Asianet Suvarna News Asianet Suvarna News

ದಂತವೈದ್ಯ ಮಾಣಿಕ್ ಸಹಾ ತ್ರಿಪುರಾದ ಹೊಸ ಮುಖ್ಯಮಂತ್ರಿ!

ವೃತ್ತಿಯಲ್ಲಿ ದಂತವೈದ್ಯರಾಗಿರುವ ಮಾಣಿಕ್ ಸಹಾ ಅವರು ಕಳೆದ ತಿಂಗಳಷ್ಟೇ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು ಬಿಜೆಪಿಯ ತ್ರಿಪುರಾ ರಾಜ್ಯಾಧ್ಯಕ್ಷರೂ ಆಗಿದ್ದಾರೆ.

Manik Saha who is a dentist by profession Made Tripura Chief Minister san
Author
Bengaluru, First Published May 14, 2022, 11:05 PM IST

ನವದೆಹಲಿ(ಮೇ. 14): ಹಠಾತ್ ರಾಜಕೀಯ ಟ್ವಿಸ್ಟ್‌ನಲ್ಲಿ ತ್ರಿಪುರಾ ಮುಖ್ಯಮಂತ್ರಿ (TRIPURA CM) ಬಿಪ್ಲಬ್ ಕುಮಾರ್ ದೇಬ್ (BIPLAB DEB) ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷದ ಮುನ್ನ ಬಿಜೆಪಿ ಡಾಕ್ಟರ್ ಮಾಣಿಕ್ ಸಹಾ (MANIK SAHA) ಅವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಿಸಿದೆ. ವೃತ್ತಿಯಲ್ಲಿ ದಂತವೈದ್ಯರಾಗಿರುವ ಮಾಣಿಕ್ ಸಹಾ ಅವರು ಕಳೆದ ತಿಂಗಳಷ್ಟೇ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು ಬಿಜೆಪಿಯ ತ್ರಿಪುರಾ ರಾಜ್ಯಾಧ್ಯಕ್ಷರೂ ಆಗಿದ್ದಾರೆ.

ತರಾತುರಿಯಲ್ಲಿ ಕರೆಯಲಾದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ (BJP legislature party meeting) ನಂತರ, ಬಿಪ್ಲಬ್ ಕುಮಾರ್ ದೇಬ್, ಮಾಣಿಕ್ ಸಹಾ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಘೋಷಿಸಿದರು ಮತ್ತು ಹೊಸ ಮುಖ್ಯಮಂತ್ರಿಗೆ ಸಹಕಾರವನ್ನು ನೀಡುವುದಾಗಿ ಹೇಳಿದರು. 

ಆದರೆ, ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ ಮತ್ತು ನಾಟಕೀಯ ದೃಶ್ಯಗಳು ರಾಜ್ಯದ ಬಿಜೆಪಿ ಕೇಂದ್ರ ಕಚೇರಿಯಿಂದ ವರದಿಯಾಗಿದೆ. ಸಚಿವ ರಾಮ್ ಪ್ರಸಾದ್ ಪಾಲ್ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದು, ಶಾಸಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಪರಿಸ್ಥಿತಿ ಶಾಂತವಾಗುವ ಮೊದಲು ರಾಮ್ ಪ್ರಸಾದ್ ಪಾಲ್ (MLA Ram Prasad Pal) ಸಭೆಯಲ್ಲಿದ್ದ ಕೆಲ ಕುರ್ಚಿಗಳನ್ನು ಮುರಿದರು. ಅವರು ಕಿರುಚುತ್ತಾ ನೆಲದ ಮೇಲೆ ಕುರ್ಚಿಯನ್ನು ಬಡಿಯುತ್ತಿರುವ ವೀಡಿಯೊ ಹೊರಬಿದ್ದಿದೆ. "ಮೈನ್ ಮಾರ್ ಜೌಂಗಾ (ನಾನು ಸಾಯುತ್ತೇನೆ)," ಎಂದು ಪದೇ ಪದೇ ಕಿರುಚುವುದು ಕೂಡ ದಾಖಲಾಗಿದೆ. ಹಿಂದಿನ ತ್ರಿಪುರ ರಾಜಮನೆತನದ ಸದಸ್ಯರಾದ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಪಾಲ್ ಬಯಸಿದ್ದರು ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ತಮ್ಮೊಂದಿಗೆ ಸಮಾಲೋಚನೆ ಮಾಡಲಾಗಿಲ್ಲ. ಕೇಂದ್ರ ನಾಯಕತ್ವವು ನಿರಂಕುಶವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಜೆಪಿ ಶಾಸಕರ ಒಂದು ವಿಭಾಗವು ಅಸಮಾಧಾನಗೊಂಡಿದೆ.ಬಿಜೆಪಿಯ ಹಿರಿಯ ನಾಯಕರಾದ ಭೂಪೇಂದರ್ ಯಾದವ್ ಮತ್ತು ವಿನೋದ್ ತಾವ್ಡೆ ಅವರು ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ವೀಕ್ಷಕರಾಗಿದ್ದರು.

"ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೆ ಮತ್ತು ಮುಂದೆಯೂ ಹಾಗೆಯೇ ಇರುತ್ತೇನೆ" ಎಂದು ಸಹಾ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು. 69 ವರ್ಷ ವಯಸ್ಸಿನ ದಂತ ವೈದ್ಯ ರಾಜಕಾರಣಿಯಾಗಿ ಮಾರ್ಪಟ್ಟಿರುವ ಅವರು ಮಾರ್ಚ್ 31 ರಂದು ಬಿಜೆಪಿ ಆಡಳಿತದ ಈಶಾನ್ಯ ರಾಜ್ಯದ ಏಕೈಕ ಸ್ಥಾನದಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ತ್ರಿಪುರಾ ವೈದ್ಯಕೀಯ ಕಾಲೇಜು ಮತ್ತು ಅಗರ್ತಲಾದ ಬಿಆರ್ ಅಂಬೇಡ್ಕರ್ ಸ್ಮಾರಕ ಬೋಧನಾ ಆಸ್ಪತ್ರೆಯ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ. ಮಾಣಿಕ್ ಸಹಾ ಅವರು 2016 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಅವರು ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.

2021 ರಲ್ಲಿ, ನಿರ್ಗಮಿತ ಮುಖ್ಯಮಂತ್ರಿ ದೇಬ್ ಅವರ ನಿಕಟ ಸಹವರ್ತಿ ಎನಿಸಿಕೊಂಡಿದ್ದ ಸಹಾ ಅವರು ತ್ರಿಪುರಾ ಬಿಜೆಪಿ ಪ್ರದೇಶ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ರಾಜ್ಯಪಾಲ ಎಸ್.ಎನ್. ಆರ್ಯ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಶನಿವಾರ ತಿಳಿಸಿದ ದೇಬ್, ಅವರು "ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡಬೇಕೆಂದು" ಪಕ್ಷವು ಬಯಸುತ್ತದೆ ಎಂದು ಹೇಳಿದರು. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಅವರು ಈ ಘೋಷಣೆ ಮಾಡಿದರು.

ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ರಾಜೀನಾಮೆ, ಶೀಘ್ರದಲ್ಲೇ ಹೊಸ ಸಿಎಂ ಹೆಸರು ಘೋಷಣೆ!

ಪಕ್ಷ ಎಲ್ಲಕ್ಕಿಂತ ಮಿಗಿಲಾದುದು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಅಥವಾ ತ್ರಿಪುರಾ ಮುಖ್ಯಮಂತ್ರಿಯಾಗಲಿ ನನಗೆ ನೀಡಿದ ಜವಾಬ್ದಾರಿಗಳಿಗೆ ನಾನು ನ್ಯಾಯ ಸಲ್ಲಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ತ್ರಿಪುರಾ, ಮತ್ತು ರಾಜ್ಯದ ಜನರಿಗೆ ಶಾಂತಿಯನ್ನು ಖಚಿತಪಡಿಸಿಕೊಳ್ಳುವುದರೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ," ದೇಬ್ ಸುದ್ದಿಗಾರರಿಗೆ ತಿಳಿಸಿದರು.

Tripura Education News Bulletin: ಕೋವಿಡ್ ಮಧ್ಯೆ ಶಿಕ್ಷಣಕ್ಕೆ ಹೊಸ ದಾರಿ ಹುಡುಕಿದ ತ್ರಿಪುರಾ ಸರ್ಕಾರ

ರಾಜ್ಯದಲ್ಲಿ ಬಿಜೆಪಿಯ ತಳಪಾಯ ಬಲಪಡಿಸಲು ನಾನು ವಿವಿಧ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಬೇಕಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲು ನಾನು ಮುಖ್ಯಮಂತ್ರಿ ಸ್ಥಾನದಲ್ಲಿರುವುದಕ್ಕಿಂತ ಸಾಮಾನ್ಯ ಕಾರ್ಯಕರ್ತನಾಗಿ (ಪಕ್ಷದ ಕಾರ್ಯಕರ್ತ) ಕೆಲಸ ಮಾಡಬೇಕು ಎಂದರು.

Follow Us:
Download App:
  • android
  • ios