನು ಗುರಿಯಾಗಿಸಿ ಈ ದಾಳಿ ನಡೆಯುತ್ತಿದ್ದು, ಈ ವೇಳೆ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಕರ್ನಾಟಕ, ಕೇರಳದಲ್ಲಿ ಎನ್‌ಐಎ (NIA), ಇಡಿ (ED) ಮಧ್ಯರಾತ್ರಿಯೇ ಶಾಕ್‌ ಕೊಟ್ಟಿದೆ. ಪಿಎಫ್‌ಐ (PFI), ಎಸ್‌ಡಿಪಿಐ (SDPI) ನಾಯಕರನ್ನು ಗುರಿಯಾಗಿಸಿ ಎನ್‌ಐಎ ದಾಳಿ ನಡೆಸಿದೆ. ಬೆಂಗಳೂರು, ಮಂಗಳೂರು ಸೇರಿ ರಾಜ್ಯದಲ್ಲಿ 8 ಕಡೆ ಎನ್‌ಐಎ ದಾಳಿ ನಡೆಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇನ್ನು, ಕೇರಳದಲ್ಲಿ ಮಧ್ಯರಾತ್ರಿಯಿಂದಲೇ ಎನ್‌ಐಎ ಅಧಿಕಾರಿಗಳು ಸುಮಾರು 50 ಕಡೆ ರೇಡ್‌ ಮಾಡುತ್ತಿದ್ದಾರೆ. ಕೇರಳದಲ್ಲಿ ಪ್ರಮುಖವಾಗಿ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಪಿಎಫ್‌ಐ ಮುಖ್ಯಸ್ಥ ಓಎಂಎ ಸಲಾಮ್‌ ನಿವಾಸದ ಮೇಲೆ ಮಧ್ಯರಾತ್ರಿಯೇ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದು, ಈ ಹಿನ್ನೆಲೆ ಪಿಎಫ್‌ಐ ಕಾರ್ಯಕರ್ತರು ಎನ್‌ಐಎ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ, ತಮಿಳುನಾಡು ಸೇರಿ ದೇಶದ 10 ರಾಜ್ಯಗಳಲ್ಲಿ ರೇಡ್‌ ನಡೆಯುತ್ತಿದ್ದು, ಈ ವೇಳೆ 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. 

ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು ಪಿಎಫ್ಐ ಹಾಗೂ ಎಸ್‌ಡಿಪಿಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಗಾ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿದೆ. ಕಣ್ಣೂರು ಮುಖ್ಯರಸ್ತೆಯಲ್ಲಿರುವ ರಾಗಾ ಅಪಾರ್ಟ್‌ಮೆಂಟ್‌ನಲ್ಲಿ ಎನ್‌ಐಎ ಅಧಿಕಾರಿಗಳು ಭಾರಿ ಭದ್ರತೆಯೊಂದಿಗೆ ರೇಡ್‌ ಮಾಡಿದ್ದು, ಎನ್‌ಐಎ ತಂಡ ಪರಿಶೀಲನೆ ನಡೆಸುತ್ತಿದೆ. 

NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಇನ್ನು, ಮಂಗಳೂರಿನಲ್ಲೂ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಎಫ್ಐ, ಎಸ್‌ಡಿಪಿಐ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಮತ್ತು ಎಸ್‌ಡಿಪಿಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿದೆ. ಬಜಪೆ, ಜೋಕಟ್ಟೆ ಸೇರಿ ಹಲವೆಡೆ ಮನೆಗಳ ಮೇಲೆ ರೇಡ್‌ ನಡೆದಿದೆ. ಎನ್‌ಐಎ ದಾಳಿ ನಡೆಸುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು, ಕುಳಾಯಿ, ಕಾವೂರು, ಜೋಕಟ್ಟೆ, ಬಜಪೆಯ ಪಿಎಫ್‌ಐ ಮತ್ತು ಎಸ್ ಡಿಪಿಐ ನಾಯಕರ ಮನೆಗಳ ಮೇಲೂ ದಾಳಿ ನಡೆಸಿದೆ. ಘಟನಾ ಸ್ಥಳದಲ್ಲಿ ಸಿಆರ್‌ಪಿಎಫ್ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. ಮಂಗಳೂರಿನ ಕುಳಾಯಿ ಬಳಿಯ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಸಹೋದರನ ಮನೆ ಮೇಲೂ ದಾಳಿ ನಡೆದಿದೆ. ಈ ಮಧ್ಯೆ, ಎನ್‌ಐಎ ದಾಳಿ ಹಿನ್ನೆಲೆ ನೆಲ್ಲಿಕಾಯಿ ರಸ್ತೆಗೆ ‌ಮಂಗಳೂರು ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಇದೇ ರಸ್ತೆಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್ಐ ಜಿಲ್ಲಾ ಕಚೇರಿ ಇದೆ. ಭಾರಿ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರ ಜೊತೆ ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ.

Scroll to load tweet…

ಅಲ್ಲದೆ, ಪ್ರತಿಭಟನಾ ನಿರತ ಎಸ್‌ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದ್ದು, ಕಮಿಷನರ್ ಸೂಚನೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದವರನ್ನು ಬಸ್ಸಿನಲ್ಲಿ ಪೊಲೀಸರು ತುಂಬಿಸಿದ್ದಾರೆ. 

ಕೇರಳದಲ್ಲಿ 50 ಕಡೆ ಎನ್‌ಐಎ, ಇಡಿ ರೇಡ್‌

ದೆಹಲಿ ಮತ್ತು ಕೇರಳದಲ್ಲಿ ದಾಖಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದಲ್ಲಿ ಅನೇಕ ದಾಳಿಗಳನ್ನು ನಡೆಸಿದೆ. ಕೇರಳದ ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಐಎ ಪಾಪ್ಯುಲರ್ ಫ್ರಂಟ್ ಕಚೇರಿಗಳು ಹಾಗೂ ಮುಖಂಡರ ಮನೆಗಳಲ್ಲಿ ಶೋಧ ನಡೆಸಿದೆ. ಪಿಎಫ್‌ಐ ತಿರುವನಂತಪುರ ಜಿಲ್ಲಾ ಸಮಿತಿ ಕಚೇರಿ ಮೇಲೂ ದಾಳಿ ನಡೆಸಲಾಗುತ್ತಿದೆ. ಹಾಗೂ, ಪಿಎಫ್‌ಐ ಮುಖಂಡರಾದ ಅಶ್ರಫ್ ಮೌಲ್ವಿ, ಇ.ಎಂ ಅಬ್ದುಲ್ ರಹಮಾನ್, ಜೈನುದ್ದೀನ್ ಅವರ ಮನೆಗಳಲ್ಲಿ ಶೋಧ ನಡೆಸಲಾಗುತ್ತಿದೆ.


ಪ್ರವೀಣ್ ಕೊಲೆ ಪ್ರಕರಣ: ತನಿಖೆ ಮತ್ತಷ್ಟು ಚುರುಕು, ದೊಡ್ಡ ದೊಡ್ಡ ಕುಳಗಳಿಗೆ ಎನ್‌ಐಎ ಖೆಡ್ಡಾ!

Scroll to load tweet…

ಇನ್ನು, ಈ ರೇಡ್‌ ವೇಳೆ ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯರೊಬ್ಬರನ್ನೂ ಎನ್‌ಐಎ ವಶಕ್ಕೆ ಪಡೆದಿದೆ. ತ್ರಿಶೂರ್ ಮೂಲದ ಯಾಹಿಯಾ ತಂಗಲ್ ಅವರನ್ನು ಪೆರುಂಬೈಲಾವು ಅವರ ಮನೆಯಿಂದ ಬಂಧಿಸಲಾಗಿದೆ. ದಾಳಿ ಖಂಡಿಸಿ ಹಲವೆಡೆ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ಮಾತನಾಡಿ, ಈ ದಾಳಿಯು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.

Scroll to load tweet…

ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಆಮೂಲಾಗ್ರಗೊಳಿಸುವುದು ಮುಂತಾದ ಕಾರಣಗಳ ಹಿನ್ನೆಲೆ ಈ ರೇಡ್‌ ನಡೆಯುತ್ತಿದೆ. ಈ ವಾರದ ಆರಂಭದಲ್ಲಿ, ಎನ್‌ಐಎ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅನೇಕ ಸ್ಥಳಗಳಲ್ಲಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ಪಿಎಫ್‌ಐಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತು.