25 ಜಿಲ್ಲೆ ವೈರಸ್‌ ಮುಕ್ತ| 14 ದಿನಗಳಿಂದ ಹೊಸ ಸೋಂಕು ಪತ್ತೆ ಇಲ್ಲ| ಲಾಕ್‌ಡೌನ್‌ ಫಲ: ಕೇಂದ್ರ| ದಾವಣಗೆರೆ, ಉಡುಪಿ, ತುಮಕೂರು, ಕೊಡಗು ಕೂಡ 25ರ ಪಟ್ಟಿಯಲ್ಲಿ

ನವದೆಹಲಿ(ಏ.14): ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ 21 ದಿನಗಳ ಲಾಕ್‌ಡೌನ್‌ ಫಲ ಕೊಟ್ಟಿದೆ. ಈ ಮೊದಲು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಕಳೆದ 14 ದಿನಗಳ ಅವಧಿಯಲ್ಲಿ ಒಂದೇ ಒಂದು ಸೋಂಕು ಪ್ರಕರಣಗಳೂ ದಾಖಲಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ 25 ಜಿಲ್ಲೆಗಳಲ್ಲಿ ಕರ್ನಾಟಕದ ದಾವಣಗೆರೆ, ಉಡುಪಿ, ಕೊಡಗು, ತುಮಕೂರು ಜಿಲ್ಲೆಗಳು ಸೇರಿವೆ.<br/>"

Add Asianetnews Kannada as a Preferred SourcegooglePreferred

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌, ಮುಂದಿನ ಆರು ವಾರಗಳ ಕಾಲ ಪರೀಕ್ಷೆ ನಡೆಸಲು ಬೇಕಾದ ಪರಿಕರಗಳು ಸರ್ಕಾರದ ಬಳಿ ಲಭ್ಯವಿದೆ. ಈವರೆಗೆ 2 ಲಕ್ಷ ಜನರ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಕೊರೋನಾ ವೈರಸ್‌ ಪತ್ತೆ ಆಗಿದ್ದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗದೇ ಇರುವುದು ಧನಾತ್ಮಕ ಬೆಳವಣಿಗೆ. ಲಾಕ್‌ಡೌನ್‌ ಹಾಗೂ ಮತ್ತಿತರೆ ನಿಗ್ರಹ ಕ್ರಮಗಳನ್ನು ಜಿಲ್ಲಾಡಳಿತಗಳು ಸರಿಯಾಗಿ ಜಾರಿಗೊಳಿಸಿದ್ದರಿಂದ ಈ ಫಲಿತಾಂಶ ದೊರೆತಿದೆ ಎಂದು ಹೇಳಿದರು.

ಕ್ವಾರಂಟೈನ್‌ 28 ದಿನಕ್ಕೆ ವಿಸ್ತರಣೆ!, 14 ದಿನ ಹೆಚ್ಚಿಸಲು ಕಾರಣವೇನು?

ಕೊರೋನಾ ವೈರಸ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ ಐಸಿಎಂಆರ್‌ ನೇತೃತ್ವದಲ್ಲಿ ರಚನೆ ಆದ ಮುಖ್ಯ ತಂತ್ರಗಾರಿಕಾ ತಂಡ ತ್ವರಿತವಾಗಿ ಫಲಿತಾಂಶ ನೀಡುವ ಮತ್ತು ಕಡಿಮೆ ಖರ್ಚಿನ ರೋಗ ಪತ್ತೆ ವಿಧಾನವನ್ನು ಹಾಗೂ ಹೊಸ ಔಷಧವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಐಸಿಎಂಆರ್‌ ಅಧಿಕಾರಿಗಳ ಪ್ರಕಾರ 156 ಸರ್ಕಾರಿ ಲ್ಯಾಬ್‌ಗಳು ಹಾಗೂ 69 ಖಾಸಗಿ ಲ್ಯಾಬ್‌ಗಳಲ್ಲಿ ಈ ವರೆಗೆ 2,06,212 ಲಕ್ಷ ಮಂದಿಗೆ ಕೊರೋನಾ ವೈರಸ್‌ ಪರೀಕ್ಷೆಗಳನ್ನು ನಡೆಸಲಾಗಿದೆ.