ಪಶ್ಚಿಮ ಬಂಗಾಳ ಅಖಾಡಕ್ಕೆ ಕೊನೆ ಕ್ಷಣದಲ್ಲಿ ರಾಹುಲ್ ಪ್ರವೇಶ.. ಯಾವ ತಂತ್ರಗಾರಿಕೆ?
ಪಶ್ಚಿಮ ಬಂಗಾಳ ಚುನಾವಣೆ/ ಕೊನೆ ಕ್ಷಣದಲ್ಲಿ ಅಖಾಡಕ್ಕೆ ಇಳಿದ ರಾಹುಲ್ ಗಾಂಧಿ/ ಹೊಸ ಲೆಕ್ಕಾಚಾರ ಏನು/ ಕಾಂಗ್ರೆಸ್ ರಣನೀತಿಯೇನು? ಎಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ
ಡೆಲ್ಲಿ ಮಂಜು
ನವದೆಹಲಿ (ಏ. 13) ಕೊನೆಗೂ ಅಖಾಡಕ್ಕೆ ಇಳಿಯಲು ಕಾಂಗ್ರೆಸ್ ಯುವರಾಜ ಮನಸ್ಸು ಮಾಡಿದ್ದಾರೆ..ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಲ್ಕು ಹಂತಗಳ ಚುನಾವಣೆ ಮುಗಿದು ಕೂಡ ಹೋಗಿದೆ ಆದರೂ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮಾತ್ರ ಅತ್ತ ಕಡೆ ತಲೆಯೂ ಹಾಕಿಲ್ಲ. ನಮ್ಮ ಪಕ್ಷಕ್ಕೆ ಓಟು ಹಾಕಿ ಅಂತ ಮತದಾರರ ಮುಂದೆ ಮನವಿಯೂ ಮಾಡಿಲ್ಲ ಅನ್ನೋದೆ ದೆಹಲಿ ರಾಜಕೀಯ ಪಡೆಸಾಲೆಯಲ್ಲಿ ದೊಡ್ಡ ಚರ್ಚೆ.
ಕೇರಳ, ಅಸ್ಸಾಂ, ತಮಿಳುನಾಡು ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಈ ಬಾರಿ ಪೂರ್ತಿಯಾಗಿ ಬಿಜಿಯಾಗಿದ್ದರು. ರಾಹುಲ್ ಗಾಂಧಿ ಅವರ ಜೊತೆಗೆ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಕೂಡ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ನಾಲ್ಕು ಹಂತಗಳ ಚುನಾವಣೆ ಮುಗಿದರೂ ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ವಾದ್ರಾ ಅವರು ಈ ಕಡೆ ತಲೆ ಹಾಕಿಲ್ಲ. ಅದರೆ ಬಿಜೆಪಿ ಪಾಳಯದಿಂದ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ವಾರದಲ್ಲಿ ನಾಲೈದು ದಿನ ಪಶ್ಚಿಮ ಬಂಗಾಳದಲ್ಲಿ ಬೀಡುಬಿಟ್ಟು, ಗಲ್ಲಿ ಗಲ್ಲಿ ತಿರುಗಿ ಪ್ರಚಾರ ಮಡುತ್ತಿದ್ದಾರೆ ಅಂಥ ಹಿರಿಯ ಕಾಂಗ್ರೆಸ್ ಮುಖಂಡರು ಅಸಮಧಾನ ಹೊರಹಾಕುತ್ತಿದ್ದರು.
ಪ್ರಧಾನಿಗೆ ರಾಹುಲ್ ಬರೆದ ಪತ್ರದಲ್ಲಿ ಏನಿದೆ?
ನಕ್ಸಲ್ಬಾರಿಯಲ್ಲಿ ಪ್ರಚಾರ : ಕೊನೆಗೂ ಪಶ್ಚಿಮ ಬಂಗಾಳ ಕಾಂಗ್ರೆಸ್ಗೆ ಆ ಕ್ಷಣ ಕೂಡಿ ಬಂದು ಬಿಟ್ಟಿದೆ. 5ನೇ ಹಂತದ ಚುನಾವಣೆ ಪ್ರಚಾರ ಮಾಡಲು ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಅಖಾಡಕ್ಕೆ ಇಳಿಯುವುದು ಪಕ್ಕಾ ಆಗಿದೆ. ಏಪ್ರಿಲ್ 14 ಅಂದೆ ನಾಳೆ ರಾಹುಲ್ ಗಾಂಧಿ ಚುನಾವಣೆ ಪ್ರಚಾರಕ್ಕೆ ಹೋಗುವುದು ಖಚಿತಗೊಂಡಿದೆ. ಅದು ನಕ್ಸಲ್ ಚಳವಳಿ ಹುಟ್ಟಿದ ನಕ್ಸಲ್ಬಾರಿ ಮತ್ತು ಜೊಲ್ಪೋಕರ್ ಪ್ರದೇಶಗಳಲ್ಲಿ ನಡೆಯುವ ಎರಡು ಬಹಿರಂಗಸಭೆಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಆದರೆ ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕರು ಬೇರೆಯದ್ದೇ ವಾದ ಮುಂದಿಡುತ್ತಿದ್ದಾರೆ. 294 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಬಾರಿ 92 ಅಭ್ಯರ್ಥಿ ಕಣದಲ್ಲಿದ್ದಾರೆ. ಹೆಚ್ಚುಕಮ್ಮಿ 30 ರಿಂದ 35 ಸೀಟುಗಳು ಗೆಲ್ಲುವ ಮುನ್ಸೂಚನೆ ಇದೆ. ಚುನಾವಣೆಯ ಕೊನೆ ಹಂತಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚು ಇದೆ. ಅಂಥ ಕಡೆ ನಮ್ಮ ನಾಯಕ ರಾಹುಲ್ಗಾಂಧಿ ಪ್ರಚಾರ ಮಾಡಲಿದ್ದಾರೆ ಅಂತಾರೆ.