ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಫೆರಿ ಬೋಟಿಗೆ ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. 101 ಮಂದಿಯನ್ನು ರಕ್ಷಿಸಲಾಗಿದೆ.

ಮುಂಬೈ(ಡಿ.18) ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ಹಾಗೂ ಪ್ರವಾಸಿಗರ ಕರೆದೊಯ್ಯುತ್ತಿದ್ದ ಬೋಟು ಅಪಘಾತಕ್ಕೀಡಾದ ಘಟನೆ ಮುಂಬೈ ಕರಾವಳಿ ತೀರದಲ್ಲಿ ನಡೆದಿದೆ. ಮುಂಬೈನ ಕೊಲಾಬಾದ ಗೇಟ್‌ವೇ ಆಫ್ ಇಂಡಿಯಾ ಬಳಿಯಿಂದ ಎಲಿಫೆಂಟಾ ಕೇವ್ಸ್ ದ್ವೀಪಕ್ಕೆ ಪ್ರವಾಸಿಗರ ಬೋಟು ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ರಭಸದಿಂದ ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಇತ್ತ 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.

Add Asianetnews Kannada as a Preferred SourcegooglePreferred

ನೌಕಾಪಡೆಯ ಬೋಟು ಡಿಕ್ಕಿಯಾಗುತ್ತಿದ್ದಂತೆ ಪ್ರವಾಸಿಗರ ದೋಣಿ ಮುಳುಗಲು ಆರಂಭಿಸಿದೆ. ಡಿಕ್ಕಿಯಾದ ರಭಸದಲ್ಲಿ ಕೆಲ ಪ್ರವಾಸಿಗರು ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ಭಾರತೀಯ ನೌಕಾಡೆಯ ಇತರ ಬೋಟುಗಳು, ಕೋಸ್ಟಲ್ ಗಾರ್ಡ್ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರವಾಸಿಗರು ಸೇರಿದಂತೆ ಇತರರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. 

ಟಿಬಿ ಡ್ಯಾಂ ರೀತಿ ಪ್ರಕಾಶಂ ಬ್ಯಾರೇಜ್ ಹಾನಿ: 3 ದೋಣಿಗಳು ಡಿಕ್ಕಿ ಹೊಡೆದು ಬ್ಯಾರೇಜ್ ಗೇಟ್‌ ಪಿಲ್ಲರ್‌ಗೆ ಹಾನಿ

ಮುಂಬೈನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲಿಫಾಂಟಾ ಕೇವ್ಸ್ ಕೂಡ ಒಂದಾಗಿದೆ. ಇಂಡಿಯಾ ಗೇಟ್‌ನಿಂದ ಐದೈದು ನಿಮಿಷಕ್ಕೆ ಸರಿಸುಮಾರು 100 ಪ್ರವಾಸಿಗರು ಕರೆದೊಯ್ಯುವ ಸಾಮರ್ಥ್ಯದ ಬೋಟುಗಳು ತೆರಳುತ್ತದೆ. ಹೀಗೆ ನೀಲ್‌ಕಮಲ್ ಬೋಟು ಸಿಬ್ಬಂದಿಗಳು ಸೇರಿದಂತೆ 110 ಮಂದಿಯನ್ನು ಎಲಿಫಾಂಟ ಕೇವ್ಸ್‌ಗೆ ಕರೆದೊಯುತ್ತಿತ್ತು. ಕೆಲ ದೂರ ತೆರಳಿದಾಗ ಸಮುದ್ರದಲ್ಲಿ ನೌಕಾಪಡೆ ಬೋಟುಗಳು ಎಂಜಿನ್ ಟ್ರಯಲ್ ನಡೆಸುತ್ತಿತ್ತು. ಈ ವೇಳೆ ಸ್ಪೀಡ್ ಬೋಟಿನ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಸ್ಪೀಡ್ ಬೋಟು ವೇಗವಾಗಿ ಬಂದು ಪ್ರಯಾಣಿಕರ ಫೆರಿಗೆ ಡಿಕ್ಕಿಯಾಗಿದೆ.

ಈ ಅಪಘಾತದಲ್ಲಿ ನೌಕಾಪಡೆ ಅಧಿಕಾರಿ, ಪ್ರಯಾಣಿಕರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರಲ್ಲಿ 10 ನಾಗರೀಕರು ಹಾಗೂ ಮೂವರು ನೌಕಾಪಡೆ ಅಧಿಕಾರಿಗಳು ಸೇರಿದ್ದಾರೆ. ಘಟನೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಘಾತ ವ್ಯಕ್ತಪಡಿಸಿದ್ದಾರೆ. ದುರದೃಷ್ಟಕರ ಘಟನೆಗೆ ತೀವ್ರ ನೋವು ವ್ಯಕ್ತಪಡಿಸಿರುವ ರಾಜನಾಥ್ ಸಿಂಗ್ ಮೃತರ ಕುಟುಂಬ ಸಂತಾಪ ಸೂಚಿಸಿದ್ದಾರೆ.

Scroll to load tweet…

ಘಟನೆ ಕುರಿತು ನಾಗ್ಪುರದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಘಟನೆಯಿಂದ ನೋವಾಗಿದೆ. 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ. 13 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಯ 11 ಬೋಟುಗಳು, ಮರೀನ್ ಪೊಲೀಸ್ ಪಡೆಯ 3 ಬೋಟು ಹಾಗೂ ಕರಾವಳಿ ಪಡೆಯ ಬೋಟುಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರೆಗೆ ನಾಲ್ಕು ಹೆಲಿಕಾಪ್ಟನ್ನು ಬಳಸಿಕೊಳ್ಳಲಾಗಿದೆ.

ಇಂದು(ಡಿ.18) ಸಂಜೆ ಈ ಘಟನೆ ನಡೆದಿದೆ. ಆರಂಭದಲ್ಲಿ ಪ್ರವಾಸಿಗರ ಬೋಟು ಮುಳುಗಡೆಯಾಗುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿತ್ತು. ಹೀಗಾಗಿ ನೆರವಿಗೆ ಭಾರತೀಯ ನೌಕಾಪಡ, ಕೋಸ್ಟಲ್ ಗಾರ್ಡ್ ಸೇರಿದಂತೆ ಹಲವು ರಕ್ಷಣಾ ತಂಡಗಳು ಧಾವಿಸಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಬಹುತೇಕರ ರಕ್ಷಣೆ ಮಾಡಿದರೆ 13 ಮಂದಿ ಪ್ರಾಣ ಕಳೆದುಕೊಂಡಿದ್ದರು. ಪ್ರವಾಸಿಗರ ಬೋಟು ಮುಳುಗಡೆಗೆ ಕಾರಣ ನಿಗೂಢವಾಗಿತ್ತು. ಆದರೆ ಘಟನೆ ನಡೆದ 2 ಗಂಟೆಗಳ ಬಳಿಕ ಅಪಘಾತದ ದೃಶ್ಯಗಳು ಬಹಿರಂಗವಾಗಿತ್ತು. ಈ ವೇಳೆ ನೌಕಾಪಡೆಯ ಸ್ಪೀಡ್ ಬೋಟು ಡಿಕ್ಕಿಯಾಗಿದೆ ಅನ್ನೋ ಮಾಹಿತಿ ಬಹಿರಂಗವಾಗಿತ್ತು. ದುರಂತ ಘಟನೆಗೆ ಮುಂಬೈ ಪ್ರವಾಸೋದ್ಯಮವೂ ಬೆಚ್ಚಿ ಬಿದ್ದಿದೆ. ಪ್ರವಾಸಿಗರ ಕರೆದೊಯ್ಯುವ ನಡುವೆ ನೌಕಾಪಡೆ ಪ್ರಯೋಗ ಪರೀಕ್ಷೆ ನಡೆಸಿದ್ದೇಕೆ ಅನ್ನೋ ಆಕ್ರೋಶಗಳು ವ್ಯಕ್ತವಾಗುತ್ತಿದೆ.