ರಾಜ್ಯದ ಗ್ಯಾರಂಟಿ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ನವದೆಹಲಿ (ಜೂ.16): ರಾಜ್ಯದ ಗ್ಯಾರಂಟಿ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್ಎಫ್ಎಸ್ (ರಾಷ್ಟ್ರೀಯ ಆಹಾರ ಸುರಕ್ಷಾ) ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡುತ್ತಿರುವ ಅಕ್ಕಿಯಲ್ಲಿ ಒಂದು ಕಾಳು ಕೂಡ ಕಡಿಮೆ ಮಾಡಿಲ್ಲ. ಆಹಾರ ಭದ್ರತೆ ಕಾಯ್ದೆಯಡಿ ಕೇಂದ್ರ ಸರ್ಕಾರ ಕೊಡುವ ಅಕ್ಕಿ ಇದಾಗಿದೆ. ದೇಶದಾದ್ಯಂತ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ.
ಕರ್ನಾಟಕ ಕೇಳಿರುವ ಹೆಚ್ಚುವರಿ ಅಕ್ಕಿ ಕೊಡಲ್ಲ ಎಂಬುದು ಇಂದು ಮಾಡಿದ ತೀರ್ಮಾನವಲ್ಲ. ಉಳಿದ ಜನರಿಗೆ ಬೆಲೆ ಏರಿಕೆ ತಟ್ಟಬಾರದು ಎನ್ನುವ ಕಾರಣಕ್ಕೆ ಅಕ್ಕಿಯನ್ನು ಬೇರೆ ಯಾವ ರಾಜ್ಯಕ್ಕೂ ಹೆಚ್ಚುವರಿಯಾಗಿ ಕೊಡುವುದಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಹೆಚ್ಚುವರಿ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದೆ. ರಾಜ್ಯಗಳಿಗೆ ಹೆಚ್ಚುವರಿಯಾಗಿ ಅಕ್ಕಿ ನೀಡುವ ನಿಯಮವನ್ನು ಕೇಂದ್ರ ಈಗ ನಿಲ್ಲಿಸಿದೆ ಎಂದು ಸ್ಪಷ್ಟಪಡಿಸಿದರು. ಹೆಚ್ಚುವರಿ ಅಕ್ಕಿ ಬೇಕಾದರೆ ರಾಜ್ಯ ಸರ್ಕಾರ ತನ್ನ ಮೂಲಗಳಿಂದ ಖರೀದಿ ಮಾಡಬೇಕು. ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿ ಅಲ್ಲ.
ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ
ಕರ್ನಾಟಕದ ರೈತರಿಂದಲೇ ಅಕ್ಕಿ ಖರೀದಿ ಮಾಡಿ, ಅವರ ನೆರವಿಗೂ ಬನ್ನಿ. ಈ ಹಿಂದೆ ಬೊಮ್ಮಾಯಿ ಸರ್ಕಾರ ರೈತರಿಂದ ರಾಗಿಯನ್ನು ನೇರವಾಗಿ ಖರೀದಿ ಮಾಡಿತ್ತು ಎಂದು ತೇಜಸ್ವಿ ಹೇಳಿದರು. ‘ಅಕ್ಕಿ ಕೇಂದ್ರದ್ದು, ಫೋಟೋ ನಮ್ಮದು’ ಎಂದು ಫೋಟೋ ಹಾಕಿಕೊಂಡು ಹೋಗಲು ಕಾಂಗ್ರೆಸ್ ನಿರ್ಧಾರ ಮಾಡಿದಂತಿದೆ. ಕಾಂಗ್ರೆಸ್ನ ಈ ಆಟ ಜನರಿಗೆ ಗೊತ್ತಾಗುತ್ತದೆ ಎಂದು ಹೇಳಿದರು.
ಪ್ರತಾಪ್ ಸಿಂಹ-ಎಚ್ಡಿಕೆ ಅಡ್ಜಸ್ಟ್ಮೆಂಟ್ ರಾಜಕಾರಣಿಗಳು: ಎನ್.ಚಲುವರಾಯಸ್ವಾಮಿ
ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ ಎನ್ನುವ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ನ ಬೇಜವಾಬ್ದಾರಿ ಹೇಳಿಕೆಯಾಗಿದೆ. ಯಾವುದೇ ಸ್ಥಿತಿಯಲ್ಲೂ ನಾಲ್ಕು ತಿಂಗಳಿಗೆ ಆಗುವಷ್ಟುಅಕ್ಕಿಯನ್ನು ದಾಸ್ತಾನು ಮಾಡಲಾಗುತ್ತದೆ. ಗೋದಾಮಿನಲ್ಲಿರುವ ಅಕ್ಕಿ ಕೊಳೆಯುತ್ತಿಲ್ಲ. ಕಾಂಗ್ರೆಸ್ನವರು ಗ್ಯಾರಂಟಿ ಕಾರ್ಯಕ್ರಮ ತಂದಿದ್ದಾರೆ ಎಂದು ಒಂದೇ ದಿನ ಎಲ್ಲಾ ಅಕ್ಕಿಯನ್ನು ಗೋದಾಮಿನಿಂದ ಕೊಡಲು ಬರುವುದಿಲ್ಲ. ಕಾಂಗ್ರೆಸ್ನ ಹೇಳಿಕೆ ‘ಕುಣಿಯಲು ಬಾರದವ ನೆಲ ಡೊಂಕು ಎಂದನಂತೆ’ ಎನ್ನುವಂತಾಗಿದೆ ಎಂದು ಕಾಂಗ್ರೆಸ್ಗೆ ಟಾಂಗ್ ಕೊಟ್ಟರು.
