ಗೌಡರಿಗೆ ಮೋದಿ ಮೆಚ್ಚುಗೆ| ಕೃಷಿ ಕಾಯ್ದೆ ಚರ್ಚೆಗೆ ದೇವೇಗೌಡರಿಂದ ಗಾಂಭೀರ‍್ಯ| ಸರ್ಕಾರದ ಉತ್ತಮ ಪ್ರಯತ್ನಗಳನ್ನು ಮೆಚ್ಚಿಕೊಳ್ತಾರೆ

ನವದೆಹಲಿ(ಫೆ.09): ಕೃಷಿ ಕಾಯ್ದೆ ಜಾರಿ ವಿಷಯದಲ್ಲಿ ವಿಪಕ್ಷಗಳನ್ನು ಸೋಮವಾರ ರಾಜ್ಯಸಭೆಯಲ್ಲಿ ಎಳೆಎಳೆಯಾಗಿ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಬಹುವಾಗಿ ಹೊಗಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ‘ಕೃಷಿ ಕಾಯ್ದೆ ಕುರಿತು ಸದಸ್ಯರು ಸದನದಲ್ಲಿ ಬಹಳ ವಿಸ್ತೃತವಾಗಿ ಮಾತನಾಡಿದ್ದಾರೆ. ಆದರೆ ಈ ಪೈಕಿ ಬಹುತೇಕ ಸಮಯ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನ ಹೇಗಿದೆ ಎಂಬುದಕ್ಕಷ್ಟೇ ಸೀಮಿತವಾಗಿದೆ. ಆದರೆ ವಿಷಯದ ಮೂಲದ ಬಗ್ಗೆ ಹೆಚ್ಚಿನ ಸಮಯ ವ್ಯಯಿಸಿದ್ದರೆ ಉಪಯೋಗವಾಗುತ್ತಿತ್ತು. ಆಂದೋಲನ ನಡೆಸುತ್ತಿರುವುದು ಏಕೆ ಎಂಬ ವಿಷಯದ ಬಗ್ಗೆ ವಿಪಕ್ಷ ನಾಯಕರು ಪೂರ್ಣ ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

ಇದೇ ವೇಳೆ ದೇವೇಗೌಡರ ಹೆಸರು ಪ್ರಸ್ತಾಪಿಸಿದ ಮೋದಿ, ‘ಈ ಇಡೀ ಚರ್ಚೆಗೆ ದೇವೇಗೌಡರು ಒಂದು ಗಾಂಭೀರ‍್ಯ ತಂದುಕೊಟ್ಟಿದ್ದಾರೆ. ಅವರು ಸರ್ಕಾರದ ಎಲ್ಲ ಉತ್ತಮ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನೂ ನೀಡಿದ್ದಾರೆ. ಏಕೆಂದರೆ ಅವರು ತಮ್ಮ ಇಡೀ ಜೀವನವನ್ನು ಕೃಷಿಕರಿಗೆ ಸಮರ್ಪಿಸಿಕೊಂಡಿದ್ದಾರೆ. ಹೀಗಾಗಿ ಅವರು ಸರ್ಕಾರದ ಎಲ್ಲಾ ಉತ್ತಮ ಪ್ರಯತ್ನಗಳನ್ನು ಶ್ಲಾಘಿಸಿಕೊಂಡೇ ಬಂದಿದ್ದಾರೆ. ಅವರಿಗೆ ನಾನು ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಕೊಂಡಾಡಿದರು.