ಭಾರತಕ್ಕೆ ಐಎಂಎಫ್ ಬಹುಪರಾಕ್: ಕೊರೋನಾ, ಆರ್ಥಿಕ ಪರಿಣಾಮ ನಿರ್ವಹಣೆಗೆ ಮೆಚ್ಚುಗೆ!
ಭಾರತಕ್ಕೆ ಐಎಂಎಫ್ ಬಹುಪರಾಕ್| ಕೊರೋನಾ, ಆರ್ಥಿಕ ಪರಿಣಾಮ ನಿರ್ವಹಣೆಗೆ ಮೆಚ್ಚುಗೆ| ಕೃಷಿ ಮಸೂದೆಗಳ ಪರವೂ ಜಾಗತಿಕ ಸಂಸ್ಥೆ ಬ್ಯಾಟಿಂಗ್
ವಾಷಿಂಗ್ಟನ್(ನ.16): ಮಾರಕ ಕೊರೋನಾ ವೈರಸ್ ವ್ಯಾಧಿ ಹಾಗೂ ಅದು ಸೃಷ್ಟಿಸಿದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಭಾರತ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅತೀವ ಮೆಚ್ಚುಗೆ ವ್ಯಕ್ತಪಡಿಸಿದೆ. ಆರ್ಥಿಕತೆಯ ರೂಪಾಂತರಕ್ಕೆ ಈ ವರ್ಷ ಇನ್ನಷ್ಟುಚುರುಕಿನ ಕ್ರಮಗಳನ್ನು ಕೈಗೊಳ್ಳುವಂತೆಯೂ ಹುರಿದುಂಬಿಸಿದೆ.
ಜಾಗತಿಕ ಮಾಧ್ಯಮಗಳ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸಲಿನಾ ಜಾರ್ಜೀವಾ, ಜ.26ರಂದು ಬಿಡುಗಡೆಯಾಗಲಿರುವ ಐಎಂಎಫ್ನ ವಿಶ್ವ ಆರ್ಥಿಕ ವರದಿಯಲ್ಲಿ ಭಾರತಕ್ಕೆ ಅಷ್ಟೇನೂ ಕೆಟ್ಟಅಂಶಗಳು ಇರುವುದಿಲ್ಲ. ಏಕೆಂದರೆ ಕೊರೋನಾ ಹಾಗೂ ಅದರ ಆರ್ಥಿಕ ಪರಿಣಾಮ ಎದುರಿಸಲು ಭಾರತ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಕೃಷಿ ಮಸೂದೆಗೆ ಬೆಂಬಲ:
ಭಾರತ ಸರ್ಕಾರ ಅಂಗೀಕರಿಸಿರುವ ಕೃಷಿ ಮಸೂದೆಗಳು ಕೃಷಿ ಕ್ಷೇತ್ರದ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ. ಈ ಸುಧಾರಣೆಯಿಂದಾಗಿ ಹೊಸ ವ್ಯವಸ್ಥೆಗೆ ಹೊರಳುವಾಗ ಪ್ರತಿಕೂಲ ಪರಿಣಾಮಕ್ಕೆ ಒಳಗಾಗುವವರಿಗಾಗಿ ಸಾಮಾಜಿಕ ಸುರಕ್ಷಾ ಜಾಲದ ಅವಶ್ಯಕತೆ ಇದೆ ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ತಿಳಿಸಿದ್ದಾರೆ.