ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!
* ತಮಿಳ್ನಾಡು ಉದ್ಯಾನದಲ್ಲಿ ಕೋವಿಡ್ಗೆ ಸಿಂಹ ಬಲಿ
* ಕೋವಿಡ್ಗೆ ಬಲಿಯಾದ ದೇಶದ ಮೊದಲ ಪ್ರಾಣಿ
* ಇನ್ನೂ 8 ಸಿಂಹಗಳಿಗೆ ಸೋಂಕು
* ಕೋವಿಡ್ ಖಚಿತ ಮಾಡಿಕೊಳ್ಳಲು ಮತ್ತೊಮ್ಮೆ ಪರೀಕ್ಷೆ
ಚೆನ್ನೈ(ಜೂ.05): ತಮಿಳುನಾಡಿನ ವಂದಲೂರು ಪಟ್ಟಣದಲ್ಲಿರುವ ಆರಿಗನಾರ್ ಅಣ್ಣಾ ಪ್ರಾಣಿಶಾಸ್ತ್ರದ ಮೃಗಾಲಯದಲ್ಲಿ ಕೋವಿಡ್ ಸೋಂಕಿನಿಂದ ಸಿಂಹವೊಂದು ಸಾವಿಗೀಡಾಗಿದೆ. ಇದು ಕೋವಿಡ್ ಸೋಂಕಿಗೆ ದೇಶದಲ್ಲಿ ಬಲಿಯಾದ ಮೊದಲ ಪ್ರಾಣಿ ಎನ್ನಿಸಿಕೊಂಡಿದೆ.
ಮೊದಲ ಪರೀಕ್ಷೆಯಲ್ಲಿ ಇದಕ್ಕೆ ಕೋವಿಡ್ ದೃಢಪಟ್ಟಿದೆ. ಆದಾಗ್ಯೂ, ಮೃಗಾಲಯದ ಅಧಿಕಾರಿಗಳು ‘ನೀಲಾ’ ಎಂಬ ಈ ಸಿಂಹ ನಿಜಕ್ಕೂ ಕೋವಿಡ್ಗೇ ಬಲಿಯಾಗಿದೆಯೇ ಅಥವಾ ಪೂರ್ವರೋಗಗಳು ಅಥವಾ ಇನ್ನಾವುದೋ ವೈರಸ್ಗೆ ಬಲಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೈದರಾಬಾದ್ ಹಾಗೂ ಉತ್ತರ ಪ್ರದೇಶದ ಬರೇಲಿಯ ಉನ್ನತ ಪ್ರಯೋಗಾಲಯಕ್ಕೆ ಸಿಂಹಗಳ ಸ್ಯಾಂಪಲ್ ಕಳಿಸಿಕೊಡಲು ನಿರ್ಧರಿಸಿದ್ದಾರೆ.
ಉದ್ಯಾನದಲ್ಲಿ ಒಟ್ಟಾರೆ 11 ಸಿಂಹಗಳಿದ್ದು, ಅವುಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಪ್ರಕಾರ, ಮೊದಲಿನ ಪರೀಕ್ಷೆಯಲ್ಲಿ 9 ಸಿಂಹಗಳಲ್ಲಿ ಕೋವಿಡ್ ವೈರಾಣು ಪತ್ತೆಯಾಗಿದೆ. ಇದರಲ್ಲಿ ನೀಲಾ ಎಂಬ ಸಿಂಹಿಣಿ ಮೃತಪಟ್ಟಿದೆ. ಉಳಿದ 8 ಸಿಂಹಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಝೂ ಪ್ರಕಟಣೆ ತಿಳಿಸಿದೆ.
ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಉದ್ಯಾನವನವನ್ನು ಸಹ ಕಳೆದೊಂದು ತಿಂಗಳಿಂದ ಮುಚ್ಚಲಾಗಿದೆ. ಆದಾಗ್ಯೂ, ಸಿಂಹಗಳಿಗೆ ಸೋಂಕು ಹೇಗೆ ಹಬ್ಬಿತು ಎಂಬುದು ಸಿಬ್ಬಂದಿಯ ತಲೆಬಿಸಿಯಾಗಿದೆ.
ಇತ್ತೀಚೆಗಷ್ಟೇ ಹೈದರಾಬಾದ್ನ ನೆಹರೂ ಪ್ರಾಣಿಗಳ ಉದ್ಯಾನವನದಲ್ಲಿ 8 ಸಿಂಹಗಳು ಕೋವಿಡ್ಗೆ ಸಿಲುಕಿದ್ದವು.